ಕೋಟ: ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ನ.7ರಿಂದ 10ರ ವರೆಗೆ ಕಾಲೇಜಿನ ವಿದ್ಯಾರ್ಥಿ ಪ್ರಧೀಶ್ ಕೆ. ಅವರು 'ಲಾಂಗೆಸ್ಟ್ ಡ್ರಾಯಿಂಗ್ ಬೈ ಆನ್ ಇನ್ಡಿವಿಜುವಲ್' ಹೆಸರಿನಲ್ಲಿ ಸ್ವಚ್ಛ ಭಾರತ್ ಕಲ್ಪನೆಯಲ್ಲಿ ಸುಮಾರು 1000 ಮೀ. ಉದ್ದದ ಚಿತ್ರ ರಚಿಸುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧನೆಯ ಪ್ರಯತ್ನ ಶುಕ್ರವಾರ ಮುಕ್ತಾಯವಾಗಿದೆ.
ಒಟ್ಟು 33.38 ಗಂಟೆಗಳಲ್ಲಿ 1174.28 ಮೀ. ಉದ್ದದಲ್ಲಿ 10 ಸೆಂ.ಮೀ. ಪೇಪರ್ ರೋಲ್ನಲ್ಲಿ ಚಿತ್ರ ಬಿಡಿಸುವ ಮೂಲಕ ನೂತನ ದಾಖಲೆ ಮಾಡಿದ್ದು, ಗಿನ್ನೆಸ್ ಸಂಸ್ಥೆಯ ಅಧಿಕೃತ ಘೋಷಣೆಯಷ್ಟೆ ಬಾಕಿ ಉಳಿದಿದೆ.
ಈ ಹಿಂದೆ ತಮಿಳುನಾಡಿನ ಪರಿಮಳ ಕಾಂಸ್ ಎಂಬವರು 666.22 ಮೀ. ಚಿತ್ರ ಬಿಡಿಸಿ ಗಿನ್ನೆಸ್ ದಾಖಲೆಗೆ ಮಾಡಿದ್ದರು. ಇದೀಗ ಪ್ರಧೀಶ್ 1174.28 ಮೀ. ಚಿತ್ರ ಬಿಡಿಸಿರುವುದರಿಂದ ನೂತನ ದಾಖಲೆ ಈತನ ಹೆಸರಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಪ್ರಸ್ತುತ ದಾಖಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ ಗಿನ್ನೆಸ್ ಮಂಡಳಿಗೆ ರವಾನಿಸಲು ತಯಾರಿ ನಡೆದಿದ್ದು, 2018ರಲ್ಲಿ ಫಲಿತಾಂಶ ಲಭಿಸುವ ಸಾಧ್ಯತೆ ಇದೆ.
ನ.7ರಂದು ಬೆಳಗ್ಗೆ 9.27ಕ್ಕೆ ಪ್ರಧೀಶ್ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರ ರಚನೆ ಆರಂಭಿಸಿದ್ದು, ಮೊದಲನೇ ದಿನ ಭವ್ಯ ಭಾರತ, 2ನೇ ದಿನ ಭಾರತ ಇಂದು ಹೇಗೆ ಕಲುಷಿತವಾಗುತ್ತಿದೆ ಎನ್ನುವ ಕುರಿತು ಕಲುಷಿತ ಭಾರತ, 3ನೇ ದಿನ ಸ್ವಚ್ಛ ಭಾರತ ಹೇಗಿದೆ ಎನ್ನುವ ಕಲ್ಪನೆ, 4ನೇ ದಿನ ಅಭಿವೃದ್ಧಿ ಭಾರತದ ಕಲ್ಪನೆಯನ್ನು ಚಿತ್ರಿಸಿದ್ದರು. ಪ್ರಧಾನ ಮಂತ್ರಿಯವರ ಸ್ವಚ್ಛ ಭಾರತ ಆಂದೋಲನವನ್ನು ತನ್ನ ಗಿನ್ನೆಸ್ ದಾಖಲೆಗೆ ಥೀಂ ಆಗಿ ಆರಿಸಿಕೊಂಡಿದ್ದ ಪ್ರಧೀಶ್ ಚಿತ್ರ ರಚನೆಗೆ ಪೆನ್ಸಿಲ್, ಮಾರ್ಕರ್ ಮತ್ತು ಕ್ರೇಯಾನ್ಗಳನ್ನು ಬಳಸಿದ್ದು, ತನ್ನ ಇಷ್ಟದ ಸಂಗೀತ ಕೇಳುತ್ತಾ ನಿರಂತರ ಚಿತ್ರ ಬಿಡಿಸಿದ್ದಾರೆ.
ಚಿತ್ರ ರಚನೆ ಮುಕ್ತಾಯ: ಶುಕ್ರವಾರ ಮಧ್ಯಾಹ್ನ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಹಾಕಲಾಗಿದ್ದ ಗ್ರೀನ್ ನೆಟ್ ಮೇಲೆ ಪ್ರಧೀಶ್ ಕೆ. ಚಿತ್ರವನ್ನು ಸಾಲಾಗಿ ಜೋಡಿಸಲಾಯಿತು. ಬಳಿಕ ನಿರಂತರ ವಿಡಿಯೋ ರೆಕಾರ್ಡ್ ನಡೆಸಿದರು. ಉಡುಪಿ ಪಿಡಬ್ಲ್ಯೂಡಿ ಎಇಇ ಡಿ.ವಿ. ಹೆಗ್ಡೆ ಚಿತ್ರದ ಉದ್ದವನ್ನು ಅಳೆದರು. ಈ ಸಂದರ್ಭ ಪ್ರಖ್ಯಾತ ಕಲಾವಿದ ರಮೇಶ್ ರಾವ್, ಗಿನ್ನೆಸ್ ದಾಖಲೆಯ ಈಜುಪಟು ಗೋಪಾಲ್ ಖಾರ್ವಿ, ನೋಟರಿ ಕೆ. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದು ಗಿನ್ನೆಸ್ ಸಾಕ್ಷೀಕರಿಸಿದರು.
ಸಮಾರೋಪ: ಸಮಾರೋಪದಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಸಮಾರೋಪ ಭಾಷಣ ಮಾಡಿದರು. ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷ ತೆ ವಹಿಸಿದ್ದರು.
ಚೇರ್ಕಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್, ವಿವೇಕ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಪ್ರಭಾಕರ ಮಯ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಉಪಾಧ್ಯ, ಉಡುಪಿಯ ಉದ್ಯಮಿ ಮನೋಹರ್ ಶೆಟ್ಟಿ, ಉದ್ಯಮಿ ಧನಂಜಯ್ ಅಮೀನ್, ರೋಟರಿ ಕೋಟ ಸಿಟಿ ಅಧ್ಯಕ್ಷ ಸುಬ್ರಾಯ ಆಚಾರ್ಯ, ಕೋಟ-ಸಾಲಿಗ್ರಾಮ ರೋಟರಿ ಅಧ್ಯಕ್ಷ ವ್ಯಾಸರಾಯ್ ಆಚಾರ್ಯ, ಕರ್ಜೆ ಬಾಲಕೃಷ್ಣ ಶೆಟ್ಟಿ, ವಿವೇಕ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷ ಕರಾದ ಶ್ರೀಪತಿ ಹೇರ್ಳೆ, ವೆಂಕಟೇಶ ಉಡುಪ, ಜಗದೀಶ ಹೊಳ್ಳ, ಪ್ರಧೀಶ್ ತಾಯಿ ಪ್ರಸನ್ನಾ ಪ್ರಸಾದ್ ಭಟ್, ಚಿತ್ರ ಕಲಾವಿದ ರಮೇಶ ರಾವ್, ಸಹಾಯಕ ಕಾರ್ಯಪಾಲಕ ಅಭಿಯಂತರ ಡಿ.ವಿ. ಹೆಗ್ಡೆ, ಗಿನ್ನೆಸ್ ದಾಖಲೆಯ ಈಜುಪಟು ಗೋಪಾಲ ಖಾರ್ವಿ, ನೋಟರಿ ವಕೀಲ ಕೆ. ಬಾಲಕೃಷ್ಣ ಶೆಟ್ಟಿ, ಹರೀಶ್ ಎಸ್. ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜು ಪ್ರಿನ್ಸಿಪಾಲ್ ಜಗದೀಶ್ ನಾವಡ ಸ್ವಾಗತಿಸಿದರು. ಶಿವಪ್ರಸಾದ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮ್ಪ್ರಸಾದ್ ಭಟ್ ವಂದಿಸಿದರು.