ಆ್ಯಪ್ನಗರ

ದೇವರಿಗೆ ಕೈಮುಗಿದು ಕಳ್ಳತನ ಎಸಗಿದ ಚೋರರು

ದೇವಳದ ಕಳವು ಕೃತ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಭಾನುವಾರ ತಡರಾತ್ರಿ 1.10ಗಂಟೆಗೆ ದೇವಳ ಪ್ರವೇಶಿಸಿರುವ ನಾಲ್ವರು ಮುಸುಕುಧಾರಿಗಳು ಸತ್ಯಗಣಪತಿ ದೇವರಿಗೆ ಆರಂಭದಲ್ಲಿ ಕೈಮುಗಿದಿದ್ದಾರೆ.

Vijaya Karnataka Web 19 Mar 2019, 10:58 am
ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಗ್ರಾಮದ ಮಲ್ಯಾಡಿ ಶ್ರೀ ಮಹಾದೇವಿ ನಂದಿಕೇಶ್ವರ ಸತ್ಯಗಣಪತಿ ಸಪರಿವಾರ ದೇವಸ್ಥಾನದಲ್ಲಿ ಕಳವು ನಡೆದಿದೆ. ಸೋಮವಾರ ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದೆ. ಚೋರರು ಕೃತ್ಯ ಎಸಗುವ ಮೊದಲು ದೇವರಿಗೆ ಕೈಮುಗಿದಿರುವುದು ಸಿಸಿ ಟಿವಿ ಪೂಟೆಜ್‌ನಲ್ಲಿ ದಾಖಲಾಗಿದೆ.
Vijaya Karnataka Web CCTV


ಕಾಣಿಕೆ ಡಬ್ಬಿ ಕಳವು: ಕಳ್ಳರು ದೇವಸ್ಥಾನದ ನಾಲ್ಕು ಕಾಣಿಕೆ ಡಬ್ಬಿ ಕಳವುಗೈದಿದ್ದಾರೆ. ಅದರಲ್ಲಿ ಮಾಹಾದೇವಿ ದೇವರ ಎದುರಿನ 2 ಕಾಣಿಕೆ ಡಬ್ಬಿ, ಸತ್ಯಗಣಪತಿ ದೇವರ 1 ಕಾಣಿಕೆ ಡಬ್ಬಿ, ಹಾಯ್ಗುಳಿ ದೈವದ 1 ಡಬ್ಬಿ ಕದ್ದಿದ್ದಾರೆ. ನಾಲ್ಕು ಕಾಣಿಕೆ ಡಬ್ಬಿ ಸೇರಿಸಿದರೆ ಅಂದಾಜು ರೂ.30 ಸಾವಿರ ನಗದು ಕಳ್ಳತನ ಆಗಿರಬಹುದು ಎಂದು ದೇವಳದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲು: ದೇವಳದ ಕಳವು ಕೃತ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಭಾನುವಾರ ತಡರಾತ್ರಿ 1.10ಗಂಟೆಗೆ ದೇವಳ ಪ್ರವೇಶಿಸಿರುವ ನಾಲ್ವರು ಮುಸುಕುಧಾರಿಗಳು ಸತ್ಯಗಣಪತಿ ದೇವರಿಗೆ ಆರಂಭದಲ್ಲಿ ಕೈಮುಗಿದಿದ್ದಾರೆ. ಗರ್ಭಗುಡಿ ಪ್ರವೇಶಿಸುವ ಪ್ರಯತ್ನ ಚೋರರ ಪೈಕಿ ಒಬ್ಬ ನಡೆಸಿದಾಗ ಹಿಂದಿನಿಂದ ಇನ್ನೊಬ್ಬ ಎಳೆದಿದ್ದಾನೆ. ನಂತರ 4 ಕಾಣಿಕೆ ಡಬ್ಬಿ ಕದ್ದೊಯ್ದಿದ್ದಾರೆ. 1.30ಗಂಟೆಯೊಳಗೆ 22 ನಿಮಿಷದಲ್ಲಿ ಕೃತ್ಯ ಎಸಗಿ ಉಳ್ತೂರಿನ ಕಡೆಗೆ ಮಾರುತಿ ಸ್ವಿಪ್ಟ್‌ ಡಿಸೈರ್‌ ಕಾರಿನಲ್ಲಿ ಪಯಣ ಬೆಳೆಸಿರುವುದು ಸಿಸಿ ಟಿವಿ ಫೂಟೇಜ್‌ನಲ್ಲಿ ಕಂಡುಬಂದಿದೆ.

ಇತ್ತೀಚೆಗಷ್ಟೇ ತೆರವು:
ಮಲ್ಯಾಡಿ ಭಾಗದಲ್ಲಿ ಪ್ರಸಿದ್ಧವಾಗಿರುವ ಸಾನ್ನಿಧ್ಯ ಇದಾಗಿದ್ದು ಇತ್ತೀಚೆಗಷ್ಟೇ ಕಾಣಿಕೆ ಡಬ್ಬಿಯ ಹುಂಡಿ ಲೆಕ್ಕಾಚಾರ ನಡೆಸಲಾಗಿತ್ತು. ಇದರಿಂದ ಹೆಚ್ಚಿನ ಮೊತ್ತ ಕಳ್ಳರ ಕೈ ಸೇರಿಲ್ಲ. ಕಾಣಿಕೆಗಿಂತ ಡಬ್ಬಿಯ ಮೌಲ್ಯವೇ ಹೆಚ್ಚಿನದ್ದು. ಗೋದ್ರೆಜ್‌ ಕಂಪನಿಗೆ ಸೇರಿದ ಲಕ್ಷ ಬೆಲೆ ಬಾಳುವ ಭಾರಿ ಭದ್ರತೆಯ ಕಾಣಿಕೆ ಡಬ್ಬಿಯಾಗಿದೆ.

ಬೆರಳಚ್ಚು ತಜ್ಞರ ಭೇಟಿ:
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ತಂಡದವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಟ ಪಿಎಸ್‌ಐ ಮಹಮ್ಮದ್‌ ರಫೀಕ್‌ ದೇವಳದ ಪ್ರಮುಖರಿಂದ ಮಾಹಿತಿ ಪಡೆದು ಸಿಸಿ ಟಿವಿ ಪೂಟೆಜ್‌ ಪರಿಶೀಲಿಸಿದ್ದಾರೆ. ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ