ಆ್ಯಪ್ನಗರ

ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಿ ಹೊಳೆಯುತ್ತಿವೆ 4 ಗ್ರಹಗಳು

ಈ ವಾರ ಸಂಜೆಯ ಆಕಾಶದಲ್ಲಿ ನಾಲ್ಕು ಗ್ರಹಗಳ ದರ್ಶನ ಭಾಗ್ಯ ಖಗೋಳ ಪ್ರಿಯರಿಗೆ ಲಭಿಸಲಿದೆ.

Vijaya Karnataka 10 Sep 2018, 7:53 am
ಉಡುಪಿ: ಈ ವಾರ ಸಂಜೆಯ ಆಕಾಶದಲ್ಲಿ ನಾಲ್ಕು ಗ್ರಹಗಳ ದರ್ಶನ ಭಾಗ್ಯ ಖಗೋಳ ಪ್ರಿಯರಿಗೆ ಲಭಿಸಲಿದೆ.
Vijaya Karnataka Web planet


ಸಂಜೆ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಬೆಳ್ಳಿ ಚುಕ್ಕಿಯಂತೆ ಹೊಳೆಯುವ ಶುಕ್ರ, ನಂತರ ಕ್ರಮವಾಗಿ ಗುರು ಗ್ರಹ, ಶನಿ ಹಾಗೂ ಮಂಗಳ ಗ್ರಹಗಳ ಸುಂದರ ನೋಟ ಕಾಣಿಸಲಿದೆ.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ.ಪಿ. ಭಟ್‌ ಪ್ರಕಾರ ಮಳೆಯಿಂದಾಗಿ ಈ ಅಪೂರ್ವ ಖಗೋಳ ವಿದ್ಯಮಾನವನ್ನು ಬಹುತೇಕ ಖಗೋಳಾಸಕ್ತರು ಮಿಸ್‌ ಮಾಡಿಕೊಂಡಿದ್ದಾರೆ. ಆದರೆ ಇದೀಗ ಮಳೆ ಕಡಿಮೆಯಾಗಿದ್ದು, ರಾತ್ರಿ ವೇಳೆ ಅದರಲ್ಲಿಯೂ ಸೂರ್ಯಾಸ್ತದ ನಂತರ ಶುಭ್ರ ಆಕಾಶವಿರುವುದರಿಂದ ಈ ನಾಲ್ಕು ಗ್ರಹಗಳನ್ನು ಚೆನ್ನಾಗಿ ವೀಕ್ಷಿಸಬಹುದಾಗಿದೆ.

ದೂರದರ್ಶಕದಲ್ಲಿ ಶುಕ್ರ, ಗುರು ಹಾಗೂ ಶನಿ ಸುಂದರವಾಗಿ ಕಾಣಿಸಲಿವೆ. ಗುರುವಿನ 4 ಉಪಗ್ರಹಗಳು, ಶನಿಯ ಬಳೆ ಸುಂದರವಾಗಿ ಗೋಚರಿಸುತ್ತಿದೆ.

ಈ ಅಪರೂಪದ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಹವ್ಯಾಸಿ ಖಗೋಳ ವೀಕ್ಷಕರ ಸಂಘದಿಂದ ಸೆ.11ರಂದು ಸಂಜೆ 6ರಿಂದ 8 ಗಂಟೆಯವರೆಗೆ ಆಕಾಶ ವೀಕ್ಷ ಣೆ ಆಯೋಜಿಸಲಾಗಿದೆ. ಮಳೆ ಇಲ್ಲದ ಶುಭ್ರ ಆಕಾಶವಿದ್ದಲ್ಲಿ ಸಾರ್ವಜನಿಕರೂ ಬರಬಹುದು, ನೋಡಿ ಆನಂದಿಸಬಹುದು ಎಂದು ಅವರು ತಿಳಿಸಿದ್ದಾರೆ.

ಶುಕ್ರ ಗ್ರಹ ಬೆಳ್ಳಿ ಚುಕ್ಕೆಯಂತೆ ಬರಿಗಣ್ಣಿಗೆ ಗೋಚರಿಸಿದರೂ ದೂರದರ್ಶಕದ ಮೂಲಕ ವೀಕ್ಷಿಸಿದಾಗಿ ಚೌತಿ ಚಂದ್ರನಂತೆ ಅರ್ಧ ಚಂದ್ರಾಕೃತಿಯಲ್ಲಿ ಹೊಳೆಯುತ್ತಿರುವುದು ಕಂಡು ಬರುತ್ತಿದೆ. ಸೆ.15ರ ನಂತರ ಶುಕ್ರ ಗ್ರಹ ಕಾಣಿಸುವುದಿಲ್ಲ.

ಶನಿಗ್ರಹ ಈ ವರ್ಷವಿಡೀ ಪ್ರಕಾಶಮಾನವಾಗಿ ಕಾಣಿಸುತ್ತದೆ. ಮಂಗಳ ಗ್ರಹ ಎರಡು ವರ್ಷಕ್ಕೊಮ್ಮೆ ಚೆನ್ನಾಗಿ ಕಾಣುತ್ತಿದ್ದು, ಅದನ್ನು ನೋಡಲು ಇದು ಸಕಾಲ. ಆಸಕ್ತರಿಗೆ ಗ್ರಹಗಳನ್ನು ಗುರುತಿಸಲು ಸಾಧ್ಯವಾಗಲು ಶುಕ್ರ ಬೆಳ್ಳಿ ಚುಕ್ಕೆಯಂತೆ, ಗುರು ತಿಳಿ ಹಳದಿ ಬಣ್ಣ, ಶನಿ ತಿಳಿ ಹಳದಿ ಬಿಳಿ ಬಣ್ಣ ಹಾಗೂ ಮಂಗಳ ಕೆಂಪಾಗಿ ಕಾಣುತ್ತಾರೆ.

ಬರಿಗಣ್ಣಲ್ಲಿ ಈ ಎಲ್ಲ ಗ್ರಹಗಳು ಕಾಣುತ್ತವೆಯಾದರೂ, ಟೆಲಿಸ್ಕೋಪ್‌ ಇದ್ದರೆ ಅಥವಾ ಹೈಝೂಮ್‌ ಕ್ಯಾಮೆರಾಗಳು ಇದ್ದರೆ ಇವನ್ನು ಇನ್ನಷ್ಟು ಹತ್ತಿರದಿಂದ ವೀಕ್ಷಿಸಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ