ಆ್ಯಪ್ನಗರ

ಸಿದ್ದರಾಮಯ್ಯ ಸರಕಾರದ ಮೇಲಿನ ಡ್ರಗ್ಸ್‌ ಆರೋಪ ಬಿಜೆಪಿಯ ಗ್ರಾ.ಪಂ. ಚುನಾವಣೆಯ ಗಿಮಿಕ್‌ - ಸೊರೆಕೆ ಕಿಡಿ

ಕಾಂಗ್ರೆಸ್ ಸರಕಾರ ಉಳಿದಿದ್ದೆ ಡ್ರಗ್ಸ್ ಮಾಫಿಯಾದಿಂದ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಆರೋಪಕ್ಕೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬಿಜೆಪಿ ಎಷ್ಟು ದಿನ ಏನು ಮಾಡುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ.

Vijaya Karnataka 28 Nov 2020, 4:55 pm
ಉಡುಪಿ: ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಮೇಲೆ ಡ್ರಗ್ಸ್ ಮಾಫಿಯಾದ ಆರೋಪ ಮಾಡುವ ಬಿಜೆಪಿ ಇಷ್ಟು ದಿನ ಕತ್ತೆ ಕಾಯುತ್ತಿತ್ತಾ? ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವಿದ್ದಾಗಲೂ ಸದನದಲ್ಲಿ ಧ್ವನಿ ಎತ್ತದ ಬಿಜೆಪಿ ಪಂಚಾಯಿತಿ ಚುನಾವಣೆಗೆ ಗಿಮಿಕ್‌ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಿಡಿಕಾರಿದ್ದಾರೆ.
Vijaya Karnataka Web Vinay Kumar Sorake


ಕಾಂಗ್ರೆಸ್ ಉಳಿದಿದ್ದೆ ಡ್ರಗ್ಸ್ ಮಾಫಿಯಾದಿಂದ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಆರೋಪಕ್ಕೆ ಶನಿವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸೊರಕೆ, “ಬಿಜೆಪಿ ಎಷ್ಟು ದಿನ ಏನು ಮಾಡುತ್ತಿತ್ತು? ಮೈತ್ರಿ ಸರಕಾರವಿದ್ದಗಲೂ ಈ ಬಗ್ಗೆ ಮಾತನಾಡಿಲ್ಲ. ಕೇವಲ ಚುನಾವಣೆಗಾಗಿ ಸಿದ್ದರಾಮಯ್ಯ ಸರಕಾರದ ಮೇಲೆ ಗೂಬೆ ಕೂರಿಸುತ್ತಿದೆ,” ಎಂದರು.

ಬಡವರ ಹಸಿದ ಹೊಟ್ಟೆಯನ್ನು ತಣಿಸುವ ನಿಟ್ಟಿನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ಅಕ್ಕಿಯನ್ನು ಕಡಿತಗೊಳಿಸಲಾಗುತ್ತಿದೆ. ನಮ್ಮ ಸರಕಾರವಿದ್ದಾಗ ಶೇ.80 ರಷ್ಟು ಮಂದಿಗೆ ಬಿಪಿಎಲ್ ಕಾರ್ಡ್ ಕೊಟ್ಟಿದ್ದೆವು. ಈ ಪೈಕಿ ಅನೇಕರ ಪಡಿತರ ಚೀಟಿಯನ್ನೇ ಬಿಜೆಪಿ ರದ್ದು ಮಾಡುತ್ತಿದೆ. ಕೆಲವರ ಮೇಲೆ ಪ್ರಕರಣ ದಾಖಲಿಸಿ ದಂಡ ವಸೂಲಿಗೆ ಸರಕಾರ ಇಳಿದಿದೆ ಎಂದು ಆರೋಪಿಸಿದರು.

ಕುದುರೆ ವ್ಯಾಪಾರ, ಆಪರೇಷನ್ ಕಮಲ

ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಖರೀದಿಸಿ ಅಧಿಕಾರ ನಡೆಸುವ ಬಿಜೆಪಿ ಅಧಿಕಾರಕ್ಕಾಗಿ ಕುದುರೆ ವ್ಯಾಪಾರ ನಡೆಸುವ, ಆಪರೇಷನ್ ಕಮಲದಂತಹ ಮನೋಬುದ್ಧಿ ಹೊಂದಿದೆ. ಗ್ರಾ.ಪಂ. ಚುನಾವಣೆಯಲ್ಲೂ ಕಾಂಗ್ರೆಸ್‍ನ ಬಲಿಷ್ಠ ಅಭ್ಯರ್ಥಿಗಳನ್ನು ಸೆಳೆಯುವಂತೆ ಸಂಸದೆ ಶೋಭಾ ಕರಂದ್ಲಾಜೆ ಸಲಹೆ ನೀಡುತ್ತಿರುವುದು ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ. ಮರಳು ದಂಧೆ, ಮರ ದಂಧೆ, ಸಿಮೆಂಟ್ ದಂಧೆಯಲ್ಲಿ ಬಿಜೆಪಿ ತಲ್ಲೀನವಾಗಿದೆ. ಅಭಿವೃದ್ಧಿ ಬೇಕಿಲ್ಲ ಎಂದು ಅವರು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ