ಆ್ಯಪ್ನಗರ

ವರ್ಗಾವಣೆ ದಂಧೆಗೆ ಸಿಎಂ ಯಡಿಯೂರಪ್ಪ ತಮ್ಮ ಪುತ್ರನನ್ನೇ ಬಿಟ್ಟಿದ್ದಾರೆ: ಎಚ್.ಡಿ.ಕೆ ಆರೋಪ

ಸಿಎಂ ಬಿಎಸ್‍ವೈ ವರ್ಗಾವಣೆ ದಂಧೆಗೆ ತನ್ನ ಪುತ್ರನನ್ನೇ ಮುಂದೆ ಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

Vijaya Karnataka Web 18 Aug 2019, 8:11 pm
ಉಡುಪಿ: ಮೈತ್ರಿ ಸರಕಾರದ ಪತನಕ್ಕೆ ವಾಮ ಮಾರ್ಗ ಅನುಸರಿಸಿದ ಬಿಜೆಪಿ ನಮ್ಮ ಮೇಲೆ ವರ್ಗಾವಣೆ ದಂಧೆಯ ಆರೋಪ ಮಾಡಿ ಕುತಂತ್ರದಲ್ಲೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇದೀಗ ಸಿಎಂ ಬಿಎಸ್‍ವೈ ವರ್ಗಾವಣೆ ದಂಧೆಗೆ ತನ್ನ ಪುತ್ರನನ್ನೇ ಮುಂದೆ ಬಿಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
Vijaya Karnataka Web hdk


ಶ್ರೀಕೃಷ್ಣ ಮಠಕ್ಕೆ ಭಾನುವಾರ ಆಗಮಿಸಿದ ಅವರು ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮೈತ್ರಿ ಸರಕಾರದ ಮೇಲೆ ವರ್ಗಾವಣೆ ದಂಧೆ, ಇಲ್ಲಸಲ್ಲದ ಆರೋಪ ಮಾಡಿದ್ದರು. ಆದರೆ ಜೈಲಿನಲ್ಲಿದ್ದ ತಹಶೀಲ್ದಾರ್‌ಗೆ ಯಲಹಂಕದಲ್ಲಿ ಪೋಸ್ಟ್ ಕೊಟ್ಟಿದ್ದಾರೆ. ಆತ ನನ್ನ ಅಧಿಕಾರವಾಧಿಯಲ್ಲಿ ಸಾಕಷ್ಟು ಬಾರಿ ಪ್ರಯತ್ನಿಸಿದ್ದ. ನಾನು ಬೇಕೆಂದು ತಡೆಹಿಡಿದ್ದೆ. ಆತನ ಪೋಸ್ಟ್‌ಗೆ ಎಷ್ಟು ವ್ಯವಹಾರ ಆಗಿದೆ ಹೇಳಿ? ಇದಕ್ಕೆ ಬಿಎಸ್‍ವೈ ಪಟಲಾಂ ಏನು ಹೇಳುತ್ತದೆ? ಈ ಸರಕಾರದ ಪ್ರಾಮಾಣಿಕತೆಯ ನಿಜ ಬಣ್ಣ ಮುಂದಿನ ದಿನಗಳಲ್ಲಿ ಬಯಲಾಗುತ್ತದೆ ಎಂದರು.

ರಾಜ್ಯದಲ್ಲಿ ಕಳೆದ 25 ದಿನಗಳಿಂದ ಸಂಪುಟ ವಿಸ್ತರಣೆಯಾಗಿಲ್ಲ. ನೆರೆಯಿಂದಾಗಿ ಲಕ್ಷಾಂತರ ಮಂದಿಗೆ ಬೀದಿಗೆ ಬಂದಿದ್ದು, ಆತಂಕದಲ್ಲಿದ್ದಾರೆ. ರಾಜ್ಯ ಸರಕಾರಕ್ಕೆ ನೆರೆಯಿಂದಾಗಿ ಆಗಿರುವ ಕೃಷಿ ವಲಯ ಮತ್ತು ಆಸ್ತಿಪಾಸ್ತಿ ನಷ್ಟ, ಮನೆ ಮುಳುಗಡೆಯಾಗಿರುವ ಹಾನಿಯ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಶೀಘ್ರವೇ ಸರಕಾರ ಸಂತ್ರಸ್ತರಿಗೆ ಯಾವ ರೀತಿ ನೆರವು ನೀಡಿ ಬದುಕು ಕಟ್ಟಿಕೊಡುತ್ತದೆ ಎನ್ನುವುದನ್ನು ಸ್ಪಷ್ಟ ಪಡಿಸಲಿ ಎಂದು ತಾಕೀತು ಮಾಡಿದರು.

ಕೇಂದ್ರ ಸರಕಾರ ನಾಯಕರಿಬ್ಬರೂ ಪ್ರವಾಸ ಮಾಡಿ ಹೋಗಿದ್ದಾರೆ. ಆದರೆ ಇದುವರೆಗೆ ನೆರವಿನ ಸುಳಿವು ಸಿಕ್ಕಿಲ್ಲ. 2010 ರ ಯುಪಿಎ ಸರಕಾರದ ಅಧಿಕಾರ ವೇಳೆ ಇಂತಹ ಪರಿಸ್ಥಿತಿ ಉಂಟಾಗಿದ್ದು, ಕೂಡಲೇ 1000 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ ಬಿಜೆಪಿ ಬಿಡಿಗಾಸು ಕೂಡಾ ಕೊಟ್ಟಿಲ್ಲ. ಇದು ರಾಜ್ಯವನ್ನು ಕೇಂದ್ರ ಸರಕಾರ ಹೇಗೆ ಕಾಣುತ್ತಿದೆ ಎನ್ನುವುದನ್ನು ತೋರಿಸುತ್ತದೆ ಎಂದರು.

ಒಂದು ವರ್ಗದ ಮಾಧ್ಯಮ ಮೈತ್ರಿ ಸರಕಾರ ಅಸ್ಥಿರತೆಗೊಳಿಸಲು ವ್ಯವಸ್ಥಿತವಾಗಿ ಸಂಚು ರೂಪಿಸಿತ್ತು. ನನ್ನ ಮೇಲೆ ಹೂಡಿದ ಎಲ್ಲಾ ಅಸ್ತ್ರವೂ ನಿಶ್ಯಸ್ತ್ರವಾಗುತ್ತದೆ. ಕಳೆದ 14 ತಿಂಗಳು ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿದ್ದೇನೆ. ನಾನ್ಯಾಕೆ ಭಯ ಪಡಬೇಕು? ನಾನೇನು ಚೆಕ್ ಮೂಲಕ ಹಣ ಪಡೆದಿಲ್ಲ. ರಾಜ್ಯವನ್ನು ಲೂಟಿಯೂ ಮಾಡಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ, ಮಾಜಿ ಸಚಿವ ಸಾರಾ ಮಹೇಶ್, ಮುಖಂಡರಾದ ಯೋಗೀಶ್ ಶೆಟ್ಟಿ, ಶಾಲಿನಿ ಶೆಟ್ಟಿ, ಪ್ರದೀಪ್ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ