*ಎಸ್.ಜಿ. ಕುರ್ಯ
ಉಡುಪಿ: ಹಿಂದೂ ಸಮಾಜದೊಳಗಿನ ಬಹುದೊಡ್ಡ ಪಿಡುಗಾದ ಅಸ್ಪೃಶ್ಯತೆ, ಅಸಮಾನತೆ ನಿವಾರಣೆಗೆ ಆಂದೋಲನದ ಮೂಲಕ ತಳ ವರ್ಗದ ಮನೆ, ಮನ ಮುಟ್ಟಲು ಉಡುಪಿಯ ಧರ್ಮ ಸಂಸದ್ ಮಹತ್ವದ ಹೆಜ್ಜೆಯಿಟ್ಟಿದ್ದು ಪಂಚಸೂತ್ರ ರೂಪಿಸಿದೆ.
ಮೊದಲ ದಿನದ ಧರ್ಮ ಸಂಸದ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬದ್ಧತೆಯೊಂದಿಗೆ ಸರಕಾರದ ಮುಂದೆ ಹಕ್ಕಿನ ಆಗ್ರಹ ಮುಂದಿಟ್ಟರೆ ಎರಡನೇ ದಿನದ ಧರ್ಮ ಸಂಸದ್ ಸಾಧು ಸಂತರ ನಡುವೆ ಹಾಗೂ ಜನಸಾಮಾನ್ಯರ ನಡುವಿನ ತಾರತಮ್ಯ ನಿವಾರಣೆಯ ಬದ್ಧತೆಯೊಂದಿಗೆ ಸಂಕಲ್ಪ ಕೈಗೊಂಡಿದೆ.
ಪಂಚ ಸೂತ್ರವೇನು?: ಆರೆಸ್ಸೆಸ್ ಸರ ಸಂಘ ಚಾಲಕ ಮೋಹನ್ ಭಾಗವತ್ ಶುಕ್ರವಾರ ನಡೆದ ಧರ್ಮ ಸಂಸದ್ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಂದಿರ, ನೀರು, ಸ್ಮಶಾನ ಸಮಾನತೆಯ ಅವಕಾಶ ಪ್ರತಿಪಾದಿಸಿದ್ದರು.
ವಿಶ್ವ ಹಿಂದೂ ಪರಿಷತ್ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಪ್ರವೀಣ್ ಭಾಯಿ ತೊಗಾಡಿಯಾ ಶನಿವಾರ ಮಂದಿರ, ಊಟ(ಪಂಕ್ತಿ ಭೇದ ನಿವಾರಣೆ), ನೀರಿನ ಜತೆಗೆ ಪರಿವಾರ ಮಿತ್ರ(ಸಹಭೋಜನ), ದಲಿತರ ಮಕ್ಕಳಿಗೆ ಶಿಕ್ಷಣ, ಹೆಣ್ಮಕ್ಕಳ ಮದುವೆಗೆ ನೆರವಿನ ಮತ್ತೆರಡು ಹೆಜ್ಜೆ ಮುಂದಿಡುವ ಮೂಲಕ ಪಂಚಸೂತ್ರಕ್ಕೆ ಧರ್ಮ ಸಂಸದ್ ಅಂಗೀಕಾರದ ಮುದ್ರೆ ಬಿದ್ದಿದೆ. ಮುಂದಿನ ದಿನಗಳಲ್ಲಿ ಆಂದೋಲನ ನಡೆಯಲಿದೆ.
ಸಾಧು, ಸಂತರು, ಧಾರ್ಮಿಕ ನೇತಾರರು ತಳ ವರ್ಗದ ಜನರ ಮನೆ ಬಾಗಿಲಿಗೆ ತೆರಳಿ: ಉಡುಪಿಯಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ 2ನೇ ಪರ್ಯಾಯದಲ್ಲಿ (1969) ನಡೆದ ವಿಹಿಂಪ ಕರ್ನಾಟಕ ಪ್ರಾಂತೀಯ ಸಮ್ಮೇಳನದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಪೇಜಾವರಶ್ರೀಗಳು ನೀಡಿದ ಸಂದೇಶ ದೇಶದಲ್ಲಿ ಅದರಲ್ಲೂ ಮಡಿವಂತ ಮಠ, ಮಂದಿರಗಳಲ್ಲಿ ಸಂಚಲನ ಮೂಡಿಸಿತ್ತು.
ಪೇಜಾವರ ಶ್ರೀಪಾದರು 1971ರಲ್ಲಿ ದಲಿತ ಕೇರಿಗೆ ತೆರಳಿದ್ದನ್ನು ವಿರೋಧಿಸಿದ್ದ ಮಠಾಧೀಶರೇ ಬಳಿಕ ಬೆಂಬಲ ವ್ಯಕ್ತಪಡಿಸಿದ್ದರು. ಉಡುಪಿಯಲ್ಲಿ (1985) ನಡೆದ 2ನೇ ಧರ್ಮ ಸಂಸದ್ನಲ್ಲಿ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ನ ಹಿಂದೂ ಪತಿತೋ ಭವೇತ್, ಹಿಂದವಃ ಸೋದರಾಃ ಸರ್ವೇ ಸಂದೇಶ ನೀಡಿದ್ದರು.
ಹಿಂದೂ ಧರ್ಮಕ್ಕೆ ಮಾರಕವಾದ ಲವ್ ಜಿಹಾದ್, ಭಯೋತ್ಪಾದನೆ ನಿವಾರಣೆಗು ಸಾಧು, ಸಂತರು ಕಳವಳದೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದರೆ ಕೇರಳದಲ್ಲಿ ಆರ್ಎಸ್ಎಸ್ ಕಾರ್ಯಕರ್ತರ ಅವ್ಯಾಹತ ಕೊಲೆಗೆ ಖಂಡನ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಲವ್ ಜಿಹಾದ್ ವಿರುದ್ಧ ಯುವ ಜನರಲ್ಲಿ ಜಾಗೃತಿಗೆ ಉದ್ದೇಶಿಸಲಾಗಿದೆ.
ಜಗತ್ತಿಗೆ ಆಧ್ಯಾತ್ಮ ಗುರುವಾದ ಭಾರತ ವಿದೇಶಿ ರಾಷ್ಟ್ರಗಳಿಗೆ ಗೋ ಮಾಂಸ ರಫ್ತು ಮಾಡುವುದನ್ನು ನಿಷೇಧಿಸುವ ಪ್ರಸ್ತಾಪ ಕೋಳಿ ಮೊದಲೋ ಮೊಟ್ಟೆ ಮೊದಲೋ ಎನ್ನುವ ಜಿಜ್ಞಾಸೆಗೆ ಕಾರಣವಾಗಿದ್ದು ಗೋ ಹತ್ಯೆ ವಿರುದ್ಧ ಧರ್ಮ ಸಂಸದ್ ಅಂತಿಮ ದಿನವಾದ ಭಾನುವಾರ ಬೆಳಗ್ಗೆ ಮಹತ್ವದ ಚರ್ಚೆ ನಡೆಸಲಿದೆ. ನಿರ್ಣಾಯಕ ನಿರ್ಣಯ ತಳೆಯಲಿದೆ. ಮುಸ್ಲಿಮರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಪವಿತ್ರ ಗ್ರಂಥವಾಗಿದ್ದು ಹಿಂದೂಗಳಿಗೆ ಭಗವದ್ಗೀತೆ ಪವಿತ್ರ ಗ್ರಂಥವಾಗಬೇಕೆನ್ನುವ ಬೇಡಿಕೆ ಮುಂದಿಡಲಾಗಿದೆ.
ಮಸೀದಿ, ಚರ್ಚ್ಗಳ ತಂಟೆಗೆ ಹೋಗದ ಸರಕಾರ ಜಾತ್ಯತೀತ ಸಂವಿಧಾನಕ್ಕೆ ವಿರುದ್ಧವಾಗಿ ಮಠ, ಮಂದಿರಗಳ ಸ್ವಾಧೀನದ ವಿರುದ್ಧ ದೇಶವ್ಯಾಪಿ ಚಳವಳಿಗೆ ಧರ್ಮ ಸಂಸದ್ ಭವಿಷ್ಯದ ರಾಜಕೀಯ ತಂತ್ರಗಾರಿಕೆ ನಿಟ್ಟಿನಲ್ಲಿ ಯೋಜನೆ ರೂಪಿಸಲಿದೆ. ಮತಾಂತರ ನಿರಂತವಾದರೆ ಘರ್ ವಾಪಸಿ ನಿರಂತರವಾಗುವ ಎಚ್ಚರಿಕೆ ನೀಡಲಾಗಿದೆ.
ಧಾರ್ಮಿಕ ನೇತಾರರು, ಸಾಧು, ಸಂತರು ತಳವರ್ಗದ ಜನರ ಮನೆ ಬಾಗಿಲಿಗೆ ತೆರಳಿ ಪಾದಪೂಜೆ, ಸಹ ಭೋಜನ ಸ್ವೀಕರಿಸಬೇಕೆನ್ನುವ ಹಿಂದೂ ಸಮಾಜಮುಖಿ ನಿಲುವನ್ನು ಧರ್ಮ ಸಂಸದ್ ತಳೆದಿದೆ. ಬ್ರಾಹ್ಮಣರು, ಸಂಘ ಪರಿವಾರವನ್ನು ದಲಿತರ ವಿರುದ್ಧ ಎತ್ತಿ ಕಟ್ಟುವ ಸೆಕ್ಯುಲರ್ ಮಾಫಿಯಾ ರಾಜಕೀಯದ ವಿರುದ್ಧ ತಂತ್ರಗಾರಿಕೆ ಹೆಣೆಯಲಿದೆ.
ಸಮಾನತೆಗೆ ಉಡುಪಿಯೇ ಮಾದರಿ
*ದೇಶದ ನಾನಾ ರಾಜ್ಯಗಳಿಂದ ಬಂದ ವಿವಿಧ ಭಾಷೆ, ಜಾತಿ, ಮತ, ವರ್ಗ, ಪಂಥಕ್ಕೆ ಸೇರಿದ ಸಾಧು, ಸಂತರು, ಮಠಾಧೀಶರಿಗೆ ಧರ್ಮ ಸಂಸದ್ ನೀಡಿದ ಸಮಾನತೆಯ ಸ್ಥಾನ ಮಾನ ಯಾವುದೇ ತಾರತಮ್ಯವಿಲ್ಲದ ಊಟ ಉಪಹಾರ, ವಸತಿ ವ್ಯವಸ್ಥೆ ಜತೆಗೆ ಭಕ್ತಿ, ಗೌರವದ ನಿಟ್ಟಿನಲ್ಲೂ ಮುಂದುವರಿದಿದೆ. ಉಡುಪಿ ದೇಶಕ್ಕೇ ಮಾದರಿಯಾಗಿದೆ.
ಅಷ್ಟ ಮುಖಗಳಿದ್ದರೂ ಹೃದಯ ಮಾತ್ರ ಒಂದೇ!
*ಹಿಂದೂ ಧರ್ಮದ ಮುಖಗಳು(ಶೈವ, ವೈಷ್ಣವ, ಶಾಕ್ತ, ಜೈನ, ಬೌದ್ಧ, ಸಿಖ್) ಅನೇಕವಿದ್ದರೂ ಹೃದಯ ಒಂದೇ ಎನ್ನುವ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಶುಕ್ರವಾರದ ಸಂದೇಶ ಧರ್ಮ ಸಂಸದ್ನ ಅಂತಸ್ಸತ್ವವಾಗಿದೆ.
ಶೋಭಾ ಯಾತ್ರೆ ಸಂಭ್ರಮ: ಮುಸ್ಲಿಮರಿಂದ ತಂಪು ಪಾನೀಯ!
*ಪೇಜಾವರ ಬ್ಲಡ್ ಟೀಂ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸಮುದಾಯದ ವತಿಯಿಂದ ಹಿಂದೂ ಸಮಾಜೋತ್ಸವದ ಅಂಗವಾಗಿ ಜೋಡುಕಟ್ಟೆಯಿಂದ ಹೊರಡು ಶೋಭಾ ಯಾತ್ರೆ ಸಂದರ್ಭ ನ್ಯಾಯಾಲಯದ ಎದುರು ತಂಪು ಪಾನೀಯ ವಿತರಿಸಲಾಗುವುದು ಎಂದು ಟೀಂ ಅಧ್ಯಕ್ಷ ಮೊಹಮ್ಮದ್ ಆರಿಫ್ ತಿಳಿಸಿದ್ದಾರೆ.