ಆ್ಯಪ್ನಗರ

ಉಡುಪಿಯ ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಕಾಂಗ್ರೆಸ್ ನಿಂದ ಸಾಕ್ಷ್ಯಾಧಾರವಿರುವ ಪೆನ್‌ಡ್ರೈವ್‌ ಬಿಡುಗಡೆ

ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಸ್ವರ್ಣಾ ನದಿಯ ಬಜೆ ಅಣೆಕಟ್ಟೆಯಲ್ಲಿ ಹೂಳೆತ್ತುವ ನೆಪದಲ್ಲಿ ಮಂಗಳೂರಿನ ಗುತ್ತಿಗೆ ಸಂಸ್ಥೆ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ ಹೇಳಿದ್ದಾರೆ.

Vijaya Karnataka Web 28 May 2020, 11:30 am
ಉಡುಪಿ: ಸ್ವರ್ಣಾ ನದಿಯಲ್ಲಿ ಹೂಳೆತ್ತುವ ನೆಪದಲ್ಲಿ ಟೆಂಡರ್‌ ಪ್ರಕ್ರಿಯೆ ಹಾಗೂ ಗುತ್ತಿಗೆದಾರರು ಷರತ್ತುಗಳನ್ನು ಗಾಳಿಗೆ ತೂರಿ ನಡೆಸಿದ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಮರಳುಗಾರಿಕೆ ಹಾಗೂ ಅವ್ಯವಹಾರಕ್ಕೆ ಸಂಬಂಧಿಸಿ ಕೆಲವೆಡೆ ದಾಸ್ತಾನಿಟ್ಟಿರುವ ಮರಳು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಪೆನ್‌ಡ್ರೈವ್‌ನ್ನು ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಬಿಡುಗಡೆಗೊಳಿಸಲಾಯಿತು.
Vijaya Karnataka Web ಸ್ವರ್ಣಾ ನದಿಯಲ್ಲಿಅಕ್ರಮ ಮರಳುಗಾರಿಕೆ


ಸುದ್ದಿಗೋಷ್ಠಿಯಲ್ಲಿ ಪೆನ್‌ಡ್ರೈವ್‌ ಬಿಡುಗಡೆಗೊಳಿಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕರೆ ಮಾತನಾಡಿ, ಟೆಂಡರ್‌ ಪಡೆದಿರುವ ಯೋಜಕ್‌ ಸಂಸ್ಥೆ ಎಲ್ಲ ಷರತ್ತುಗಳನ್ನು ಗಾಳಿಗೆ ತೂರಿದೆ. ಕೋಟ್ಯಂತರ ರೂ. ಮೌಲ್ಯದ ಅಕ್ರಮ ಮರಳುಗಾರಿಕೆಯಲ್ಲಿ ಶಾಮೀಲಾಗಿರುವ ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಹಿರಿಯಡ್ಕದ ಸ್ವರ್ಣಾದಿಂದ ನೀರು ತರಲಾಗುತ್ತಿದ್ದು, ನೀರಿನ ಹರಿಯುವಿಕೆಗೆ ತೊಂದರೆಯಾಗುವ ಕಾರಣದಿಂದ ಹೂಳೆತ್ತುವ ಬಗ್ಗೆ ಟೆಂಡರ್‌ ಕರೆಯಲಾಯಿತು. ಇಲ್ಲಿ ಗುತ್ತಿಗೆ ನೀಡಿರುವ ಪ್ರಕ್ರಿಯೆಯೂ ಕಾನೂನು ಬಾಹಿರವಾಗಿದ್ದು, ಗೋಕುಲದಾಸ್‌ ಶೆಟ್ಟಿ ಅವರಿಗೆ ಸಿಕ್ಕ ಟೆಂಟರ್‌ ರದ್ದುಗೊಳಿಸಿ ಮಂಗಳೂರಿನ ಯೋಜಕ್‌ಗೆ ನೀಡಲಾಯಿತು.

ಟೆಂಡರ್‌ ಷರತ್ತಿನಂತೆ ಹೂಳೆತ್ತುವ ಕಾಮಗಾರಿ ಪರಿಶೀಲನೆಗೆ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಗರಸಭೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ 14 ಮಂದಿಯುಳ್ಳ ಸಮಿತಿ ರಚಿಸಿ ಜವಾಬ್ದಾರಿ ನೀಡಲಾಗಿದೆ. ನಿಯಮಾವಳಿಯಂತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ನಿಗಾ ವಹಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸ್ವಂತ ಅನುದಾನದಿಂದ ನಿರ್ಮಿತಿ ಕೇಂದ್ರದ ಮೂಲಕ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಬೇಕು. ಸಿಸಿ ಟಿವಿ, ಭದ್ರತಾ ಸಿಬ್ಬಂದಿ ಹಾಗೂ ಕಾಮಗಾರಿ ನಡೆಯುವ ಸ್ಥಳದಲ್ಲಿ ಪರಿವೀಕ್ಷಿಸಲು ಪಿಟಿಝಡ್‌ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಹಿತಕರ ಘಟನೆ ಸಂಭವಿಸದಂತೆ ಎಲ್ಲ ಇಲಾಖೆಯ ಸಿಬ್ಬಂದಿಯನ್ನು ಮೇಲ್ವಿಚಾರಣೆಗೆ ನಿಯೋಜಿಸುವಂತೆ ಹಾಗೂ ಪೊಲೀಸರ ಸಹಾಯ ಪಡೆಯುವಂತೆ 2019ರ ಆ.28ರಂದು ನಿರ್ದೇಶನ ನೀಡಿದ್ದಾರೆ. ಆದರೆ ಇದೆಲ್ಲಅಳವಡಿಸದೇ ಬಜೆ ಅಣೆಕಟ್ಟಿನಿಂದ ಮಾಣಿವರೆಗೆ ಹಾಗೂ ಮಾಣಿಯಿಂದ ಶೀರೂರಿನವರೆಗೆ ಹೂಳೆತ್ತುವ ನೆಪದಲ್ಲಿ ಮರಳನ್ನು ಕಳ್ಳತನ ಮಾಡಿ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.

ಬೊಮ್ಮರಬೆಟ್ಟುವಿನ ಮುಂಡಜೆಯಲ್ಲಿರುವ ಮೊಯ್ಯದಗುಂಡಿ ಹಾಗೂ ಶೀರೂರಿನ ಸಾಲ್ಮರ, ನೂಜಿ ಮತ್ತು ಇತರೆ ಪ್ರದೇಶಗಳಲ್ಲಿ ಹಾಗೂ ಕಾಡಿನ ಮಧ್ಯಭಾಗದಲ್ಲಿ ಭಾರೀ ಪ್ರಮಾಣದಲ್ಲಿಅಕ್ರಮವಾಗಿ ಮರಳು ಶೇಖರಿಸಿಟ್ಟಿದ್ದಾರೆ. ಜಿಲ್ಲೆಯಿಂದ ಈಗಾಗಲೇ 1000ಕ್ಕೂ ಅಧಿಕ ಲೋಡ್‌ ಮರಳು ಜಿಲ್ಲೆ ಹಾಗೂ ಹೊರ ಜಿಲ್ಲೆಗೆ ಹೋಗಿದೆ ಎಂದರು.

ಡಿಸಿ ಮಾತನಾಡಲಿ
ಸಣ್ಣಪುಟ್ಟ ವಿಚಾರಕ್ಕೂ ತಕ್ಷಣವೇ ಸ್ಪಂದಿಸುವ ಉಡುಪಿ ಜಿಲ್ಲಾಧಿಕಾರಿ ಇದುವರೆಗೆ ಹೇಳಿಕೆ ಕೊಟ್ಟಿಲ್ಲ. ಇದು ಸಂಶಯಕ್ಕೆ ಎಡೆಮಾಡಿದೆ. ಜಿಲ್ಲಾಧಿಕಾರಿಗಳು ಯಾಕೆ ಕೋಟ್ಯಂತರ ರೂ. ಹಗರಣವಾದರೂ ಮಾತನಾಡುತ್ತಿಲ್ಲ? ನಗರಸಭೆ ಸದಸ್ಯ ರಮೇಶ್‌ ಕಾಂಚನ್‌ ಈಗಾಗಲೇ ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ನಗರಸಭೆಗೆ ಚುನಾಯಿತ ಜನಪ್ರತಿನಿಧಿಗಳಿಲ್ಲ. ಜಿಲ್ಲಾಧಿಕಾರಿಗೆ ಎಲ್ಲಅಧಿಕಾರ ಇರುವಾಗ ಯಾಕೆ ಹೀಗೆ ಮಾಡುತ್ತಾರೆ ಎಂದಿದ್ದಾರೆ.
ನಗರಸಭೆ ಸದಸ್ಯರಾದ ರಮೇಶ್‌ ಕಾಂಚನ್‌, ವಿಜಯ ಪೂಜಾರಿ ಬೈಲೂರು, ಜನಾರ್ದನ ಭಂಡಾರ್ಕರ್‌, ಪ್ರಶಾಂತ್‌ ಪೂಜಾರಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ