ಆ್ಯಪ್ನಗರ

ರಜತಾದ್ರಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷ ಣೆ ಕುರಿತು ಜಾಗೃತಿ ಕಾರ್ಯಕ್ರಮ

ನಮ್ಮ ಮನೆಗೆ ವಿದ್ಯುತ್‌ ಸಂಪರ್ಕವಿಲ್ಲದ ಕಾರಣ ರಾತ್ರಿ ಓದಲು ಸಮಸ್ಯೆಯಾಗುತ್ತಿದೆ. ಶಾಲೆಗೆ ಬರಲು ಸರಿಯಾದ ರಸ್ತೆಯಿಲ್ಲ, ಮನೆಯ ಬಳಿ ಆಟವಾಡಲು ಮೈದಾನ ಇಲ್ಲ, ಮನೆಯಲ್ಲಿ ಶೌಚಾಲಯವೂ ಇಲ್ಲ....!

Vijaya Karnataka 22 Jan 2019, 5:00 am
ಉಡುಪಿ: ನಮ್ಮ ಮನೆಗೆ ವಿದ್ಯುತ್‌ ಸಂಪರ್ಕವಿಲ್ಲದ ಕಾರಣ ರಾತ್ರಿ ಓದಲು ಸಮಸ್ಯೆಯಾಗುತ್ತಿದೆ. ಶಾಲೆಗೆ ಬರಲು ಸರಿಯಾದ ರಸ್ತೆಯಿಲ್ಲ, ಮನೆಯ ಬಳಿ ಆಟವಾಡಲು ಮೈದಾನ ಇಲ್ಲ, ಮನೆಯಲ್ಲಿ ಶೌಚಾಲಯವೂ ಇಲ್ಲ....!
Vijaya Karnataka Web 11


ಹೌದು, ಇದು ಸೋಮವಾರ ಉಡುಪಿ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ, ಮೂಲಭೂತ ಸೌಕರ್ಯಗಳ ಸಮಸ್ಯೆ ಕುರಿತು ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಮಕ್ಕಳ ಹಕ್ಕುಗಳ ರಕ್ಷ ಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ನಾನಾ ಶಾಲೆಯ ಮಕ್ಕಳು ಸಲ್ಲಿಸಿದ ಅಹವಾಲುಗಳ ಸ್ಯಾಂಪಲ್‌ಗಳಿವು !

ಮಕ್ಕಳ ದೂರಿಗೆ ಸ್ಪಂದಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷ ಣಾ ಅಯೋಗದ ಸದಸ್ಯೆ ಡಾ. ವನಿತಾ ತೊರವಿ ಅವರು ಈ ಎಲ್ಲಾ ಅಹವಾಲುಗಳಿಗೆ ಸೂಕ್ತ ರೀತಿಯಲ್ಲಿ, ಅತ್ಯಂತ ಶೀಘ್ರವಾಗಿ ಸ್ಪಂದಿಸಿ, ಪರಿಹಾರ ಒದಗಿಸುವಂತೆ ಹಾಗೂ ಈ ಬಗ್ಗೆ ಆಯೋಗಕ್ಕೆ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಏನೆಲ್ಲಾ ದೂರುಗಳು ? : ಶಾಲಾ ವಿದ್ಯಾರ್ಥಿ ಮಣಿಕಂಠ ಮಾತನಾಡಿ, ರಾಹುಲ್‌ ನಗರದಲ್ಲಿ ವಾಸವಾಗಿರುವ ತನ್ನ ಮನೆಯಲ್ಲಿ ಶೌಚಾಲಯವಿಲ್ಲ. ನಮಗೆ ಶೌಚಾಲಯ ಒದಗಿಸಿಕೊಡಿ ಎಂಬ ಮನವಿಗೆ ಉತ್ತರಿಸಿದ ಡಾ.ವನಿತ ತೋರ್ವಿ ಅವರು ಈ ಕುರಿತಂತೆ ಬಾಲಕನ ಮನೆಯ ವಿಳಾಸವನ್ನು ಪತ್ತೆ ಮಾಡಿ ಸೂಕ್ತ ಕ್ರಮಕ್ಕೆ ಸೂಚಿಸಿದರು.

ನೇತಾಜಿ ನಗರದ 8 ನೇ ತರಗತಿ ವಿದ್ಯಾರ್ಥಿ ದೀಪಕ್‌ ಮಾತನಾಡಿ, ತಾನು ಶಾಲೆಗೆ ಬರುವ ರಸ್ತೆ ಸರಿ ಇಲ್ಲ. ಇದರಿಂದಾಗಿ ಬೈಕ್‌ ಸ್ಕಿಡ್‌ ಆಗಿ ಹಲವಾರು ಮಂದಿ ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಮನೆ ಬಳಿ ಆಟವಾಡಲು ಮೈದಾನವೂ ಇಲ್ಲ ಎಂದು ಅಹವಾಲು ನೀಡಿದನು. ಈ ಕುರಿತಂತೆ ಉತ್ತರಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಅವರು ಇದು ಬಡಗಬೆಟ್ಟು ಪಂಚಾಯತ್‌ ವ್ಯಾಪ್ತಿಗೆ ಬರುತ್ತಿದ್ದು, ಇಲ್ಲಿ ವಸತಿ ನಿವೇಶನಕ್ಕೆ ಜಾಗ ಕಾಯ್ದಿರಿಸಲಾಗಿದೆ. ಇಲ್ಲಿ ಯಾವ ಯೋಜನೆಯಡಿ ರಸ್ತೆ ನಿರ್ಮಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಿ, ವಸತಿ ನಿವೇಶನ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಟದ ಮೈದಾನಕ್ಕೆ ಜಾಗ ಮೀಸಲಿಡುವಂತೆ ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದರು.

ಸರಳೇಬೇಟ್ಟು ಸಮೀಪದ ಬಿಜಾಪುರ ಕಾಲೋನಿಯಲ್ಲಿರುವ ತಮ್ಮ ಮನೆಗೆ ವಿದ್ಯುತ್‌ ಸಂಪರ್ಕವಿಲ್ಲ ಎಂದು ವಿದ್ಯಾರ್ಥಿಗಳಾದ ಮಂಜು ಮತ್ತು ರುಕ್ಮಿಣಿ ಅವರು ಇದು ನಮ್ಮ ಓದಿಗೆ ಅಡ್ಡಿಯಾಗುತ್ತಿದೆ ಎಂದರು, ವಲಸಿಗರ ಕಾಲೋನಿ ನಿವಾಸಿಗಳಿಗೆ ಸೂಕ್ತ ದಾಖಲೆ ಇಲ್ಲದ ಕಾರಣ ವಿದ್ಯುತ್‌ ಸಂಪರ್ಕ ನೀಡಲು ಅಡಚಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ ಸೇರಲು ಇಚ್ಚಿಸಿದಲ್ಲಿ ಪೋಷಕರ ಮನ ಒಲಿಸಿ ಹಾಸ್ಟೆಲ್‌ಗೆ ಸೇರ್ಪಡೆ ಮಾಡುವಂತೆ ಡಾ.ವನಿತಾ ತೊರವಿ ಅಧಿಕಾರಿಗಳಿಗೆ ತಿಳಿಸಿದರು.

ಶಾಲೆಗಳಲ್ಲಿ ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷ ಕರ ನಿಯೋಜನೆ ಆಗಲಿ, ಹೆಚ್ಚುವರಿ ಶಿಕ್ಷ ಕರ ಕೊರತೆ ಆಗದಂತೆ ಡಿಡಿಪಿಐ ಕ್ರಮ ವಹಿಸುವಂತೆ ಹಾಗೂ ಯಾವುದೇ ಮಗು ಶಾಲೆಯಿಂದ ಹೊರಗುಳಿದು ಶಿಕ್ಷ ಣದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸುವಂತೆ ಅವರು ಶಿಕ್ಷ ಣ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷ ಣೆ ಕುರಿತಂತೆ, ಮಣಿಪಾಲದ ಪ್ರಸನ್ನ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಉಪನ್ಯಾಸಕಿ ಐಡಾ ಡಿಸೋಜ ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ. ರೂಪೇಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಎನ್‌. ಗೊನ್ಸಾಲ್ವಿಸ್‌, ಜಿಲ್ಲಾ ಮಕ್ಕಳಾ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣ್‌, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮೋಹನ್‌ ಉಪಸ್ಥಿತರಿದ್ದರು.ಉಡುಪಿ ತಾಲೂಕು ಶಿಶು ಅಭಿವೃಧ್ದಿ ಯೋಜನಾಧಿಕಾರಿ ವೀಣಾ ಸ್ವಾಗತಿಸಿ, ಜಿಲ್ಲಾ ಮಕ್ಕಳ ರಕ್ಷ ಣಾ ಘಟಕದ ಕಾನೂನು ಪರಿವೀಕ್ಷ ಣಾಧಿಕಾರಿ ಪ್ರಭಾಕರ್‌ ಆಚಾರ್‌ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ