ಆ್ಯಪ್ನಗರ

ಉಡುಪಿ: ಖಾಸಗಿ ಬಸ್ ನಿರ್ವಾಹಕನ ಹತ್ಯೆ

ಖಾಸಗಿ ಬಸ್‌ ಮಾಲೀಕ ಹಾಗೂ ನಿರ್ವಾಹಕರೊಬ್ಬರನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಉಡುಪಿಯ ಬೈರಂಪಳ್ಳಿಯಲ್ಲಿ ಗುರುವಾರ ನಡೆದಿದೆ. ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Vijaya Karnataka Web 12 Jul 2019, 12:45 pm
ಉಡುಪಿ: ಖಾಸಗಿ ಬಸ್ ಮಾಲೀಕ ಹಾಗೂ ನಿರ್ವಾಹಕನಾಗಿದ್ದ ಪ್ರಶಾಂತ್ ಪೂಜಾರಿ (38) ಅವರನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆ ಹೊರಗೆ ಗುರುವಾರ ಹತ್ಯೆ ಮಾಡಿದ್ದಾರೆ.
Vijaya Karnataka Web Murder


ಬೈರಂಪಳ್ಳಿಯ ಮನೆಗೆ ರಾತ್ರಿ 12 ರಿಂದ 1 ರ ನಡುವೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮನೆ ಬಾಗಿಲು ಬಡಿದು ಪ್ರಶಾಂತ್ ಪೂಜಾರಿಯನ್ನು ಹೊರ ಕರೆದು ಮಾತುಕತೆ ನಡೆಸಿದ್ದರು.

ಮಾತಿನ ಚಕಮಕಿ ಬಳಿಕ ಮನೆಯೊಳಗಿಂದ ಕತ್ತಿ ತಂದ ದುಷ್ಕರ್ಮಿಗಳು ಬಾಗಿಲ ಚಿಲಕ ಹೊರಗಿನಿಂದ ಹಾಕಿ ಪ್ರಶಾಂತ್ ಪೂಜಾರಿಗೆ ಕತ್ತಿಯಿಂದ ಕಡಿದಿದ್ದರು. ಹೊರಗೆ ಗಲಾಟೆ ನಡೆಯುತ್ತಿದ್ದರೂ ಪತ್ನಿ ವಿಜಯಾ, ಮಕ್ಕಳಾದ ಅಂಜಲಿ (14) ಹಾಗೂ ನಂದನ್ (11) ಹೊರ ಬರಲಾಗದೆ ಒಳಗಿದ್ದರು.

ಪಕ್ಕದ ಮನೆ ಮಂದಿಗೆ ದೂರವಾಣಿ ಕರೆ ಸಂಪರ್ಕ ಸಿಗಲಿಲ್ಲ, ಸಂಬಂಧಿಕರಿಗೆ ಕರೆ ಮಾಡಿ ಸ್ಥಳಕ್ಕೆ ಬಂದಾಗ ರಕ್ತದ ಮಡುವಲ್ಲಿದ್ದ ಪ್ರಶಾಂತ್ ಪೂಜಾರಿ ಸಾವನ್ನಪ್ಪಿದ್ದರು. ಎಸ್ಪಿ ನಿಶಾ ಜೇಮ್ಸ್ ಸಹಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಹಣಕಾಸು ವಿಚಾರದಲ್ಲಿ ಸ್ಥಳೀಯ ಪರಿಚಿತ ವ್ಯಕ್ತಿಗಳೇ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದ್ದು ದುಷ್ಕರ್ಮಿಗಳು ಸ್ಟ್ಯಾಂಡ್ ತುಂಡಾದ ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ತನಿಖಾ ನಿರತರಾಗಿದ್ದಾರೆ. ಸ್ಥಳದಲ್ಲಿ ಬಿಟ್ಟು ಹೋದ ಬೈಕಿನ ಆಧಾರದಲ್ಲಿ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ