ಆ್ಯಪ್ನಗರ

ಎಚ್‌ಐವಿ ಸೋಂಕಿತ ಮಹಿಳೆಯರಿಗೆ ಕೊರೊನಾ ಸಂಕಷ್ಟ: ಧನಶ್ರೀ ಯೋಜನೆಯಡಿ ಪಡೆದ ಸಾಲ ಮನ್ನಾಕ್ಕೆ ಆಗ್ರಹ

ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಎಚ್‌ಐವಿ ಸೋಂಕಿತರು ಕೊರೊನಾದಿಂದಾಗಿ ಸ್ವ ಉದ್ಯೋಗ ಮುಂದುವರಿಸಲಾಗದ ಸ್ಥಿತಿಯಲ್ಲಿದ್ದು, ಸಾಲಮನ್ನಾ ಮಾಡುವಂತೆ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

Vijaya Karnataka Web 12 Jun 2020, 8:51 am
ಎಸ್‌.ಜಿ. ಕುರ್ಯ ಉಡುಪಿ
Vijaya Karnataka Web ಸಾಂದರ್ಭಿಕ ಚಿತ್ರ

ಉಡುಪಿ:ಅನ್ಯರ ಮುಂದೆ ಕೈಯೊಡ್ಡದೆ ಸ್ವಾವಲಂಬನೆಯ ಬದುಕಿಗಾಗಿ ಸ್ವ ಉದ್ಯೋಗಿ ಎಚ್‌ಐವಿ ಸೋಂಕಿತ ಮಹಿಳೆಯರು ಕೋವಿಡ್‌-19 ಸಂಕಷ್ಟದಲ್ಲಿ ನಲುಗಿದ್ದಾರೆ.

ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಎಚ್‌ಐವಿ ಸೋಂಕಿತರು ಕೊರೊನಾದಿಂದಾಗಿ ಸ್ವ ಉದ್ಯೋಗ ಮುಂದುವರಿಸಲಾಗದ ಸ್ಥಿತಿಯಲ್ಲಿದ್ದು, ಸಾಲಮನ್ನಾ ಮಾಡುವಂತೆ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 2,000 ಮಹಿಳೆಯರು, 250 ಮಕ್ಕಳು, ವಿಧವೆಯರು, ಅನಾಥರ ಸಹಿತ 4,126 ಮಂದಿ ಎಚ್‌ಐವಿ ಸೋಂಕಿತರಿದ್ದು, ಕೊರೊನಾ ಸೋಂಕಿನ ಭಯದ ಜತೆಗೆ ಆರೋಗ್ಯ ಸಮಸ್ಯೆಯಿಂದ ದಿನದೂಡುತ್ತಿದ್ದಾರೆ. 2016-17ರಿಂದ 2019-20ನೇ ಸಾಲಿನ ತನಕ ಒಟ್ಟು 103 ಮಂದಿ ಎಚ್‌ಐವಿ ಸೋಂಕಿತ ಮಹಿಳೆಯರು ಕ್ಯಾಂಟೀನ್‌, ಗೂಡಂಗಡಿ, ಕೋಳಿ ಸಾಕಣೆ, ಹೈನುಗಾರಿಕೆಗಾಗಿ 51.50 ಲಕ್ಷ ರೂ. ಸಾಲ ಪಡೆದಿದ್ದು, ಶೇ.60 ಮಂದಿ ಪಾವತಿಸಿದ್ದರೆ ಉಳಿದವರು ನಾನಾ ಸಂಕಷ್ಟ ಮುಂದೊಡ್ಡಿದ್ದಾರೆ.

2016-17ನೇ ಸಾಲಿನಲ್ಲಿ ಪಡೆದ ಸಾಲಕ್ಕೆ ಶೇ.4ರ ಬಡ್ಡಿ ಹಾಗೂ 10 ಸಾವಿರ ರೂ. ಸಹಾಯಧನವಿದ್ದರೆ 2017-18ರಿಂದ ಯಾವುದೇ ಬಡ್ಡಿ ರಹಿತ 25 ಸಾವಿರ ರೂ. ಸಾಲ ಹಾಗೂ 25 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ.

ವಿತ್ತ ವರ್ಷ ಫಲಾನುಭವಿಗಳು ಸಾಲ ಮೊತ್ತ
2016-17 27 13.50 ಲಕ್ಷ ರೂ.
2017-18 38 19 ಲಕ್ಷ ರೂ.
2018-19 19 9.50 ಲಕ್ಷ ರೂ.
2019-20 19 9.50 ಲಕ್ಷ ರೂ.

ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ ಸ್ವ ಉದ್ಯೋಗದಲ್ಲಿ ತೊಡಗಿದ ಎಚ್‌ಐವಿ ಮಹಿಳಾ ಸೋಂಕಿತರು ಸಮಸ್ಯೆಗೆ ಸಿಲುಕಿದ್ದು, ಸರಕಾರ ಅಗತ್ಯ ದಿನ ಬಳಕೆಯ ಪೌಷ್ಟಿಕ ಆಹಾರ ಒದಗಿಸಿ, ಧನಶ್ರೀ ಸಾಲಮನ್ನಾ, ವಿಧವಾ ವೇತನ ಹೆಚ್ಚಳ ಸಹಿತ ವಿಶೇಷ ಪ್ಯಾಕೇಜ್‌ ಘೋಷಿಸಬೇಕು.
ಸಂಜೀವ ವಂಡ್ಸೆ, ಎಚ್‌ಐವಿ ಸೋಂಕಿತರ ಪರ ಹೋರಾಟಗಾರ, ಆಸರೆ ಚಾರಿಟೆಬಲ್‌ ಟ್ರಸ್ಟ್‌, ವಂಡ್ಸೆ

ಉಡುಪಿ ಜಿಲ್ಲೆಯಲ್ಲಿ 2016-17ನೇ ಸಾಲಿನಿಂದ ಧನಶ್ರೀ ಯೋಜನೆಯಡಿ ಎಚ್‌ಐವಿ ಸೋಂಕಿತ ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು 103 ಫಲಾನುಭವಿಗಳಿಗೆ ನೀಡಿದ ಸಾಲಮನ್ನಾ ಮಾಡಿ ಋುಣಮುಕ್ತಗೊಳಿಸಲು ಮನವಿ ಮಾಡಿದ್ದಾರೆ. ಸರಕಾರ ನಿರ್ಧಾರ ಕೈಗೊಳ್ಳಬೇಕಿದ್ದು, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
ಶೇಷಪ್ಪ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಡುಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ