ಆ್ಯಪ್ನಗರ

ಬೈಕ್‌ನಲ್ಲೇ ತ್ರಿರಾಷ್ಟ್ರ ಪ್ರವಾಸ

ಉಡುಪಿ ಜಿಲ್ಲೆಯ ಕಾಪುವಿನ ಇಬ್ಬರು ಯುವಕರು ತಮ್ಮ ಬೈಕ್‌ಗಳಲ್ಲಿ ಭಾರತ, ನೇಪಾಳ, ಭೂತಾನ್‌ ದೇಶಗಳ ಪ್ರವಾಸ ಕೈಗೊಂಡಿದ್ದಾರೆ.

Vijaya Karnataka 28 Jul 2018, 2:48 pm
ಕಟಪಾಡಿ: ಉಡುಪಿ ಜಿಲ್ಲೆಯ ಕಾಪುವಿನ ಇಬ್ಬರು ಯುವಕರು ತಮ್ಮ ಬೈಕ್‌ಗಳಲ್ಲಿ ಭಾರತ, ನೇಪಾಳ, ಭೂತಾನ್‌ ದೇಶಗಳ ಪ್ರವಾಸ ಕೈಗೊಂಡಿದ್ದಾರೆ.
Vijaya Karnataka Web bikr


ಭಾರತ, ನೇಪಾಳ, ಭೂತಾನ್‌ ದೇಶಗಳ ಜನಜೀವನ, ಸಂಸ್ಕೃತಿ, ಆಹಾರ ಪದ್ಧತಿಗಳ ಬಗ್ಗೆ ಆಧ್ಯಯನ ಯುವಕರ ಪ್ರವಾಸದ ಉದ್ದೇಶ. ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ ಕಾಪು ಮಲ್ಲಾರಿನ ಸಚಿನ್‌ ಶೆಟ್ಟಿ ಮತ್ತು ಆತನ ಸ್ನೇಹಿತ ಕಾಪು ಹಳೆಮಾರಿಗುಡಿ ಬಳಿ ನಿವಾಸಿ ಅಭಿಷೇಕ್‌ ಶೆಟ್ಟಿ ಜತೆಗೂಡಿ ಕೈಗೊಳ್ಳಲಿರುವ ಈ ಸಾಹಸಕ್ಕೆ 'ಗೋ ಹಿಮಾಲಯನ್‌' ಎಂದು ಹೆಸರಿಟ್ಟುಕೊಂಡಿದ್ದಾರೆ.

ಕಾಪುವಿನಿಂದ ಹೊರಟು ಮಹಾರಾಷ್ಟ್ರದ ಸತಾರಾ ಮೂಲಕ ಮುಂಬಯಿ, ಬಳಿಕ ಮಧ್ಯಪ್ರದೇಶದ ಇಂಧೋರ್‌, ಉತ್ತರ ಪ್ರದೇಶದ ಝಾನ್ಸಿ, ಲಖನೌ, ನೇಪಾಳದ ಸನೌಲಿ, ಕಾಠ್ಮಂಡು, ಭೂತಾನ್‌ನ ತಿಂಪು, ಅಸ್ಸಾಂನ ಗುವಾಹಾಟಿ, ನಾಗಾಲ್ಯಾಂಡ್‌ನ ಕೋಹಿಮಾ, ಮಣಿಪುರದ ಇಂಫಾಲ್‌, ಮೇಘಾಲಯದ ಶಿಲ್ಲಾಂಗ್‌, ಪಶ್ಚಿಮ ಬಂಗಾಲದ ಸಿಲಿಗುರಿ, ಕೋಲ್ಕೊತಾ, ಒರಿಶಾದ ಪುರಿ, ಆಂಧ್ರಪ್ರದೇಶದ ವಿಶಾಖಪಟ್ಟಣ, ವಿಜಯವಾಡ, ಕರ್ನಾಟಕದ ಬೆಂಗಳೂರು, ಮಂಗಳೂರು ಮೂಲಕ ಕಾಪು ತಲುಪಲಿದ್ದಾರೆ.

ಒಟ್ಟು 40 ದಿನಗಳ ಈ ಯಾತ್ರೆಯಲ್ಲಿ 13,560 ಕಿ.ಮೀ. ಕ್ರಮಿಸಲಿದ್ದಾರೆ. ಸಚಿನ್‌ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌, ಅಭಿಷೇಕ್‌ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಬೈಕ್‌ಗಳಲ್ಲಿತಮ್ಮ ಪ್ರಯಾಣ ಬೆಳೆಸುತ್ತಿದ್ದಾರೆ.

ಕಳೆದ ಬಾರಿ ಲೈಟ್ಸ್‌ ಕ್ಯಾಮೆರಾ ಲಡಾಕ್‌: ಕಳೆದ ಬಾರಿ ಸಚಿನ್‌ ಶೆಟ್ಟಿ ಒಬ್ಬಂಟಿಯಾಗಿ ಬೈಕ್‌ನಲ್ಲಿ 'ಲೈಟ್ಸ್‌ ಕ್ಯಾಮೆರಾ ಲಡಾಕ್‌' ಹೆಸರಿನಲ್ಲಿ 11 ಸಾವಿರ ಕಿ.ಮೀ. ದೂರದ ಲಡಾಕ್‌ ಯಾತ್ರೆ ಕೈಗೊಂಡು, ನಾನಾ ರಾಜ್ಯಗಳ ಜೀವನ ಪದ್ಧತಿ ಹಾಗೂ ಆಹಾರ ಪದ್ಧತಿಗಳ ಕುರಿತ ಅಧ್ಯಯನ ನಡೆಸಿ ಸಾಕ್ಷ್ಯಚಿತ್ರ ನಿರ್ಮಿಸಿದ್ದರು. ಈ ಬಾರಿ ಮಿತ್ರರಿಬ್ಬರು ಜತೆಯಾಗಿರುವುದರಿಂದ ಹೆಚ್ಚಿನ ವಿಷಯ ಸಂಗ್ರಹ ಮಾಡಲು ಅನುಕೂಲವಾಗಲಿದೆ.

ಸಚಿನ್‌ ಶೆಟ್ಟಿ ಅತ್ಯುತ್ತಮ ಛಾಯಾಗ್ರಾಹಕನಾಗಿದ್ದು, ಕನ್ನಡ ಹಾಗೂ ತುಳು ಚಲನಚಿತ್ರಗಳಿಗೂ ಛಾಯಾಗ್ರಹಣ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಅಮ್ಮೆರ್‌ ಪೊಲೀಸ್‌' ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಈ ಹವ್ಯಾಸಿ ಬೈಕ್‌ ರೈಡರ್‌ ಸೌತ್‌ ಕೆನರಾ ಪೊಟೋಗ್ರಾಫರ್ಸ್‌ ಅಸೋಸಿಯೇಶನ್‌ನ ಕಾಪು ವಲಯದ ಸಕ್ರಿಯ ಸದಸ್ಯರಾಗಿದ್ದಾರೆ.

ಕಾಪು ಶಾಸಕರಿಂದ ಚಾಲನೆ

ಕಾಪು ಹೊಸ ಮಾರಿಯಮ್ಮ ದೇವಸ್ಥಾನದ ಎದುರು ಶುಕ್ರವಾರ ಬೆಳಗ್ಗೆ ಶಾಸಕ ಲಾಲಾಜಿ ಆರ್‌. ಮೆಂಡನ್‌ ಯುವಕರಿಗೆ ಹೂ ಹಾರ ಹಾಕಿ 'ಗೋ ಹಿಮಾಲಯನ್‌' ಪ್ರವಾಸಕ್ಕೆ ಚಾಲನೆ ನೀಡಿದರು.

ಈ ಯುವಕರ ಸಾಧನೆ ರಾಷ್ಟ್ರಕ್ಕೆ ಮಾದರಿಯಾಗಲಿ. ಈ ಯಾತ್ರೆ ಇನ್ನಷ್ಟು ಯುವಕರಿಗೆ ಪ್ರೇರಣೆಯಾಗಬೇಕು. ಈ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿದರು.

ಕಾಪು ಎಸ್‌ಐ ನಿತ್ಯಾನಂದ ಗೌಡ, ಸಮಾಜ ಸೇವಕ ಲೀಲಾಧರ ಶೆಟ್ಟಿ, ಸೌತ್‌ ಕೆನರಾ ಫೊಟೋಗ್ರಾಫರ್ಸ್‌ ಅಸೋಸಿಯೇಶನ್‌ ಕಾಪು ವಲಯದ ಅಧ್ಯಕ್ಷ ಉದಯ ಪೂಜಾರಿ, ಕಾರ್ಯದರ್ಶಿ ವೀರೇಂದ್ರ ಶಿರ್ವ, ಕೋಶಾಧಿಕಾರಿ ಸಂತೋಷ್‌ ಕಾಪು, ಶ್ರೀಧರ ಶೆಟ್ಟಿಗಾರ, ಪ್ರವೀಣ್‌ ಕುರ್ಕಾಲು, ಸಚಿನ್‌ ಉಚ್ಚಿಲ, ರವಿಕುಮಾರ್‌ ಉದ್ಯಾವರ, ಸಂತೋಷ್‌ ಶೆಟ್ಟಿಗಾರ್‌ ಮತ್ತು ಸದಸ್ಯರು, ಯುವಕರ ಕುಟುಂಬಿಕರು,ಮಿತ್ರರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಸುಮಾರು 2.5 ಲಕ್ಷ ರೂ. ಖರ್ಚಾಗಲಿದ್ದು, ಇದಕ್ಕೆ ಹಲವು ಮಂದಿ ಪ್ರಾಯೋಜಕತ್ವ ವಹಿಸಿದ್ದಾರೆ. ಯಾತ್ರೆಯ ಸಂಪೂರ್ಣ ಚಿತ್ರೀಕರಣ ನಡೆಸಿ ಆದರ ವೀಡಿಯೋವನ್ನು ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಿದ್ದೇವೆ. ಈ ಪ್ರವಾಸದ ವೇಳೆ ಅಲ್ಲಲ್ಲಿ ನಮ್ಮ ಮಿತ್ರರು ನಮ್ಮೊಂದಿಗೆ ಜತೆಗೂಡಲಿದ್ದಾರೆ. -ಸಚಿನ್‌ ಶೆಟ್ಟಿ, ಬೈಕ್‌ ಪ್ರವಾಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ