ಆ್ಯಪ್ನಗರ

ಗ್ರಹಣದ ಬಗ್ಗೆ ಅನವಶ್ಯಕ ಗೊಂದಲ ಬೇಡ, ಯಾಗಗಳಿಂದ ಸಮಸ್ಯೆಗೆ ಸಿಗಲಿದೆ ಪರಿಹಾರ: ಯಡಿಯೂರಪ್ಪ

ಗುರುವಾರ ಅಂದರೆ ಡಿಸೆಂಬರ್‌ 26ರಂದು ಕಂಕಣ ಸೂರ್ಯಗ್ರಹಣ. ಈಗಾಗಲೇ ಈ ಬಗ್ಗೆ ಸಾರ್ವಜನಿಕರಿಗೆ ಸಾಕಷ್ಟು ತಿಳವಳಿಕೆ ಮೂಡಿಸಲಾಗಿದೆ. ಆದರೂ ಜನರು ಗೊಂದಲಪಡಬಾರದು ಎಂದಿದ್ದಾರೆ ಯಡಿಯೂರಪ್ಪ

Vijaya Karnataka Web 25 Dec 2019, 6:02 pm
ಉಡುಪಿ: ಸತ್ಯ, ಧರ್ಮ, ನ್ಯಾಯದ ಮಾರ್ಗದಲ್ಲಿ ನಡೆಯುವವರಿಗೆ ಯಾವುದೇ ಅಡೆತಡೆ ಬರುವುದಿಲ್ಲ. ಗ್ರಹಣದ ಬಗ್ಗೆ ಅನವಶ್ಯಕ ಗೊಂದಲ ಬೇಡ. ಇಂತಹ ಯಾಗಗಳಿಂದ ಸಮಸ್ಯೆ ಪರಿಹಾರಯಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.‌
Vijaya Karnataka Web ಹೋಮದಲ್ಲಿ ಭಾಗಿಯಾಗಿರುವ ಯಡಿಯೂರಪ್ಪ
ಹೋಮದಲ್ಲಿ ಭಾಗಿಯಾಗಿರುವ ಯಡಿಯೂರಪ್ಪ


ಕಾಪು ತಾಲೂಕಿನ ಯಾಗ ಸಂಘಟನಾ ಸಮಿತಿ ಕುತ್ಯಾರು ವತಿಯಿಂದ ಕಾಪು ಕುತ್ಯಾರು ವಿದ್ಯಾದಾಯಿನಿ ಶಾಲಾ ಪ್ರಾಂಗಣದಲ್ಲಿ ಬುಧವಾರ ನಡೆದ ಲೋಕಕಲ್ಯಾಣಾರ್ಥ ಸಹಸ್ರಮಾನ ನವಕುಂಡ ಶ್ರೀಮಹಾಗಣಪತಿ ಅಥರ್ವಶೀರ್ಷ ಯಾಗ, ಮಹಾ ಅನ್ನಸಂತರ್ಪಣೆ, ಸನಾತನ ಧರ್ಮ ಸಂಸತ್ತು, ಸಾಂಸ್ಕೃತಿಕ ವೈಭವದಲ್ಲಿ ಪಾಲ್ಗೊಂಡ ನಂತರ ಮಾತನಾಡಿದರು.

ಗ್ರಹಣ ಪ್ರಕೃತಿಯಲ್ಲಿನ ಸಾಮಾನ್ಯ ಪ್ರಕ್ರಿಯೆ. ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳಿಂದಾಗಿ ಭಯದ ವಾತಾವರಣ, ತಪ್ಪು ಕಲ್ಪನೆ ಮೂಡಿದೆ. ಈ ಬಗ್ಗೆ ಭಯಬೇಡ. ಗ್ರಹಣ ದೋಷಗಳಿದ್ದರೂ ಇಂತಹ ಯಾಗಗಳಿಂದಾಗಿ ಶ್ರೀಸಾಮಾನ್ಯರ ಜೀವನದಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.

ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಮಾತನಾಡಿ, ರಾಜನಾದವನಿಗೆ ರಾಜ್ಯ ಆಳಲು ಕಾನೂನು, ಕಾಯಿದೆಯಿಂದ ಮಾತ್ರ ಸಾಧ್ಯವಿಲ್ಲ. ದೇವರ ಅನುಗ್ರಹ, ರಕ್ಷಣೆ ಬೇಕಾಗಿದೆ. ಸಿಎಂ ಯಡಿಯೂರಪ್ಪ ಅವರಿಗೆ ಸಂಪೂರ್ಣ ಅನುಗ್ರಹ ಸಿಗಲಿ. ಈ ಮೂಲಕ ರಾಜ್ಯ, ರಾಷ್ಟ್ರ ಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು.

ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಸಿ.ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್. ಮೆಂಡನ್, ವಿ. ಸುನಿಲ್ ಕುಮಾರ್, ಕೆ. ರಘುಪತಿ ಭಟ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ