ಆ್ಯಪ್ನಗರ

ಉಡುಪಿ ಕೃಷ್ಣಮಠಕ್ಕೆ ಸಿಎಂ ಕುಮಾರಸ್ವಾಮಿ ಭೇಟಿ

ಎಚ್. ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ದೇವರ ದರ್ಶನದ ಬಳಿಕ ಪರ್ಯಾಯ ಮಠಾಧೀಶರ ಆಶೀರ್ವಾದ ಪಡೆದರು.

Vijaya Karnataka Web 7 Sep 2018, 1:00 pm
ಉಡುಪಿ: ಎಚ್. ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ದೇವರ ದರ್ಶನದ ಬಳಿಕ ಪರ್ಯಾಯ ಮಠಾಧೀಶರ ಆಶೀರ್ವಾದ ಪಡೆದರು.
Vijaya Karnataka Web cm


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ , ವಿಧಾನ ಪರಿಷತ್ತಿನ ಸದಸ್ಯ ಬೋಜೇ ಗೌಡ ಜತೆಗಿದ್ದರು.

ಮಧ್ವ ಸರೋವರದಲ್ಲಿ ಕಾಲು ತೊಳೆದ ಸಿಎಂ ಶ್ರೀಕೃಷ್ಣನ ದರ್ಶನಕ್ಕೆ ತೆರಳಿದರು. ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಬರಮಾಡಿಕೊಂಡು ಮುಖ್ಯಮಂತ್ರಿಗೆ ಕಡೆಗೋಲು, ಪಾಶಧಾರಿ ಬಾಲ ಗೋಪಾಲ, ಮುಖ್ಯಪ್ರಾಣನ ದರ್ಶನ ಮಾಡಿಸಿದರು.

ದ್ವಾದಶಿ ಹಿನ್ನೆಲೆಯಲ್ಲಿ ಬೆಳಗ್ಗೆ ಬೇಗನೆ ಶ್ರೀಕೃಷ್ಣನಿಗೆ ಮಹಾಪೂಜೆ ನೆರವೇರಿದ್ದು ಮುಖ್ಯಮಂತ್ರಿ ಸಹಿತ ಭಕ್ತರಿಗೆ ಅಂಗಿ, ಬನಿಯನ್ ತೆಗೆಯದೆ ಒಳಪ್ರವೇಶಿಸಲು ಅವಕಾಶ ನೀಡಲಾಯಿತು.

ನಾಡಿಗೆ ಮಂಗಲವಾಗಲಿ ಎನ್ನುವ ಆಶಯದೊಂದಿಗೆ ವಿದ್ವಾಂಸರು ಶ್ರೀಶ ಗುಣ ದರ್ಪಣದ 18 ಶ್ಲೋಕವನ್ನು ಪಠಿಸಿದರು. ಪರ್ಯಾಯ ಶ್ರೀಪಾದರು ಮುಖ್ಯಮಂತ್ರಿಗೆ ರೇಷ್ಮೆ ಶಾಲು, ಮುತ್ತಿನ ಹಾರ, ಸ್ವರ್ಣ ಗೋಪುರದ ಸ್ಮರಣಿಕೆ ಸಹಿತ ಪ್ರಸಾದವನ್ನು ನೀಡಿದರು.

ಸೆ. 9 ರಂದು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯುವ ವಿಶ್ವ ಬಂಟರ ಸಮ್ಮೇಳನ ಸಮಾರೋಪದಲ್ಲಿ ಸಿಎಂ ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಮಠದಲ್ಲಿ ಶ್ರೀಕೃಷ್ಣನಿಗೆ ನಡೆಯುವ ಕೋಟಿ ತುಳಸಿ ಅರ್ಚನೆಯಲ್ಲೂ ಪಾಲ್ಗೊಳ್ಳುವಂತೆ ಶ್ರೀಪಾದರು ಮೌಖಿಕ ಆಹ್ವಾನ ನೀಡಿದರು.

'ಅಲ್ಲಿಗೆ ಬಂದರೆ ಇಲ್ಲಿಗೆ ಖಂಡಿತ ಬರುತ್ತೇನೆ ಗುರುಗಳೇ,' ಎಂದ ಸಿಎಂ ಕುಮಾರಸ್ವಾಮಿಯವರಲ್ಲಿ ವಿಕೋಪಕ್ಕೆ ಒಳಗಾದ ಕೊಡಗಿನ ಗ್ರಾಮವೊಂದರ ದತ್ತು ಸ್ವೀಕಾರದ ಆಶಯ ವ್ಯಕ್ತಪಡಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದಾದ ಹಾನಿಗೆ ಗರಿಷ್ಠ ಪರಿಹಾರ ಒದಗಿಸಲು ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಶ್ರೀಪಾದರಿಂದ ಗೌರವ ಸಹಿತ ಮಂತ್ರಾಕ್ಷತೆ, ಪ್ರಸಾದ ಸ್ವೀಕರಿಸಲು ಮುಂದಾದಾಗ ಸರಿ ದಾರಿಯಲ್ಲಿ ಹೋಗುವಂತೆ ಚೆನ್ನಾಗಿ ಆಶೀರ್ವಾದ ಮಾಡಿ ಗುರುಗಳೇ ಎಂದು ಸಿಎಂ ಚಟಾಕಿ ಹಾರಿಸಿದರು.

ಸಚಿವೆ ಡಾ. ಜಯಮಾಲಾ ಅವರು ಶ್ರೀಪಾದರ ಆಶೀರ್ವಾದ ಪಡೆಯಲು ಮುಂದಾದಾಗ,' ಮೇಡಂ ಮಗಳು ಸೆಟ್ಲ್ ಆಗುವಂತೆ ಆಶೀರ್ವಾದ ಮಾಡಿ ಗುರುಗಗಳೇ,' ಎಂದು ಸಿಎಂ ಹೇಳಿದರು. ಇವರು ಒಳ್ಳೆಯ ಸಿಎಂ ಸ್ವಾಮಿಗಳೇ ಎಂದು ಡಾ. ಜಯಮಾಲಾ ಪರ್ಯಾಯ ಶ್ರೀಗಳಿಗೆ ಅರಿಕೆ ಮಾಡಿದರು.

ಸಂಸದೆ ಶೋಭಾ ಕರಂದ್ಲಾಜೆ ಸಹಿತ ಉಡುಪಿ ಜಿಲ್ಲೆಯ ಐದು ಶಾಸಕರು ಪೂರ್ವ ನಿರ್ಧರಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಶ್ರೀಕೃಷ್ಣಮಠದಲ್ಲಿ ಸ್ವಾಗತಿಸಲು ಹಾಜರಿರಲಿಲ್ಲ.

ಪ್ರಗತಿ ಪರಿಶೀಲನಾ ಸಭೆ

ಉಡುಪಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ , ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಧಾನ ಸಭೆ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ