ಆ್ಯಪ್ನಗರ

ಸಂಕಷ್ಟದಲ್ಲಿ ಮತ್ಸ್ಯಭೇಟಿಯಾಡುವ ಮೀನುಗಾರರನ್ನು ಕಡೆಗಣಿಸಬೇಡಿ: ಜಿ. ಶಂಕರ್‌

ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಬೋಟ್‌ ಹಾಗೂ ಮೀನುಗಾರರ ನಾಪತ್ತೆ ಪ್ರಕರಣವನ್ನು ಕೇಂದ್ರ ಸರಕಾರ ಮತ್ತು ರಕ್ಷಣಾ ಸಚಿವಾಲಯ ಗಂಭೀರವಾಗಿ ಪರಿಗಣಿಸಿ ಮೀನುಗಾರರ ರಕ್ಷಣೆ ಕಾರ್ಯಾಚರಣೆಗೆ ಮುಂದಾಗಬೇಕು. ಸಂಕಷ್ಟದಲ್ಲಿ ದುಡಿಯುವ ಈ ಸಮುದಾಯವನ್ನು ಯಾವ ಕಾರಣಕ್ಕೂ ಕಡೆಗಣಿಸಬಾರದು ಎಂದು ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್‌ ತಿಳಿಸಿದ್ದಾರೆ.

Vijaya Karnataka Web 31 Dec 2018, 5:00 am
ಉಡುಪಿ : ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಬೋಟ್‌ ಹಾಗೂ ಮೀನುಗಾರರ ನಾಪತ್ತೆ ಪ್ರಕರಣವನ್ನು ಕೇಂದ್ರ ಸರಕಾರ ಮತ್ತು ರಕ್ಷಣಾ ಸಚಿವಾಲಯ ಗಂಭೀರವಾಗಿ ಪರಿಗಣಿಸಿ ಮೀನುಗಾರರ ರಕ್ಷಣೆ ಕಾರ್ಯಾಚರಣೆಗೆ ಮುಂದಾಗಬೇಕು. ಸಂಕಷ್ಟದಲ್ಲಿ ದುಡಿಯುವ ಈ ಸಮುದಾಯವನ್ನು ಯಾವ ಕಾರಣಕ್ಕೂ ಕಡೆಗಣಿಸಬಾರದು ಎಂದು ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್‌ ತಿಳಿಸಿದ್ದಾರೆ.
Vijaya Karnataka Web UDP-30AA SHANKAR


ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ಆಶ್ರಯದಲ್ಲಿ ಮೀನುಗಾರಿಕಾ ಇಲಾಖೆ ಸಹಯೋಗದೊಂದಿಗೆ ಮಲ್ಪೆ ಕಡಲ ಕಿನಾರೆಯ ಅಂಬಿಗರ ಚೌಡಯ್ಯ ವೇದಿಕೆಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಬೃಹತ್‌ ಮತ್ಸ್ಯ ಮೇಳ ಉದ್ಘಾಟಿಸಿ ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ರೈತರಿಗೆ ಸಮಸ್ಯೆಯಾದರೆ ಸರಕಾರದ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗುತ್ತದೆ. ಆದರೆ ಸಂಕಷ್ಟದಲ್ಲೇ ಮತ್ಸ್ಯಭೇಟಿಯಾಡುವ ಕರಾವಳಿಯ ಮೀನುಗಾರರ ಕಷ್ಟಕ್ಕೆ ಬೆಲೆ ಇಲ್ಲದಾಗಿದೆ. ಪ್ರಸ್ತುತ ಮೀನುಗಾರರು ನಾನಾ ತೊಂದರೆಗಳನ್ನು ಎದುರಿಸುತ್ತಿದ್ದು, ರೈತರಿಗೆ ಸರಕಾರದಿಂದ ಸಿಗುವ ಸಬ್ಸಿಡಿ, ಸಾಲ ಸೌಲಭ್ಯಗಳನ್ನು ಈ ಸಮುದಾಯಕ್ಕೂ ವಿಸ್ತರಣೆಗೆ ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.

ಮೀನುಗಾರಿಕೆಗೆ ಹೋಗಿದ್ದ ಬೋಟ್‌ ಹಾಗೂ ಮೀನುಗಾರರು ಕಳೆದ 10, 15 ದಿನಗಳಿಂದ ಬೋಟ್‌ ಸಮೇತವಾಗಿ ನಾಪತ್ತೆಯಾಗಿದ್ದು, ಇದುವರೆಗೆ ಸುಳಿವು ಸಿಕ್ಕಿಲ್ಲ. ಇಡೀ ಸಮುದಾಯವೇ ಆತಂಕದಲ್ಲಿದೆ. ಕರಾವಳಿಯಲ್ಲಿ ಸೂತಕ ಆವರಿಸಿದೆ. ನಮ್ಮ ಸಮಸ್ಯೆಗೂ ಸ್ವಲ್ಪ ಸ್ಪಂದನೆ ಕೊಡಿ. ಸುಮ್ಮನೆ ಹಾರಿಕೆ ಉತ್ತರ ನಮಗೆ ಬೇಕಿಲ್ಲ. ರಾಜ್ಯದ ಜನಪ್ರತಿನಿಧಿಗಳು ಕೇಂದ್ರಕ್ಕೆ ಒತ್ತಡ ಹಾಕಿ ಸೂಕ್ತ ರೀತಿಯ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಶಾಸಕ ವಿ. ಸುನೀಲ್‌ ಕುಮಾರ್‌ ಮಾತನಾಡಿ, ಮೀನುಗಾರರ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರಕ್ಕೆ ಒತ್ತಡ ಹಾಕಿ ಪ್ರಾಮಾಣಿಕವಾಗಿ ಹುಡುಕುವುದಾಗಿ ಭರವಸೆ ನೀಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ ಮಾತನಾಡಿ, ಮೀನುಗಾರರ ನಾಪತ್ತೆಯ ನೋವು ನಮಗೆ ಸಾಕಷ್ಟಿದೆ. ಈ 8 ಮಂದಿಯೂ ಸುರಕ್ಷಿತವಾಗಿ ಮನೆಗೆ ಹಿಂತಿರುಗಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಲಾಲಾಜಿ ಆರ್‌. ಮೆಂಡನ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ನಗರ ಸಭಾ ಸದಸ್ಯೆ ಲಕ್ಷ್ಮೇ ಮಂಜುನಾಥ ಸಾಲ್ಯಾನ್‌, ಅದಾನಿ ಯುಪಿಸಿಎಲ್‌ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ, ರಾಜ್ಯ ಸಹಕಾರಿ ಮೀನುಗಾರಿಕಾ ಮಹಾಮಂಡಲ ಮೈಸೂರು ಅಧ್ಯಕ್ಷ ಮಾದೇಗೌಡ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ, ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಮೊಗವೀರ ಯುವ ಸಂಘಟನೆ ಉಡುಪಿ ಅಧ್ಯಕ್ಷ ವಿನಯ ಕರ್ಕೇರ, ಗುಜರಾತ್‌ ರಾಜ್ಯ ಸರಕಾರಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ವೆಲ್ಜಿಭಾಯಿ ಕೆ. ಮಸಾನಿ, ಉದ್ಯಮಿಗಳಾದ ಆನಂದ ಸಿ. ಕುಂದರ್‌, ಆನಂದ ಪಿ. ಸುವರ್ಣ, ಮನೋಹರ ಶೆಟ್ಟಿ, ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌, ರಾಜೇಂದ್ರ ಸುವರ್ಣ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ