ಆ್ಯಪ್ನಗರ

ವಿಶೇಷಚೇತನರಿಗೆ ಶಾಸಕರ ನಿಧಿಯಿಂದ ಶೇ.5 ಅನುದಾನ ಮೀಸಲು

ವಿಶೇಷಚೇತನ ಮಕ್ಕಳಿಗೆ ಸಹಾನುಭೂತಿಗಿಂತ ಸಮಾಜದ ಸಹಕಾರ ಹಾಗೂ ಗೌರವದ ಅವಶ್ಯವಿದೆ. ಈ ಮಕ್ಕಳ ಶ್ರೇಯೋಭಿವೃದ್ಧಿಗೆ ಸ್ಥಳೀಯ ಸಂಸ್ಥೆಯ ಅನುದಾನ ಹಾಗೂ ಶಾಸಕರ ನಿಧಿಯಲ್ಲಿ ಶೇ.5ರಷ್ಟು ಅನುದಾನ ಮೀಸಲಿಡುವ ಅವಕಾಶವಿದೆ. ಈ ನಿಟ್ಟಿನಲ್ಲಿ ವಿಶೇಷ ಮಕ್ಕಳ ಶಾಲೆಗೆ ಗರಿಷ್ಠ ಪ್ರಮಾಣದ ಅನುದಾನ ನೀಡಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದ್ದಾರೆ.

Vijaya Karnataka 16 Jun 2019, 5:00 am
ಉಡುಪಿ : ವಿಶೇಷಚೇತನ ಮಕ್ಕಳಿಗೆ ಸಹಾನುಭೂತಿಗಿಂತ ಸಮಾಜದ ಸಹಕಾರ ಹಾಗೂ ಗೌರವದ ಅವಶ್ಯವಿದೆ. ಈ ಮಕ್ಕಳ ಶ್ರೇಯೋಭಿವೃದ್ಧಿಗೆ ಸ್ಥಳೀಯ ಸಂಸ್ಥೆಯ ಅನುದಾನ ಹಾಗೂ ಶಾಸಕರ ನಿಧಿಯಲ್ಲಿ ಶೇ.5ರಷ್ಟು ಅನುದಾನ ಮೀಸಲಿಡುವ ಅವಕಾಶವಿದೆ. ಈ ನಿಟ್ಟಿನಲ್ಲಿ ವಿಶೇಷ ಮಕ್ಕಳ ಶಾಲೆಗೆ ಗರಿಷ್ಠ ಪ್ರಮಾಣದ ಅನುದಾನ ನೀಡಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದ್ದಾರೆ.
Vijaya Karnataka Web bhat


ಮಣಿಪಾಲ ಮಾಹೆ ಹಾಗೂ ಮಣಿಪಾಲ ಅರ್ಚನಾ ಟ್ರಸ್ಟ್‌ ಆಶ್ರಯದಲ್ಲಿ ಮಣಿಪಾಲ ಕೆಎಂಸಿಯ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ನಡೆದ ಮಣಿಪಾಲ ವಿಶೇಷ ಮಕ್ಕಳ ಪುನವರ್ಸತಿ ಕೇಂದ್ರ ಆಸರೆಯ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ವಿಶೇಷಚೇತನ ಮಕ್ಕಳನ್ನು ನೋಡಿಕೊಳ್ಳಲು ಶಾಲೆಯ ಕೊರತೆ ಇದ್ದು, ಇರುವ ಶಾಲೆಗಳಿಗೆ ಸೂಕ್ತ ಸಹಕಾರ ಸಿಗದೇ ಸೊರಗುತ್ತಿವೆ. ಈ ಸಮಸ್ಯೆ ನಿವಾರಣೆಗಾಗಿ ಸ್ಥಳೀಯ ಸಂಸ್ಥೆಯ ಅನುದಾನದಲ್ಲಿ ವಿಶೇಷ ಮಕ್ಕಳಿಗೆ ಶೇ.5ರಷ್ಟು ಮೀಸಲಿಡುವ ಬಗ್ಗೆ ಕೇಂದ್ರ ಸರಕಾರ ಕಾನೂನಿನಲ್ಲಿ ತಿದ್ದುಪಡಿ ತಂದಿದೆ. ಅದರಂತೆ ರಾಜ್ಯ ಸರಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ತಮ್ಮ ಬಜೆಟ್‌ನಲ್ಲಿ ಶೇ.5ರಷ್ಟು ಅನುದಾನವನ್ನು ವಿಶೇಷಚೇತನ ಮಕ್ಕಳಿಗೆ ತೆಗೆದಿಡಬೇಕಿದೆ. ಶಾಸಕರ ನಿಧಿಯಲ್ಲೂ ಶೇ.5ರಷ್ಟು ಅನುದಾನ ತೆಗೆದಿರಿಸಲಾಗಿದೆ ಎಂದರು.

ವಿಶೇಷಚೇತನ ಮಕ್ಕಳನ್ನು ನೋಡಿಕೊಳ್ಳುವ ಶಿಕ್ಷಕರಿಗೆ ತಾಳ್ಮೆ, ಪರಿಶ್ರಮ ಹಾಗೂ ತ್ಯಾಗ ಮನೋಭಾವನೆ ಅವಶ್ಯ. ಆ ಮಕ್ಕಳನ್ನು ಸರಿ ದಾರಿಗೆ ತಂದು, ಸಮಾಜದಲ್ಲಿ ಗೌರವಯುತವಾಗಿ ಜೀವನ ಸಾಗಿಸುವಲ್ಲಿ ಶಿಕ್ಷಕರ ಕೊಡುಗೆ ಬಹಳಷ್ಟಿದೆ. ಅಂತಹ ಶಿಕ್ಷಕರ ಶ್ರಮ ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಣಿಪಾಲ ಸಿಂಡಿಕೇಟ್‌ ಬ್ಯಾಂಕ್‌ನ ಮಹಾಪ್ರಬಂಧಕ ಭಾಸ್ಕರ್‌ ಹಂದೆ ಮಾತನಾಡಿ, ವಿಶೇಷಚೇತನ ಮಕ್ಕಳಿಗೆ ಆಸರೆ ಕಲ್ಪಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಿಸುವ ಕೆಲಸವನ್ನು ಆಸರೆ ಸಂಸ್ಥೆ ಮಾಡುತ್ತಿದ್ದು, ಇದು ಶ್ಲಾಘನೀಯ ಎಂದರು.

ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್‌, ವಿಶೇಷಚೇತನಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಈ ಮಕ್ಕಳಿಗಾಗಿ ಸರಕಾರ ಅನುಮತಿ ಕೊಟ್ಟರೆ ಅಂಬಲಪಾಡಿ ದೇವಳದಿಂದ ದೊಡ್ಡ ಮಟ್ಟದ ಅನುದಾನ ನೀಡುವುದಾಗಿ ತಿಳಿಸಿದರು.

ಜಿಲ್ಲೆಯ ವಿಶೇಷಚೇತನ ಸಂಸ್ಥೆಯಲ್ಲಿರುವ ಶಿಕ್ಷಕರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ವಿಶೇಷಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ. ಎಚ್‌.ಎಸ್‌. ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಪುರುಷೋತ್ತಮ್‌ ಶೆಟ್ಟಿ ಉಪಸ್ಥಿತರಿದ್ದರು. ಆಸರೆ ಸಂಸ್ಥೆಯ ಅಧ್ಯಕ್ಷ ಜೈ ವಿಠಲ್‌ ಕೆ.ಎಸ್‌. ಪ್ರಾಸ್ತಾವಿಕ ಮಾತನಾಡಿದರು. ಅರ್ಚನಾ ಟ್ರಸ್ಟ್‌ನ ರಂಗ ಪೈ ಸ್ವಾಗತಿಸಿದರು. ಆಸರೆ ಸಂಸ್ಥೆಯ ಪ್ರಕಾಶ್‌ಚಂದ್ರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ