ಆ್ಯಪ್ನಗರ

ಊಟ ಇದ್ರೆ, ನಾಯಕರು ಬರೋದಾದ್ರೆ ಅನುಮತಿ ಕಡ್ಡಾಯ!

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗುತ್ತಿದ್ದು, ನೀತಿ ಸಂಹಿತೆಯ ಕಟ್ಟುನಿಟ್ಟಿನ ಕ್ರಮ ಅಡ್ಡ ದಾರಿ ಹಿಡಿಯುವವರಿಗೆ ಉಸಿರು ಕಟ್ಟುವಂತಿದೆ.

Vijaya Karnataka Web 2 Apr 2018, 5:00 am
ಉಡುಪಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗುತ್ತಿದ್ದು, ನೀತಿ ಸಂಹಿತೆಯ ಕಟ್ಟುನಿಟ್ಟಿನ ಕ್ರಮ ಅಡ್ಡ ದಾರಿ ಹಿಡಿಯುವವರಿಗೆ ಉಸಿರು ಕಟ್ಟುವಂತಿದೆ.
Vijaya Karnataka Web election banner
ಊಟ ಇದ್ರೆ, ನಾಯಕರು ಬರೋದಾದ್ರೆ ಅನುಮತಿ ಕಡ್ಡಾಯ!


ಸರ್‌.. ನಮ್ಮ ಮನೆಯಲ್ಲಿ ಮೆಹಂದಿ, ನಮ್ಮದು ಕೋಲ, ನಮ್ಮ ಮಗಳ ಮದುವೆ, ಗೃಹ ಪ್ರವೇಶದ ಇನ್ವಿಟೇಷನ್‌ ಸರ್‌.... ನೂರು ಜನ ಸೇರುತ್ತಾರೆ... ಇದಕ್ಕೊಂದು ಪರವಾನಗಿ ಕೊಡಿ ಎಂದು ಚುನಾವಣಾಧಿಕಾರಿಗಳನ್ನು ಜನ ಕೇಳಿಕೊಳ್ಳುವಂತಾಗಿದೆ.ಒಂದೆಡೆ ಜನರನ್ನು ಸೇರಿಸಿ ಊಟ ನೀಡುವುದು, ಯಾವ ಜನಪ್ರತಿನಿಧಿಗಳು ಬರುತ್ತಾರೆ ಎನ್ನುವುದನ್ನು ಮೊದಲೇ ಅಧಿಕಾರಿಗಳಿಗೆ ತಿಳಿಸಬೇಕಿದೆ. ಮೆಹಂದಿ, ಮದುವೆ, ಗೃಹಪ್ರವೇಶದಂತಹ ಯಾವುದೇ ಕಾರ್ಯಕ್ರಮಗಳಿಗೂ ಚುನಾವಣಾಧಿಕಾರಿಗಳ ಪರವಾನಗಿ ಪತ್ರ ಕಡ್ಡಾಯವಾಗಿದೆ.

ಹಬ್ಬ ಹರಿದಿನ, ಮದುವೆ, ಮುಂಜಿ, ಕೋಲ, ನೇಮ, ಧಾರ್ಮಿಕ ಸಭೆ,ಸಮಾರಂಭ, ಗೃಹ ಪ್ರವೇಶ ಸಹಿತ ಕಾರ್ಯಕ್ರಮಗಳ ಗೋಜಿನಲ್ಲಿ ಇರುವವರೆಗೆ ಚುನಾವಣಾಧಿಕಾರಿಗಳ ಪರವಾನಗಿ ಕಡ್ಡಾಯವಾಗಿರುವುದು ಕೊಂಚ ಕಸಿವಿಸಿಯಾಗಿದೆ. ಆದರೂ ಮುಂದಾಗುವ ಅನಾಹುತ ತಪ್ಪಿಸಲು ರಾಜಕೀಯೇತರ ಕಾರ್ಯಕ್ರಮಕ್ಕೂ ಚುನಾವಣಾಧಿಕಾರಿಗಳ ಒಪ್ಪಿಗೆ ಅಗತ್ಯವಾಗಿದೆ ಎನ್ನುತ್ತಾರೆ ಜಿಲ್ಲಾಡಳಿತದ ಅಧಿಕಾರಿಗಳು.

ಕರಾವಳಿಯಲ್ಲಿ ಇದೀಗ ಕೋಲ, ನೇಮ, ಮದುವೆಯ ಸಂಭ್ರಮ ಇರುವುದರಿಂದ ನೀತಿ ಸಂಹಿತೆ ಕಟ್ಟು ನಿಟ್ಟಿನ ಪಾಲನೆ ಸ್ಥಳೀಯರಿಗೆ ನುಂಗಲಾರದ ತುತ್ತಾಗಿದೆ. ವರ್ಷಕ್ಕೊಮ್ಮೆ ಬರುವ ಧಾರ್ಮಿಕ ಕಾರ್ಯಕ್ರಮಕ್ಕೂ ಈ ರೀತಿ ಮಾಡುವುದು ಸರಿಯೇ. ದೇವರಿಗೆ ರಾಜಕೀಯ ಇದೆಯೇ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು. ಆದರೆ ಅಧಿಕಾರಿಗಳು ಸ್ಥಳೀಯರ ಪ್ರಶ್ನೆಗೆ ಅಷ್ಟೇ ನಾಜೂಕಾಗಿ ಉತ್ತರಿಸಿ ಯಾವುದಕ್ಕೂ ಜಗ್ಗದೇ ನಿಯಮಗಳ ಪಟ್ಟಿಯನ್ನೇ ಮುಂದಿಡುತ್ತಿದ್ದಾರೆ.

ಕಾರ್ಯಕ್ರಮ ಆಯೋಜಕರು ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕಿದೆ. ಊಟದ ವ್ಯವಸ್ಥೆ ಇರುವಲ್ಲಿಗೆ ನಮ್ಮ ವಿಡಿಯೋ ಸರ್ವೇಕ್ಷಣೆ ತಂಡ ತೆರಳುತ್ತದೆ. ಅಲ್ಲಿಗೆ ಯಾರೆಲ್ಲ ಬರುತ್ತಾರೆ ಎಂಬುದನ್ನು ಗಮನಿಸಬೇಕಾಗುತ್ತದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಸಾಬೀತಾದರೆ ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ತಿಳಿಸಿದ್ದಾರೆ.

13 ಸಾವಿರ ಬ್ಯಾನರ್‌ ತೆರವು

ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳದು ಸಹಿತ 13 ಸಾವಿರ ಬ್ಯಾನರ್‌, ಫೆಕ್ಸ್‌ಗಳನ್ನು ತೆರವು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ತಿಳಿಸಿದ್ದಾರೆ. ಕಾನೂನು ಪ್ರಕಾರ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ಬ್ಯಾನರ್‌ ಹಾಕುವ ಜಾಗವನ್ನು ಗುರುತಿಸಿ ಆ ಬಗ್ಗೆ ಸುತ್ತೋಲೆ ಹೊರಡಿಸಬೇಕು. ಉಡುಪಿ ನಗರಸಭೆ ಹೊರತು ಪಡಿಸಿಉಳಿದ ಯಾವುದೇ ಗ್ರಾ.ಪಂ. ಗಳು ಈ ರೀತಿಯ ಸುತ್ತೋಲೆಯನ್ನು ಇದುವರೆಗೆ ಹೊರಡಿಸಿಲ್ಲ. ಧಾರ್ಮಿಕ ಕಾರ್ಯಕ್ರಮ ನಡೆಯುವ ಜಾಗದಲ್ಲಿ ಕಟೌಟ್‌ಗಳನ್ನು ಅಳವಡಿಸುವುದಕ್ಕೆ ಯಾವುದೇ ತೊಂದರೆ ಇಲ್ಲ. ಅದು ಬಿಟ್ಟು ಬಸ್‌ನಿಲ್ದಾಣ ಸಹಿತ ಸಾರ್ವಜನಿಕ ಸ್ಥಳದಲ್ಲಿ ಅವುಗಳನ್ನು ಹಾಕುವಂತಿಲ್ಲ ಎಂದು ಡಿಸಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೇಲೂ ನಿಗಾ

ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರ, ಟೀಕೆಗಳು, ಮಾನನಷ್ಟ ಮಾಡುವವರ ಬಗ್ಗೆ ನಿಗಾ ಇಡಲಾಗಿದೆ. ಒಂದು ವೇಳೆ ಅಂತಹ ಘಟನೆ ನಡೆದಿರುವುದು ಸಾಬೀತಾದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

-ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ