ಆ್ಯಪ್ನಗರ

ಉಡುಪಿಯಲ್ಲಿ ಶಿವರಾತ್ರಿ ಭಕ್ತಿ, ಶ್ರದ್ಧೆಯ ಸಂಭ್ರಮ

ಉಡುಪಿ ರಥಬೀದಿಯ ಮಹತೋಭಾರ ಶ್ರೀಅನಂತೇಶ್ವರ ಮತ್ತು ಶ್ರೀಚಂದ್ರವೌಳೀಶ್ವರ ದೇವಸ್ಥಾನದಲ್ಲಿ ಸೋಮವಾರ ವಿಶೇಷವಾದ ಶಿವರಾತ್ರಿಯನ್ನು ಭಕ್ತಿ, ಶ್ರದ್ಧೆ, ಸಂಭ್ರಮದಿಂದ ಆಚರಿಸಲಾಯಿತು.

ವಿಕ ಸುದ್ದಿಲೋಕ 8 Mar 2016, 3:49 pm
ಉಡುಪಿ: ಉಡುಪಿ ರಥಬೀದಿಯ ಮಹತೋಭಾರ ಶ್ರೀಅನಂತೇಶ್ವರ ಮತ್ತು ಶ್ರೀಚಂದ್ರವೌಳೀಶ್ವರ ದೇವಸ್ಥಾನದಲ್ಲಿ ಸೋಮವಾರ ವಿಶೇಷವಾದ ಶಿವರಾತ್ರಿಯನ್ನು ಭಕ್ತಿ, ಶ್ರದ್ಧೆ, ಸಂಭ್ರಮದಿಂದ ಆಚರಿಸಲಾಯಿತು.
Vijaya Karnataka Web
ಉಡುಪಿಯಲ್ಲಿ ಶಿವರಾತ್ರಿ ಭಕ್ತಿ, ಶ್ರದ್ಧೆಯ ಸಂಭ್ರಮ


ದೇವಳದ ಆಡಳಿತ ಮೊಕ್ತೇಸರ ಹಾಗೂ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಧ್ವಜಾರೋಹಣ ನೆರವೇರಿತು. ಅಗ್ನಿ ಜನನ, ಪ್ರಧಾನ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಅನ್ನ ಸಂತರ್ಪಣೆ ಮಹಾ ಪ್ರಸಾದ ಸ್ವೀಕರಿಸಿದರು.

ಭಕ್ತಾದಿಗಳು ಶಿವನಿಗೆ ಪ್ರಿಯವಾದ ಎಳ್ಳೆಣ್ಣೆ, ಸೀಯಾಳ, ಬಿಲ್ವಪತ್ರೆ, ರುದ್ರಾಭಿಷೇಕ ಸೇವೆ ಸಮರ್ಪಿಸಿದರು. ಶಿವರಾತ್ರಿ ವಿಶೇಷ ಪೂಜೆ, ಬಲಿ ಹಾಗೂ ಮಹಾರಂಗ ಪೂಜೆ ನಡೆಯಿತು.

ಬೆಳಗ್ಗೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತೃಪ್ತಿ ಜಿ. ಕಾಮತ್ ಕಾಪು ಮತ್ತು ಶಿಷ್ಯೆಯರಿಂದ ಅನಂತೇಶ್ವರ ದೇವಳದ ಪ್ರಾಕಾರದಲ್ಲಿ ಭರತನಾಟ್ಯ ಪ್ರದರ್ಶನ, ವಿದುಷಿ ಶುಭಶ್ರೀ ಮತ್ತು ಬಳಗದಿಂದ ಪಂಚ ವೀಣಾ ವಾದನ ಜರುಗಿತು.

ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ದಾಮೋದರ ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ, ಸುಪ್ರಭಾ ಆಚಾರ್ಯ ಮತ್ತು ಬಳಗದಿಂದ ಭಜನೆ ನಡೆಯಿತು.

ಮಾ. 11ರ ತನಕ ಪ್ರತಿ ದಿನ ಸಂಜೆ 6 ರಿಂದ 7 ರವರೆಗೆ ಆಯನೂರು ಮಧುಸೂದನ ಆಚಾರ್ಯರು ಮಧ್ವ ರಾಮಾಯಣ ವಿಷಯವಾಗಿ ಧಾರ್ಮಿಕ ಪ್ರವಚನ ನೀಡುವರು.

ಬನ್ನಂಜೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಪೆರಂಪಳ್ಳಿ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಮಣಿಪಾಲದ ಶಿವಪಾಡಿಯ ಶ್ರೀಉಮಾಮಹೇಶ್ವರ ದೇವಳದಲ್ಲಿ ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ