ಆ್ಯಪ್ನಗರ

ವಾರಾಹಿ ಯೋಜನೆ ಪೂರ್ಣಗೊಳಿಸಲು ಚಿಂತನೆ: ಸಚಿವ ಡಿ.ಕೆ.ಶಿವಕುಮಾರ್‌

ವಾರಾಹಿ ನೀರಾವರಿ ಯೋಜನೆಗೆ ಸಾಕಷ್ಟು ವರ್ಷ ಸಂದುಹೋಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ನುಡಿದರು.

Vijaya Karnataka 3 Oct 2018, 3:05 pm
ಕುಂದಾಪುರ: ವಾರಾಹಿ ನೀರಾವರಿ ಯೋಜನೆಗೆ ಸಾಕಷ್ಟು ವರ್ಷ ಸಂದುಹೋಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ನುಡಿದರು.
Vijaya Karnataka Web dkshi


ಮಂಗಳವಾರ ಸಿದ್ಧಾಪುರ ಸಮೀಪದ ಹೊಳೆಶಂಕರನಾರಾಯಣದಲ್ಲಿರುವ ವಾರಾಹಿ ಡೈವರ್ಶನ್‌ ವಿಯರ್‌(ಅಣೆಕಟ್ಟು) ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ವಿಕ ಜತೆ ಮಾತನಾಡಿದರು.

ವಾರಾಹಿ ನೀರಾವರಿ ಯೋಜನೆಗೆ 3 ದಶಕ ಸಂದಿದೆ. ಹಿಂದೆ ಇದ್ದ ನಮ್ಮದೇ ಸರಕಾರದ ಅವಧಿಯಲ್ಲಿ ಯೋಜನೆಗೆ ಹೆಚ್ಚಿನ ವೇಗ ದೊರಕಿತ್ತು. ಎಡದಂಡೆಯ 15700 ಹೆಕ್ಟೇರ್‌ ಯೋಜನಾ ಪ್ರದೇಶದ ಪೈಕಿ 5000 ಹೆಕ್ಟೇರ್‌ಗೆ ನೀರುಣಿಸುವ ಕಾರ್ಯ ನಡೆದಿದೆ. ಎಡದಂಡೆಯ ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಿ ಬಲದಂಡೆ ಕಾಲುವೆ ಕಾಮಗಾರಿಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲಿಯೇ ಬಲದಂಡೆ ನಾಲಾ ಕಾಮಗಾರಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಉಡುಪಿಗೆ ವಾರಾಹಿ ನೀರು: ಉಡುಪಿಗೆ ವಾರಾಹಿ ನದಿಯಿಂದ ಕುಡಿಯುವ ನೀರು ಸರಬರಾಜು ಯೋಜನೆ ಕುರಿತಂತೆ ಪ್ರಕ್ರಿಯೆ ನಡೆಯುತ್ತಿದೆ. ಮುಖ್ಯವಾಗಿ ವಾರಾಹಿ ಯೋಜನೆಯ ಸಮಗ್ರ ಸಾಧಕ ಬಾಧಕ ಪರಿಶೀಲಿಸಿ ತ್ವರಿತಗತಿಯಲ್ಲಿ ಯೋಜನೆ ಅಂತಿಮ ಘಟ್ಟ ತಲುಪಿಸುವ ಇರಾದೆ ಇದೆ. ಶೀಘ್ರದಲ್ಲಿಯೇ ವಾರಾಹಿ ಯೋಜನೆ ಕುರಿತಂತೆ ವಿಶೇಷ ಸಭೆ ನಡೆಸಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಆ ಬಳಿಕ ಎಲ್ಲಾ ವಿವರಗಳನ್ನು ಮಾಧ್ಯಮದ ಮುಂದೆ ಇಡುವುದಾಗಿ ಅವರು ಹೇಳಿದರು.

ವಾರಾಹಿ ನೀರಾವರಿ ನಿಗಮ ಮುಖ್ಯ ಎಂಜಿನಿಯರ್‌ ಯತೀಶ್ಚಂದ್ರ, ಸೂಪರಿಟೆಂಡೆಂಟ್‌ ಎಂಜಿನಿಯರ್‌ ಪದ್ಮನಾಭ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೊಲ್ಲೂರು ದೇವಳದ ಧರ್ಮದರ್ಶಿ ರಾಜೇಶ್‌ ಕಾರಂತ, ಉದ್ಯಮಿ ಶಿವ ಕೋಟ್ಯಾನ್‌ ಉಪಸ್ಥಿತರಿದ್ದರು.

ವಿವರ ಪಡೆದ ಸಚಿವರು: ಹೊಳೆಶಂಕರನಾರಾಯಣ ಡೈವರ್ಶನ್‌ ವಿಯರ್‌ ಕುರಿತು ಸಚಿವರು ನಿಗಮದ ಎಂಜಿನಿಯರ್‌ಗಳಿಂದ ವಿವರ ಪಡೆದರು. ಮಾಣಿ ಜಲಾಶಯದಿಂದ ಹೊರಹೊಮ್ಮುವ 1100 ಕ್ಯೂಸೆಕ್‌ ನೀರು ಇಲ್ಲಿ ಸಂಗ್ರಹಿಸಿ ಎಡ ಮತ್ತು ಬಲದಂಡೆಗಳಿಗೆ ನೀರು ಹರಿಸುವುದು ವಾರಾಹಿ ಯೋಜನೆಯ ಮೂಲ ಉದ್ದೇಶ ಎಂದು ಎಂಜಿನಿಯರ್‌ಗಳು ವಿವರಿಸಿದರು. ಸಚಿವರು ಇದೇ ಸಂದರ್ಭ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕುರಿತು ಮಾಹಿತಿ ಪಡೆದುಕೊಂಡು ಯೋಜನೆಯಿಂದ ಕಾರ್ಖಾನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಚರ್ಚಿಸಿದರು.

ಹೊಳೆಶಂಕರನಾರಾಯಣ ದೇವಳಕ್ಕೆ ಭೇಟಿ:
ಇದೇ ಸಂದರ್ಭದಲ್ಲಿ ಪುರಾಣ ಪ್ರಸಿದ್ಧ ಹೊಳೆಶಂಕರನಾರಾಯಣ ದೇವಸ್ಥಾನಕ್ಕೆ ಸಚಿವ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಪ್ರಮುಖ ಶಿವ ಕೋಟ್ಯಾನ್‌ ಸಚಿವರನ್ನು ದೇವಳದ ವತಿಯಿಂದ ಗೌರವಿಸಿದರು. ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಮಾಜಿ ಅಧ್ಯಕ್ಷ ಗಣೇಶ್‌ ಕಾಂಚನ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ