* ನಾಗೇಶ್ ಗಾಣಿಗ ಸಿದ್ದಾಪುರ
ಕಡು ಬೇಸಿಗೆ ಸಮಯದಲ್ಲಿ ತಾಪಮಾನದ ಹೊಡೆತದಿಂದಾಗಿ ಅವಧಿಗೆ ಮುನ್ನವೆ ನದಿ, ಕೆರೆ, ಬಾವಿಗಳು ಬತ್ತಿ ಹೋಗುತ್ತಿವೆ. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಿಗಂತೂ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಕಿ.ಮೀ. ದೂರದ ವರೆಗೂ ಕೊಡಪಾನ ಹಿಡಿದು ಅಲೆದಾಡುವ ಪರಿಸ್ಥಿತಿ ಇದೆ. ಕುಡಿಯುವ ನೀರಿಗಾಗಿ ವರುಣರಾಯನ ಮೊರೆ ಹೋಗುವ ದಿನ ಸನ್ನಿಹಿತವಾಗಿದೆ.
ಕುಂದಾಪುರ ತಾಲೂಕಿನ ಹಳ್ಳಿಹೊಳೆ ಗ್ರಾಪಂ ವ್ಯಾಪ್ತಿಯ ಎತ್ತರ ಪ್ರದೇಶಗಳಲ್ಲಿ ವಾಸಿಸುವ ಕೆರ್ಕಾಡು, ಬರೆಗುಂಡಿ, ಸುಳಗೋಡು, ಕೂಡಿಗೆ ಮುಂತಾದ ಕಡೆಗಳಲ್ಲಿ ದಿನದಿಂದ ದಿನಕ್ಕೆ ನೀರಿಗೆ ತತ್ವಾರ ಉಂಟಾಗುತ್ತಿದೆ. ಎಡ ಬಲಗಳಲ್ಲಿ ಚಕ್ರಾ ಮತ್ತು ಕುಬ್ಜಾ ನದಿಗಳಿದ್ದರೂ, ಇಲ್ಲಿನ ಕುಟುಂಬಗಳಿಗೆ ವರ್ಷಪೂರ್ತಿ ಕುಡಿಯುವ ನೀರಿನದ್ದೆ ಸಮಸ್ಯೆಯಾಗಿದೆ.
ಈ ಪ್ರದೇಶದಲ್ಲಿ ಸುಮಾರು 60-70 ಕುಟುಂಬಗಳಿವೆ. 2013-14ರಲ್ಲಿ ಈ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಪೂರೈಕೆಯ ಬಗ್ಗೆ ಅನುಮೋದನೆ ದೊರೆತಿದ್ದು, ಅಂದಿನ ದಿನಗಳಲ್ಲಿ ಅರ್ಧಂಬರ್ಧ ಪೈಪ್ಲೈನ್ ಕಾಮಗಾರಿ ಕೂಡ ಆಗಿದೆ. ಆದರೆ ಇದುವರೆಗೂ ಕಾಮಗಾರಿ ಪೂರ್ತಿಯಾಗದೆ ನೀರು ಪೂರೈಸುವ ಕಾರ್ಯ ನಡೆದಿಲ್ಲ. ಹಲವಾರು ಬಾರಿ ಸ್ಥಳಿಯ ಜನಪ್ರತಿನಿಧಿಗಳಿಗೆ ಹಾಗೂ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪರಿಹಾರವಾಗಿಲ್ಲ ಎಂದು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗುಡ್ಡ ಪ್ರದೇಶದ ನಿವಾಸಿಗಳು ತಿಳಿಸುತ್ತಾರೆ.
ಕೋಟ್:::::::::::
ನಾವು ವಾಸಿಸುವ ಪ್ರದೇಶ ಎತ್ತರದಲ್ಲಿದ್ದು, ನದಿ ಪಾತ್ರದ ಅಂಚಿನಲ್ಲಿದ್ದೇವೆ. ಹೆಸರಿಗೆ ಮಾತ್ರ ನಮಗೆ ಎಡ-ಬಲಗಳಲ್ಲಿ ಚಕ್ರಾ ಹಾಗೂ ಕುಬ್ಜಾ ನದಿಗಳು ಇವೆ. ಆದರೆ ವರ್ಷವಿಡಿ ನೀರಿನದ್ದೆ ಸಮಸ್ಯೆ ಕಾಡುತ್ತಿದೆ. ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದ್ದರೂ ಬೇಸಿಗೆಯಲ್ಲಂತೂ ಪರಿಸ್ಥಿತಿ ಹೇಳತೀರದು. ಹಲವಾರು ಬಾರಿ ಸ್ಥಳೀಯಾಡಳಿತಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಕಲಾಗಿದೆ. ಆದರೆ ಇದುವರೆಗೂ ಪರಿಹಾರ ಮಾತ್ರ ಸಿಕ್ಕಿಲ್ಲ.
-ಸಂಜು ಮಡಿವಾಳ, ಭೂತನಾಡಿ ಹಳ್ಳಿಹೊಳೆ
ಕೋಟ್::::::::::
ಈ ಪ್ರದೇಶಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಪೂರೈಸುವ ಬಗ್ಗೆ 2013-14ರಲ್ಲೆ ಅನುಮೋದನೆಯಾಗಿದ್ದು ಇದುವರೆಗೂ ಪೈಪ್ಲೈನ್ ಕಾಮಗಾರಿ ಪೂರ್ತಿಯಾಗದ ಕಾರಣ ಸಮರ್ಪಕವಾಗಿ ನೀರು ಪೂರೈಸಲು ಅಡ್ಡಿಯಾಗಿದೆ. ಇದರ ಬಗ್ಗೆ ಕ್ಷೇತ್ರದ ಶಾಸಕರ ಗಮನಕ್ಕೆ ತರಕಲಾಗಿದೆ.
-ಶಿವರಾಮ ಪೂಜಾರಿ, ಹಳ್ಳಿಹೊಳೆ ಗ್ರಾಪಂ ಸದಸ್ಯರು
ಕೋಟ್::::::::::
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಸ್ಥಳೀಯಾಡಳಿತದಿಂದ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ತುರ್ತು ಪರಿಹಾರಕ್ಕಾಗಿ ಗುಡ್ಡ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸುತ್ತಿದ್ದೇವೆ.
-ಸುದರ್ಶನ್, ಪಂಚಾಯಿತಿ ಪಿಡಿಒ, ಹಳ್ಳಿಹೊಳೆ