ಉಡುಪಿ: ನವ ಶಕ್ತಿ ವೈಭವ ನೃತ್ಯ ರೂಪಕ ಪ್ರದರ್ಶನದಲ್ಲಿ ಕಲಾವಿದರು ಆವೇಶಭರಿತರಾಗಿ ಕುಣಿಯುತ್ತಿದ್ದ ವೇಳೆ ನವ ದುರ್ಗೆ ವೇಷಧಾರಿಯೊಬ್ಬಳು ಕುಸಿದು ಬಿದ್ದಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.
ಉಡುಪಿ ಸಮೀಪದ ಮಲ್ಪೆಯ ಭಜನಾ ಮಂದಿರವೊಂದರ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನವಶಕ್ತಿ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಾಲ್ಕು ದಿನಗಳ ಹಿಂದೆ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ನವದುರ್ಗೆಯರ ಆರಾಧನೆ ಕುರಿತ ನೃತ್ಯ ರೂಪಕ ಮೂಡಿಬರುತ್ತಿದ್ದಂತೆ ಭದ್ರ ಕಾಳಿ ನೃತ್ಯ ಪ್ರಸ್ತುತಪಡಿಸಿದರೆ ಬಳಿಕ ಮಹಿಷಾಸುರ ಕುಣಿಯತೊಡಗಿದ. ಈ ಸಂದರ್ಭ ಬದಿಗಿದ್ದ ನವದುರ್ಗೆಯಲ್ಲೊಬ್ಬಳು ಕುಸಿದು ಬಿದ್ದಳು.
ಮಹಿಷನ ಕುಣಿತ ನೋಡುತ್ತಿದ್ದವರು ಕೆಲ ಕ್ಷಣ ನವದುರ್ಗೆ ಕುಸಿದುಬಿದ್ದಿದ್ದನ್ನು ಗಮನಿಸಲಿಲ್ಲ. ಕೊನೆಗೆ ಸಭೆಯಲ್ಲಿದ್ದ ಹಲವು ಮಂದಿ ಎದ್ದು ವೇದಿಕೆಯೇರಿ ನವದುರ್ಗೆ ಕಲಾವಿದೆಯನ್ನು ಎತ್ತಿ ಹಿನ್ನೆಲೆಗೆ ಒಯ್ದರು.
ಕೆಲ ಕ್ಷಣಗಳ ಬಳಿಕ ನೃತ್ಯ ರೂಪಕ ಮುಂದುವರಿದಿದ್ದು ಈ ಸಂದರ್ಭ ದೇವಿಯೂ ಆವೇಶಭರಿತಳಾಗಿ ಕುಣಿದಿದ್ದಾಳೆ. ಕಲಾವಿದೆ ಬಳಿಕ ಚೇತರಿಸಿಕೊಂಡಿದ್ದು ನೃತ್ಯ ರೂಪಕ ಪೂರ್ಣವಾಗಿದ್ದು ನೋಡುಗರು ನವಶಕ್ತಿ ವೈಭವ ಕಣ್ತುಂಬಿಕೊಂಡಿದ್ದರು.
ಕಾರಣ ಏನಿರಬಹುದು?: ಕಲಾವಿದೆ ಮಹಿಷಾಸುರನನ್ನು ಕಂಡು ಹೆದರಿದಳೇ? ಹಸಿವೆ/ಬಾಯಾರಿಕೆಯಿಂದ ತಲೆ ತಿರುಗಿ ಬಿದ್ದಳೇ? ನಿಜವಾಗಿಯೂ ಆವೇಶಭರಿತಳಾದಳೇ? ಎನ್ನುವ ಪ್ರಶ್ನೆಗಳ ನಡುವೆ ಒಂದು ನಿಮಿಷದ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವ್ಯಕ್ತಿ, ಗ್ರೂಪ್ಗಳ ನಡುವೆ ಕುಣಿದಾಡತೊಡಗಿದೆ.