ಆ್ಯಪ್ನಗರ

ದೊಡ್ಡ ಮೇಳ ತೆರೆಯ ಮರೆಗೆ, ಚಿಕ್ಕ ಮೇಳ ಬಂತು ಮನೆಬಾಗಿಲಿಗೆ

ಪತ್ತನಾಜೆಗೆ ಯಕ್ಷಗಾನ ಮೇಳಗಳೆಲ್ಲಾ ತೆರೆಯ ಮರೆಗೆ ಸರಿದರೆ ಮಳೆಯ ನಡುವೆ ಮನೆ ಬಾಗಿಲಿಗೆ ಬರುತ್ತಿರುವ ಚಿಕ್ಕಮೇಳಗಳೀಗ ಯಕ್ಷಗಾನದ ಕಂಪು ಬೀರುತ್ತಿವೆ.

Vijaya Karnataka 13 Jun 2018, 2:41 pm
ಎಸ್‌. ಜಿ. ಕುರ್ಯ ಉಡುಪಿ
Vijaya Karnataka Web chikka mela


ಪತ್ತನಾಜೆಗೆ ಯಕ್ಷಗಾನ ಮೇಳಗಳೆಲ್ಲಾ ತೆರೆಯ ಮರೆಗೆ ಸರಿದರೆ ಮಳೆಯ ನಡುವೆ ಮನೆ ಬಾಗಿಲಿಗೆ ಬರುತ್ತಿರುವ ಚಿಕ್ಕಮೇಳಗಳೀಗ ಯಕ್ಷಗಾನದ ಕಂಪು ಬೀರುತ್ತಿವೆ.

ಕರಾವಳಿ ಮಣ್ಣ ಕಲೆ ಯಕ್ಷಗಾನ ಪ್ರದರ್ಶನ ನೋಡಲು ಎಲ್ಲೆಲ್ಲೋ ಹೋಗಬೇಕಿದ್ದರೆ ಈಗ ಮನೆಯಂಗಳ/ಮನೆಯೊಳಗೆ ಚೆಂಡೆ, ಭಾಗವತಿಕೆ, ಕುಣಿತದ ನಾದ ಯಕ್ಷಗಾನಾಸಕ್ತ ಮನೆ ಮಂದಿಯಲ್ಲಂತೂ ಹೊಸ ಪುಳಕ ಹುಟ್ಟಿಸುತ್ತಿದೆ.

ಹೆಬ್ರಿ ಕಳತ್ತೂರು ಸಂತೆಕಟ್ಟೆಯ ಶ್ರೀಮಹಾಗಣಪತಿ ಚಿಕ್ಕಮೇಳವನ್ನು ನಾಲ್ಕು ವರ್ಷಗಳ ಹಿಂದೆ ವಿವಿಧ ದೊಡ್ಡ ಮೇಳಗಳ ಕಲಾವಿದರು ಒಂದುಗೂಡಿ ಆರಂಭಿಸಿದ್ದು ಗಂಡು, ಹೆಣ್ಣು ವೇಷಧಾರಿಗಳಿಬ್ಬರಿದ್ದಾರೆ. ಒಬ್ಬರು ಭಾಗವತಿಕೆ ಮಾಡುತ್ತಾರೆ. ಚೆಂಡೆ/ಮದ್ದಳೆ ಒಬ್ಬರೇ ಬಾರಿಸಿದರೆ ಮತ್ತೊಬ್ಬರು ವಾಹನ ಸಾರಥಿ.

ಹಗಲು ಹೊತ್ತಿನಲ್ಲಿ 20ರಿಂದ 25ಮನೆಗೆ ತೆರಳಿ ಕರಪತ್ರ ವಿತರಿಸಿ ಸಂಜೆ 6ರಿಂದ ರಾತ್ರಿ 10.30 ರ ಅವಧಿಯಲ್ಲಿ ಬಂದು ಆಟವಾಡುವ ಮಾಹಿತಿ ನೀಡಲಾಗುತ್ತದೆ. ಮನೆ ಮಂದಿಗೆ ಇಂತಿಷ್ಟೇ ಕೊಡಿ ಎಂದು ಬಲವಂತ ಮಾಡದೆ ಕೊಟ್ಟದ್ದನ್ನು ಕಲಾ ಕಾಣಿಕೆಯಾಗಿ ತಂಡ ಸ್ವೀಕರಿಸುತ್ತದೆ ಎನ್ನುತ್ತಾರೆ ಉದಯ ಕುಮಾರ್‌ ಸಂತೆಕಟ್ಟೆ.

ದಿನಕ್ಕೆ 15ರಿಂದ 20 ಮನೆಗಳಲ್ಲಿ ಆಟ ಸಿಗುತ್ತಿದ್ದು ಆಸಕ್ತಿಯಿಂದ ನೋಡುವವರ ಮನೆಯಲ್ಲಿ ಕನಿಷ್ಠ 25 ನಿಮಿಷವಾದರೂ ಪ್ರದರ್ಶನ ನೀಡುವುದಿದೆ. ಒಂದೆರಡು ಗಂಟೆಗಳ ಪ್ರದರ್ಶನಕ್ಕೆ ಬೇಡಿಕೆಯಿಟ್ಟರೆ ಅದಕ್ಕೂ ತಂಡ ಸಿದ್ಧವಿದೆ. ಹಲವು ಮನೆಗಳಲ್ಲಿ ಇತ್ತ ಚಿಕ್ಕಮೇಳದ ಪ್ರದರ್ಶನ, ಅತ್ತ ಟಿವಿಯನ್ನೂ ನೋಡುತ್ತಾರೆ.

ಒಮ್ನಿ ವಾಹನದಲ್ಲಿ ತಂಡ ತೆರಳುತ್ತಿದ್ದು ಹಲವು ಮನೆಗಳಲ್ಲಿ ನೀವು ಮುಂದಿನ ವರ್ಷವೂ ಬನ್ನಿ ಎನ್ನುವ ಆಹ್ವಾನ ಕೊಟ್ಟರೆ ಇನ್ನು ಕೆಲವರು ಮನೆಯೊಳಗೆ ಯಕ್ಷ ವೇಷ ಕುಣಿತ, ಗೆಜ್ಜೆ ನಾದದಿಂದ ಒಳಿತಾಗಿದೆ, ಶುಭ ಕಾರ್ಯ ಸಾಧ್ಯವಾಗಿದೆ ಎನ್ನುತ್ತಾರೆ.

ವೇಷಭೂಷಣವನ್ನು ದಿನಕ್ಕೆ 200 ರೂ. ಬಾಡಿಗೆಗೆ ಪಡೆಯುತ್ತಿದ್ದು 4ರಿಂದ 5ಸಾವಿರ ರೂ. ಖರ್ಚಿದೆ. ಸಂಜೆ ಬಳಿಕ ಭಾರೀ ಮಳೆಯಿದ್ದರೆ ಚಿಕ್ಕ ಮೇಳ ಪ್ರದರ್ಶನ ಕಷ್ಟಕರ. ಕರಪತ್ರದಲ್ಲಿ ಹೇಳಿದಂತೆ ಗಣಪತಿ ಸ್ವಸ್ತಿಕಕ್ಕೆ ದೀಪ, ಒಂದು ಸೇರು ಅಕ್ಕಿ, ಹೂವು, ಹಣ್ಣು, ತೆಂಗಿನಕಾಯಿ, ವೀಳ್ಯದೆಲೆ, ಅಡಕೆ, 10ರೂ. ಕಾಣಿಕೆಯಿಟ್ಟು , ಹರಕೆ ಸೀರೆ ಕೊಟ್ಟು ಹಲವು ಮನೆ ಮಂದಿಯಂತೂ ಭಕ್ತಿ, ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ.

ಯಕ್ಷಗಾನ ಮೇಳ ನಡೆಯದ ಮಳೆಗಾಲದಲ್ಲಿ ಚಿಕ್ಕ ಮೇಳದ ಮೂಲಕ ಕರಾವಳಿಯ ಯಕ್ಷಗಾನ ಕಲಾ ಸ್ವಾದನೆಯನ್ನು ಮನೆಗಳಲ್ಲಿರುವ ಕಲಾಸಕ್ತರು ಮಾತ್ರವಲ್ಲ ಅಶಕ್ತರು, ದುರ್ಬಲರು ಮಾಡುತ್ತಾರೆ. ಚಿಕ್ಕಮೇಳ 10ರಿಂದ 15 ಪ್ರಸಂಗ ಪ್ರದರ್ಶನ ನೀಡುತ್ತಿದ್ದು ಶ್ರೀದೇವಿ, ಶ್ರೀಕೃಷ್ಣ ಸಹಿತ ರಾಮಾಯಣ ಪ್ರಸಂಗ ಪ್ರದರ್ಶನಕ್ಕೆ ಹೆಚ್ಚಿನ ಬೇಡಿಕೆಯಿದೆ. - ಉದಯ ಕುಮಾರ್‌ ಸಂತೆಕಟ್ಟೆ, ಶ್ರೀಮಹಾಗಣಪತಿ ಚಿಕ್ಕ ಮೇಳ, ಸಂತೆಕಟ್ಟೆ, ಕಳ್ತೂರು, ಹೆಬ್ರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ