ಉಡುಪಿ: ಡಿವೈಎಸ್ಪಿ ಎಂ.ಕೆ.ಗಣಪತಿ ಆವರ ಸಾವಿನ ಹಿಂದಿರುವ ನಿಗೂಢತೆಯನ್ನು ಬಯಲುಗೊಳಿಸಬೇಕು. ಅವರ ಆತ್ಮಹತ್ಯೆಗೆ ಕಾರಣಕರ್ತರಾದವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಶನಿವಾರ ಉಡುಪಿಯಲ್ಲಿ ಪ್ರತಿಭಟನೆ ನಡೆಸಿತು.
ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಮುಂದಿನ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಪ್ರ.ಕಾ. ಅನ್ಸಾರ್ ಅಹ್ಮದ್ ಮಾತನಾಡಿ, ಡಿವೈಎಸ್ಪಿ ಅವರು ಆತ್ಮಹತ್ಯೆಗೆ ಇಂತಹವರ ಕಿರುಕುಳವೇ ಕಾರಣ ಎಂದು ಹೇಳಿಕೊಂಡಿದ್ದರೂ, ಆರೋಪಿಗಳ ಬಂಧನ ಇನ್ನೂ ನಡೆದಿಲ್ಲ. ಸಿದ್ದರಾಮಯ್ಯ ಸರಕಾರದಿಂದ ಪೊಲೀಸರಿಗೆ ಆತ್ಮಹತ್ಯೆ ಭಾಗ್ಯ ಜಾರಿಯಲ್ಲಿದ್ದಂತೆ ಕಾಣುತ್ತಿದೆ. ಈ ಆತ್ಮಹತ್ಯೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಯಲ್ಲಿ ಸರಕಾರ ಹಸ್ತಕ್ಷೇಪ ನಡೆಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಂಚಾಲಕ ಪ್ರಸನ್ನ ಶೆಟ್ಟಿ ಮಾತನಾಡಿ, ಇದುವರೆಗೆ 3 ಉನ್ನತ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿರುವುದು ಖೇದನೀಯ. ಈ ಎಲ್ಲ ಅಧಿಕಾರಿಗಳ ಆತ್ಮಹತ್ಯೆಯ ಹಿಂದೆ ರಾಜಕಾರಣಿಗಳು, ಮಂತ್ರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಜನತೆಯ ರಕ್ಷಣೆಗಾಗಿ ಪ್ರಾಣವನ್ನು ಮುಡಿಪಾಗಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸರಕಾರ ಮಾಡಬೇಕು. ಕಾನೂನು ರಕ್ಷಕರಿಗೇ ರಕ್ಷಣೆಯಿಲ್ಲದಂತಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರಾಜ್ಯದ ಜನತೆ ಸರಕಾರದ ವಿರುದ್ಧ ಸಿಡಿದೇಳುವ ದಿನ ದೂರವಿಲ್ಲಎಂದರು.
ವೇದಿಕೆಯ ಪದಾಧಿಕಾರಿಗಳಾದ ಸಂತೋಷ್ ಶೆಟ್ಟಿ, ಅಬ್ದುಲ್ ರೆಹ್ಮಾನ್, ಸುಶಾಂತ್ ಶೆಟ್ಟಿ, ಶಾಹಿಲ್ ರೆಹಮುತುಲ್ಲಾ, ಯಶೋಧರ ಮತ್ತಿತರರು ಉಪಸ್ಥಿತರಿದ್ದರು.