ಆ್ಯಪ್ನಗರ

ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸ್ಧಿತಿ ಅಧೋಗತಿ

​ಆರೋಗ್ಯ ಇಲಾಖೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರಿಗೆ ಯಾವುದೇ ಭತ್ಯೆ ಇಲ್ಲ. ಅತ್ಯಲ್ಪ ಸಂಬಳ, ರಜೆಯಲ್ಲಿ ತಾರತಮ್ಯ, ಆರೋಗ್ಯ ಹದಗೆಟ್ಟರೆ ಯಾವುದೇ ವಿಮೆ ಸೌಲಭ್ಯ ಇಲ್ಲ. ಮುಖ್ಯವಾಗಿ ಕೆಲಸಕ್ಕೆ ಭದ್ರತೆ ಇಲ್ಲ. ರಾಷ್ಟ್ರೀಯ ಆರೋಗ್ಯ ಅಭಿಯಾನ ಹುಟ್ಟಿಕೊಂಡಿರುವುದು ಆರೋಗ್ಯ ಇಲಾಖೆಯ ಸರ್ವತೋಮುಖ ಅಭಿವೃದ್ಧಿಗಾಗಿ ಬೆವರು ಸುರಿಸಿ ದುಡಿಯುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಜೀವನದ ಸ್ಧಿತಿ ದುರ್ಬಲವಾಗಿದೆ.

Vijaya Karnataka Web 21 May 2020, 7:39 am
ಜಗದೀಶ ದೇವಾಡಿಗ ಮುಳ್ಳಿಕಟ್ಟೆ
Vijaya Karnataka Web health department

ಉಡುಪಿ:ರಾಜ್ಯದಲ್ಲಿ ಅಲ್ಪ ಸಂಬಳಕ್ಕೆ ಸುಮಾರು 23 ಸಾವಿರಕ್ಕೂ ಹೆಚ್ಚು ನೌಕರರು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ದುಡಿಯುವ ಗುತ್ತಿಗೆ, ಹೊರಗುತ್ತಿಗೆ ನೌಕರರು ಗರಿಷ್ಠ ಪ್ರಮಾಣದಲ್ಲಿ ಸೇವೆ ಸಲ್ಲಿಸಿ ಕನಿಷ್ಠ ವೇತನ ಪಡೆಯುತ್ತಿರುವುದು ಸರಕಾರದ ಕಣ್ಣಿಗೆ ಗೋಚರವಾಗುವುದೇ ಇಲ್ಲ.

ಸಂಬಳಕ್ಕಾಗಿ ಅಧಿಕಾರಿಗಳ ಎದುರು ಕೈ ಚಾಚಿ ನಿಲ್ಲುವ ಪರಿಸ್ಧಿತಿ ಇದ್ದು, ಕೆಲವೊಮ್ಮೆ 2-3 ತಿಂಗಳು ಕಳೆದರೂ ಸಂಬಳ ಕೈಸೇರುವುದೇ ಇಲ್ಲ. ದುಡಿಮೆಯನ್ನೇ ನಂಬಿ ಸಾಲ ಮಾಡಿದರೆ ತಿಂಗಳ ಕಂತು ಕಟ್ಟಲು ಪರದಾಡಬೇಕಾಗುತ್ತದೆ. ಭದ್ರತೆ ಇಲ್ಲದ ಹುದ್ದೆಯಲ್ಲಿ ಅಭದ್ರತೆಯಿಂದ ಜೀವನ ಸಾಗಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಮೇಲೆ ಸರಕಾರದ ಮಲತಾಯಿ ಧೋರಣೆ ಖಂಡಿಸುವಂತದ್ದು.

ವಾರಿಯರ್ಸ್‌ಗಿಲ್ಲ ಗೌರವಧನ

ಕೊರೊನಾ ವೈರಸ್‌ ಹೋಗಲಾಡಿಸಲು ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ, ಆಶಾ ಕಾರ್ಯಕರ್ತರಿಗೆ ನೀಡಿದಂತೆ ಗೌರವಧನ ನೀಡದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆ

ಗುತ್ತಿಗೆ ಪದ್ಧತಿ ಕೈಬಿಟ್ಟು ಸಮಾನ ಹುದ್ದೆಗೆ ಸಮಾನ ವೇತನ ನೀಡಬೇಕೆಂದು 2008ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ಹೊರಡಿಸಿದರೂ ಆರೋಗ್ಯ ಇಲಾಖೆಯಲ್ಲಿ ದುಡಿಯುತ್ತಿರುವ ಕ್ಷಯ ನಿರ್ಮೂಲನ ನೌಕರರು, ದಾದಿಯರು, ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರು, ಜಿಲ್ಲಾಮಟ್ಟದ ಕೆಲವು ಹುದ್ದೆಗಳಲ್ಲಿ ಇರುವವರು, ಅಟೆಂಡರ್‌, ಆಯುಷ್‌ ವೈದ್ಯಾಧಿಕಾರಿಗಳು, ಶಾಲಾ ಆರೋಗ್ಯ ತಪಸಣಾಧಿಕಾರಿಗಳು, ಆರ್‌ಬಿಎಸ್‌ವೈ ನೌಕರರು, ಡಿ ಗ್ರೂಪ್‌ ನೌಕರರು ಇನ್ನಿತರ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳು ಕಡಿಮೆ ವೇತನ ಪಡೆದು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವುದು ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸುಮಾರು 18-20 ವರ್ಷಗಳಿಂದ ಅತ್ಯಲ್ಪ ಸಂಬಳಕ್ಕೆ ರಾಜ್ಯದಲ್ಲಿ ಸುಮಾರು 23 ಸಾವಿರಕ್ಕೂ ಹೆಚ್ಚು ನೌಕರರು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆ, ಸಮಾನ ಹುದ್ದೆಗೆ ಸಮಾನ ವೇತನ ನೀಡಬೇಕೆಂಬ ಸುಪ್ರೀಂ ಕೋರ್ಟ್‌ನ ಆದೇಶವಿದ್ದರೂ ಸರಕಾರ ಗಾಳಿಗೆ ತೂರಿದೆ. ನಾವು ಈಗಾಗಲೇ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲ. ಕೊರೊನಾ ವಾರಿಯರ್ಸ್‌ಗಳಾಗಿ ದುಡಿಯುತ್ತಿರುವ ಗುತ್ತಿಗೆ ನೌಕರರು ಮೇ 22ರಿಂದ ಕೆಲಸ ಸ್ಥಗಿತಗೊಳಿಸಿ ಶಾಂತಿಯುತವಾದ ಚಳವಳಿ ಮಾಡುತ್ತೇವೆ.
-ವಿಶ್ವಾರಾಧ್ಯ, ಅಧ್ಯಕ್ಷರು, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ, ಹೊರಗುತ್ತಿಗೆ ನೌಕರರ ಸಂಘ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ