ಆ್ಯಪ್ನಗರ

ದೇವಳಗಳಲ್ಲಿನ ನಿತ್ಯ ಪೂಜೆಯಂತೆ ಕನ್ನಡಾಭಿಮಾನವಿರಬೇಕು

ಫೆ.22 ರಂದು ನಡೆಯುವ ಹೆಬ್ರಿ ತಾಲೂಕು ಚೊಚ್ಚಲ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಕನ್ನಡದ ಕಟ್ಟಾಳು ಹರಿದಾಸ್‌ ಬಿ.ಸಿ ರಾವ್‌ ಶಿವಪುರ ತೆರೆದಿಟ್ಟ ಮುಕ್ತಮಾತು...

Vijaya Karnataka Web 18 Feb 2019, 5:00 am
ಸುಮಲತಾ ಬಾಲಚಂದ್ರ ಹೆಬ್ಬಾರ್‌
Vijaya Karnataka Web 201


ಫೆ.22 ರಂದು ನಡೆಯುವ ಹೆಬ್ರಿ ತಾಲೂಕು ಚೊಚ್ಚಲ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಕನ್ನಡದ ಕಟ್ಟಾಳು ಹರಿದಾಸ್‌ ಬಿ.ಸಿ ರಾವ್‌ ಶಿವಪುರ ತೆರೆದಿಟ್ಟ ಮುಕ್ತಮಾತು...

* ಸಮ್ಮೇಳನಗಳು ಕೇವಲ ಒಂದೆರಡು ಮೂರು ದಿನಗಳಿಗೆ ಸೀಮಿತವಾಗಿಬಿಡುತ್ತವಲ್ಲಾ? ಏನನ್ನುತ್ತೀರಿ?

ದೇವರ ವಾರ್ಷಿಕ ಜಾತ್ರೆ ವರ್ಷದಲ್ಲಿ ಒಂದು ದಿನ. ಉಳಿದ ದಿನಗಳಲ್ಲೂ ದೇವಸ್ಥಾನದಲ್ಲಿ ನಿತ್ಯ ಪೂಜೆ ನಡೆದು ಸೇವೆಗಳು ನಡೆಯುತ್ತಲೇ ಇರುತ್ತವೆ. ಹಾಗೆಯೇ ಸಮ್ಮೇಳನಗಳು ಒಂದು, ಎರಡು, ಮೂರು ದಿನಗಳು ನಡೆದರೂ ಉಳಿದ ವರ್ಷದ ಎಲ್ಲಾ ದಿನಗಳಿಗೆ ಅವು ಪ್ರೇರೇಪಣೆಯಾಗುತ್ತವೆ. ಅದರ ಪ್ರತಿಫಲ ಇಡೀ ವರ್ಷ ಇದ್ದೇ ಇರುತ್ತದೆ, ಇರಬೇಕು ಕೂಡ.

* ರಾಜ್ಯದಲ್ಲಿ ಕನ್ನಡ ಕಟ್ಟುವ ಬಗೆ ಹೇಗೆ?

ಗ್ರಾಮ ಪಂಚಾಯಿತಿಯಿಂದ ಆರಂಭಗೊಂಡು ವಿಧಾನ ಸೌಧದ ವರೆಗೆ ಕನ್ನಡದ ಸುತ್ತೋಲೆಗಳು(ಅಂಕೆ ಸಹಿತ) ಕಡ್ಡಾಯವಾಗಬೇಕು. ಕನ್ನಡ ಕಲಿತು ಮಾತನಾಡುವ ಅನ್ಯ ಭಾಷಿಗರು(ಅಧಿಕಾರಿಗಳು) ನಮ್ಮ ಭಾಷಾಭಿಮಾನದ ಕಣ್ಣು ತೆರೆಸಬೇಕು. ಕನ್ನಡದಿಂದ ಎಲ್ಲವೂ ಸಾಧ್ಯ ಎನ್ನುವಂತಾಗಬೇಕು. ಯಕ್ಷ ಗಾನ ತಾಳಮದ್ದಲೆ, ಹರಿಕಥೆ, ಕನ್ನಡ ನಾಟಕಗಳ ಮೂಲಕ ಶುದ್ಧ ಕನ್ನಡದ ಬಳಕೆ ಹೆಚ್ಚಾಗಿ ಅದನ್ನು ರಾಜ್ಯಾದ್ಯಂತ ಪ್ರೋತ್ಸಾಹಿಸುವ ಪರಿ ಹೆಚ್ಚಾಗಬೇಕು.

* ನಿಜವಾಗಿ ಆಗಬೇಕಾದ ಸಾಹಿತ್ಯಾರಾಧನೆ ಯಾವುದು ?

ಕನ್ನಡ ಅತ್ಯಂತ ಕಡಿಮೆ ಭಾಷಾಭಿಮಾನ ಹೊಂದಿದ ಭಾಷೆ ಎನ್ನುವುದೇ ಬೇಸರದ ವಿಷಯ. ಈ ಹಿನ್ನೆಲೆಯಲ್ಲಿ ಕನ್ನಡ ಮನಸ್ಸುಗಳನ್ನು ಜಾತ್ರೋಪಾದಿಯಲ್ಲಿ ಒಂದುಗೂಡಿಸಿ ಭಾಷಾಭಿಮಾನ ಹೆಚ್ಚಿಸಬೇಕು. ಕನ್ನಡ ಅನ್ನ ಕೊಡುವುದಿಲ್ಲ ಎಂಬ ಭಾವನೆ ಎಳೆಯರಿಂದ ಹೋಗಲಾಡಿಸಬೇಕು. ಇಂಗ್ಲಿಷ್‌ ದೂಷಣೆ ಸಲ್ಲದು. ಭಾಷಾ ಬಾಂಧವ್ಯ ಹೆಚ್ಚಿಸುವ ತುಳು, ಕೊಂಕಣಿ, ಬ್ಯಾರಿ ಭಾಷೆಗಳೊಂದಿಗೆ ಕನ್ನಡವನ್ನು ನಿರಂತರ ಬೆಳೆಸುವ ಕಾಯಕವನ್ನು ತಳಮಟ್ಟದ ಸಮ್ಮೇಳನಗಳಲ್ಲಿ ಮಾಡಬೇಕಿದೆ.

*ತಾಲೂಕು ಕಸಾಪ ಅಧ್ಯಕ್ಷ ರಾಗಿ ದುಡಿದ ನಿಮಗೆ ತಾಲೂಕಿನ ಮೊದಲ ಸಮ್ಮೇಳನಾಧ್ಯಕ್ಷ ರ ಪೀಠ ದೊರೆತಿದೆ-ಹೇಗೆನಿಸುತ್ತಿದೆ?

ಸಂತೋಷವಾಗುತ್ತಿದೆ. ಸಂಘಟನೆ, ಜವಾಬ್ದಾರಿ, ಒತ್ತಡದಿಂದ ನಿಭಾಯಿಸುತ್ತಿದ್ದ ಕೆಲಸದಿಂದ ವಿಭಿನ್ನವಾದ ಈ ಸಮ್ಮೇಳನಾಧ್ಯಕ್ಷ ರ ಹೊಣೆಯನ್ನು ವಿಭಿನ್ನವಾಗಿಯೇ ನಿರ್ವಹಿಸುವ ಸಂಕಲ್ಪವಿದೆ. ಕನ್ನಡದ ಕುರಿತ ಅನಿಸಿಕೆ, ಚರ್ಚೆಗೆ ಸಮ್ಮೇಳನವನ್ನು ಮುಕ್ತ ವೇದಿಕೆಯಾಗಿಸುವ ಭರವಸೆ ಇದೆ. ವಹಿಸಿದ ಜವಾಬ್ದಾರಿಯನ್ನು , ಕಾರ್ಯಕಲಾಪವನ್ನು ಸಮರ್ಥವಾಗಿ ಮುನ್ನಡೆಸುವ ವಿಶ್ವಾಸ ಹೊಂದಿದ್ದೇನೆ.

ಕನ್ನಡ ಸೇವೆಯ ವಿರಾಡ್ರೂಪ ಹರಿದಾಸ್‌ ಬಿ.ಸಿ.ರಾವ್‌

ಫೆ.22 ರಂದು ನಡೆಯುವ ಹೆಬ್ರಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿ ಹರಿದಾಸ್‌ ಬಿ.ಸಿ ರಾವ್‌ ಶಿವಪುರ ಆಯ್ಕೆಯಾಗಿದ್ದಾರೆ. ಮೈಸೂರು ವಿವಿ ಸ್ನಾತಕೋತ್ತರ ಪದವೀಧರರಾಗಿ, ವೃತ್ತಿಯಲ್ಲಿ ಶಿಕ್ಷ ಕರಾಗಿ, ಮುಖ್ಯ ಶಿಕ್ಷಕರಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ಇವರು ಪ್ರವೃತ್ತಿಯಲ್ಲಿ ವಿಭಿನ್ನ, ವಿಶೇಷ ವ್ಯಕ್ತಿತ್ವ ರೂಢಿಸಿಕೊಂಡು ಹರಿದಾಸರಾಗಿ, ಮೌಲ್ಯಾಧಾರಿತ ಶಿಕ್ಷ ಣ ಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ, ಮದ್ಯವ್ಯಸನ ವಿಮುಕ್ತಿ ಮಾರ್ಗದರ್ಶಕರಾಗಿ, ಮಾಧ್ಯಮ ವಿಮರ್ಶಕರಾಗಿ, ಪತ್ರಕರ್ತರಾಗಿ, ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸಿ ಎಲ್ಲೆಡೆ ಚಿರಪರಿಚಿತರು. 5 ಸಾವಿರಕ್ಕೂ ಮಿಕ್ಕಿದ ಹರಿಕಥಾ ಸತ್ಸಂಗ ಗೋಷ್ಠಿ, 10 ಸಾವಿರಕ್ಕೂ ಮಿಕ್ಕಿದ ಮೌಲ್ಯಾಧಾರಿತ ಉಪನ್ಯಾಸಗಳಿಂದ ಎಡೆಬಿಡದೆ ಧಾರ್ಮಿಕ, ಸಾಹಿತ್ಯ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ತಮ್ಮ ಅನಾರೋಗ್ಯದ ನಡುವೆಯೂ ಸಾಹಿತ್ಯ, ಸಮಾಜ ಸೇವೆಯಿಂದ ಕಿಂಚಿತ್ತೂ ವಿಮುಖರಾಗಿಲ್ಲ ಎನ್ನುವುದು ವಿಶೇಷ.

ಶಿವಪುರ ಪಾಂಡುಕಲ್ಲಿನ ಪಠೇಲ್‌ ಬಿ. ಸದಾಶಿವ ರಾವ್‌, ಸರಸ್ವತಿ ಅಮ್ಮನವರ ಪುತ್ರರಾದ ಇವರಿಗೆ 1990ರಲ್ಲಿ ರಾಜ್ಯಮಟ್ಟದ ಭೂಷಣ ಪ್ರಶಸ್ತಿ, 1993ರಲ್ಲಿ ಮಂಗಳೂರು ವಿವಿ ಹರಿಕಥಾ ಪ್ರಶಸ್ತಿ, 2001ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷ ಕ ಪ್ರಶಸ್ತಿ, 2003ರಲ್ಲಿ ರಾಜ್ಯ ಅತ್ಯುತ್ತಮ ಹರಿದಾಸ ಉಪಾಧ್ಯಾಯ ಸಮ್ಮಾನ್‌, 2004ರಲ್ಲಿ ಲಯನ್‌ ಅತ್ತುತ್ತಮ ಶಿಕ್ಷ ಕ ಪ್ರಶಸ್ತಿ, 2005ರಲ್ಲಿ ರೋಟರಿ ಅತ್ಯುತ್ತಮ ಶಿಕ್ಷ ಕ ಪ್ರಶಸ್ತಿ, 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2017ರಲ್ಲಿ ಕಸಾಪ ಸಂಘಟಕ ಪ್ರಶಸ್ತಿ ಹಾಗೂ 2018ರಲ್ಲಿ ಪತ್ರಕರ್ತ ಗೌರವ ಪ್ರಶಸ್ತಿ ಪಡೆದಿರುತ್ತಾರೆ. ಇದಲ್ಲದೆ ರಾಮಕೃಷ್ಣ ಕಲ್ಯಾಣಿ ಪ್ರಶಸ್ತಿ, ಶರವು ರಾಮಕೃಷ್ಣ ಶಾಸ್ತ್ರಿ ಪ್ರಶಸ್ತಿ , ಗದಗದ ತೋಂಟದಾರ್ಯ ಪ್ರಶಸ್ತಿ, ಆದಿಶಕ್ತಿ ದೇವಿ ಪ್ರಶಸ್ತಿ, ದೆಹಲಿ ಕನ್ನಡಿಗ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ