ಆ್ಯಪ್ನಗರ

ಮೀನುಗಾರರಿಗೆ ಪರಿಹಾರ ಒದಗಿಸಲು ಸಿಎಂ ತಾತ್ವಿಕ ಒಪ್ಪಿಗೆ: ಬೊಮ್ಮಾಯಿ

"ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಶೀಘ್ರವೇ ಮೀನುಗಾರರಿಗೆ ಪರಿಹಾರವನ್ನು ಘೋಷಿಸಲಿದ್ದಾರೆ," ಎಂಬುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Vijaya Karnataka 1 Nov 2019, 8:31 pm
ಉಡುಪಿ: ಕರಾವಳಿಯಲ್ಲಿ ನೆರೆ ಹಾವಳಿ, ಕಡಲ ಮೀನುಗಾರಿಕೆಗೆ ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಮೀನುಗಾರರಿಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
Vijaya Karnataka Web BasavarajBommai


ಅವರು ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾಕ್ರೀಡಾಂಗಣದಲ್ಲಿಶುಕ್ರವಾರ ನಡೆದ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಥ ಸಂಚಲನ ಗೌರವ ಸ್ವೀಕಾರ, ರಾಷ್ಟ್ರ ಧ್ವಜಾರೋಹಣ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನದ ಬಳಿಕ ಮಾತನಾಡಿದ ಅವರು, "ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಶೀಘ್ರವೇ ಪರಿಹಾರವನ್ನು ಘೋಷಿಸಲಿದ್ದಾರೆ," ಎಂದರು.

ಮೀನುಗಾರರು ಸಾಹಸ ಪ್ರವೃತ್ತಿಯ ಬಂಡವಾಳವನ್ನು ಉದ್ಯಮ, ದುಡಿಮೆಯಲ್ಲಿ ತೊಡಗಿಸಬೇಕು. ಕರಾವಳಿಯ ಯುವಕರಿಗೆ ಪಾರಂಪರಿಕ ವೃತ್ತಿ, ಉದ್ಯಮದ ಜತೆಗೆ ಹೊಸ ಉದ್ಯೋಗ ಸೃಷ್ಟಿಯಾಗಬೇಕು. ತಂತ್ರಜ್ಞಾನದ ಜತೆಗೆ ಉದ್ಯೋಗ ಸೃಷ್ಟಿಯ ಉದ್ಯಮಗಳು ಬರಬೇಕು. ಕೇರಳ, ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯಪಡೆ ರಚಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿಷನ್‌ ಡಾಕ್ಯುಮೆಂಟ್‌

ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲು ಎರಡು ತಿಂಗಳಲ್ಲಿ ವಿಷನ್‌ ಡಾಕ್ಯುಮೆಂಟ್‌ ತಯಾರಿಸಿ ಮುಂದಿನ ಬಜೆಟ್‌ನಲ್ಲಿಅಳವಡಿಕೆ ಮಾಡಲಾಗುವುದು. ಸರಕಾರಿ, ಖಾಸಗಿ ಹೂಡಿಕೆಗೆ ಅವಕಾಶ ನೀಡಲಾಗುವುದು. ಟೆಂಪಲ್‌, ಕೋಸ್ಟಲ್‌ ಟೂರಿಸಂ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂಬುದಾಗಿ ಅವರು ಇದೇ ವೇಳೆ ವಿವರಿಸಿದರು.

ಇತಿಹಾಸ, ಸಂಸ್ಕೃತಿ ಬೆಳೆಸಿ ಮುಂದಿನ ಜನಾಂಗಕ್ಕೆ ಶ್ರೀಮಂತ ನಾಡನ್ನು ನೀಡುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ಕರಾವಳಿಯ ಯಕ್ಷಗಾನ ಸಹಿತ ಕಲೆಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದು ಕನ್ನಡವೂ ಶ್ರೀಮಂತವಾಗಿದೆ. ಗಲ್ಫ್‌, ಮುಂಬೈಯಲ್ಲಿ ಕನ್ನಡದ ಬಾವುಟ ಹಾರಲು ಕನ್ನಡಿಗರ ಪರಿಶ್ರಮವಿದೆ. ನಾಡು ಕಟ್ಟುವ ನಿಟ್ಟಿನಲ್ಲಿ ನಡೆದು ಬಂದ ಹಾದಿಯ ಅವಲೋಕನ, ಮುಂದೆ ನಡೆವ ದಾರಿಯ ಸ್ಪಷ್ಟ ಗುರಿಯೊಂದಿಗೆ ಅಭಿವೃದ್ಧಿಶೀಲರಾಗಲು ಸಿಂಹಾವಲೋಕನವೂ ಅಗತ್ಯ. ದೇಶದ ಏಕತೆ, ಅಖಂಡತೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದು ಮೂಲಕ ವಲ್ಲಭಬಾಯಿ ಪಟೇಲ್‌ ಕಂಡ ಅಖಂಡ ಭಾರತದ ಕನಸು ನನಸಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಶಾಸಕರಾದ ಕೆ. ರಘುಪತಿ ಭಟ್‌, ವಿ. ಸುನಿಲ್‌ ಕುಮಾರ್‌ ಕಾರ್ಕಳ, ಜಿಲ್ಲಾಧಿಕಾರಿ ಜಿ. ಜಗದೀಶ್‌, ಎಸ್ಪಿ ನಿಶಾ ಜೇಮ್ಸ್‌, ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿ. ಪಂ. ಸಿಇಒ ಪ್ರೀತಿ ಗೆಹ್ಲೋಟ್‌, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ತಾ. ಪಂ. ಅಧ್ಯಕ್ಷೆ ನೀತಾ ಗುರುರಾಜ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ