ಆ್ಯಪ್ನಗರ

ಕೊಳೆರೋಗ ಪರಿಹಾರಕ್ಕೆ ನಕಲಿ ದಾಖಲೆ ಕೊಟ್ಟರೆ ಕೇಸ್‌ ದಾಖಲಿಸಿ: ಜಯಮಾಲ

ಅಡಕೆ ಕೊಳೆ ರೋಗಕ್ಕೆ ಸಂಬಂಧಿಸಿ ಸಿಗುವ ಪರಿಹಾರ ಹಣ ಪಡೆಯಲು ತೋಟಗಾರಿಕಾ ಇಲಾಖೆಗೆ ಸುಳ್ಳು ದಾಖಲೆ ಕೊಟ್ಟ ರೈತರ ವಿರುದ್ಧ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಿ ಎಂದು ಸಚಿವೆ ಡಾ. ಜಯಮಾಲ ಖಡಕ್‌ ಸಂದೇಶ ರವಾನೆ ಮಾಡಿದ್ದಾರೆ.

Vijaya Karnataka 24 Dec 2018, 5:00 am
ಉಡುಪಿ: ಅಡಕೆ ಕೊಳೆ ರೋಗಕ್ಕೆ ಸಂಬಂಧಿಸಿ ಸಿಗುವ ಪರಿಹಾರ ಹಣ ಪಡೆಯಲು ತೋಟಗಾರಿಕಾ ಇಲಾಖೆಗೆ ಸುಳ್ಳು ದಾಖಲೆ ಕೊಟ್ಟ ರೈತರ ವಿರುದ್ಧ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಿ ಎಂದು ಸಚಿವೆ ಡಾ. ಜಯಮಾಲ ಖಡಕ್‌ ಸಂದೇಶ ರವಾನೆ ಮಾಡಿದ್ದಾರೆ.
Vijaya Karnataka Web news/udupi/jayamala
ಕೊಳೆರೋಗ ಪರಿಹಾರಕ್ಕೆ ನಕಲಿ ದಾಖಲೆ ಕೊಟ್ಟರೆ ಕೇಸ್‌ ದಾಖಲಿಸಿ: ಜಯಮಾಲ


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಕೃಷಿಕ ಸಮಾಜದ ವತಿಯಿಂದ ಮಣಿಪಾಲ ರಜತಾದ್ರಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ರೈತರ ದಿನಾಚರಣೆ ಮತ್ತು ರೈತ ಜನ ಸಂಪರ್ಕ ಸಭೆಯಲ್ಲಿ ರೈತರ ಸಮಸ್ಯೆ ಆಲಿಸಿ ಮಾತನಾಡಿದರು.

ಜೂನ್‌, ಜುಲೈನಲ್ಲಿ ಸುರಿಯುವ ವಿಪರೀತ ಮಳೆಗೆ ಅಡಕೆ ಕೊಳೆ ರೋಗಕ್ಕೆ ತುತ್ತಾಗುತ್ತಿದೆ. ಲಕ್ಷಕ್ಕೂ ಅಧಿಕ ಅಡಕೆ ಮರ ಹಾನಿಯಾಗಿದ್ದು, ಸಾವಿರಾರು ರೂ. ನಷ್ಟವಾಗಿದೆ. ಆದರೆ ಎಕರೆ 18 ಸಾವಿರ ರೂ. ಪರಿಹಾರ ಸಿಗುತ್ತದೆ. ಆರ್‌ಟಿಸಿ ಹೊಂದಿರುವರು ಅಡಕೆ ತೋಟವೇ ಇಲ್ಲದೇ ಇದ್ದರೂ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಇದಕ್ಕೂ ಅಧಿಕಾರಿಗಳು ಪರಿಹಾರ ಕೊಡುತ್ತಾರೆ. ಇದು ಯಾವ ರೀತಿ ನ್ಯಾಯ ಎಂದರು.

ರೈತರ ಆರೋಪದಿಂದ ಕೋಪಗೊಂಡ ಸಚಿವೆ, ಸುಳ್ಳು ದಾಖಲೆ ಕೊಟ್ಟು ಅಡಕೆ ಕೊಳೆ ರೋಗ ಪರಿಹಾರ ಪಡೆದ ರೈತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಿ ಎಂದು ಸೂಚನೆ ಕೊಟ್ಟರು. ಸಚಿವರ ಈ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿದ ರೈತರ ಮುಖಂಡರು, ರೈತರ ಮೇಲೆ ಯಾಕೆ ಕೇಸು ಹಾಕುತ್ತೀರಿ? ಪರಿಹಾರ ಕೊಟ್ಟಿದ್ದು ಅಧಿಕಾರಿಗಳು? ಅವರ ಮೇಲೆ ಕೇಸು ಜಡಿಯಿರಿ ಎಂದು ತಾಕೀತು ಮಾಡಿದರು.

ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಮಾತನಾಡಿ, ಜಿಲ್ಲೆಯಲ್ಲಿ 5770 ಹೆಕ್ಟೆರ್‌ ಅಡಿಕೆ ಕೊಳೆ ರೋಗ ಹಾನಿ ಬಗ್ಗೆ ಅರ್ಜಿ ಸಲ್ಲಿಕೆಯಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದೇವೆ. 2600 ಅರ್ಜಿಗಳು ಆನ್‌ ಲೈನ್‌ನಲ್ಲಿ ದಾಖಲಿಸಲು ಬಾಕಿವಿದ್ದು, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಸದ್ಯ 512 ಮಂದಿಗೆ 47.38 ಲಕ್ಷ ಪರಿಹಾರ ಪಾವತಿಸಲಾಗಿದೆ ಎಂದರು.

ಜಲಾನಯನದಲ್ಲಿ ಅಕ್ರಮ: ತನಿಖೆಗೆ ಆಗ್ರಹ: ಹಾಲಾಡಿ ಗ್ರಾಪಂ ವ್ಯಾಪ್ತಿಯ ರೈತರೊಬ್ಬರು ಜಲಾನಯನ ಯೋಜನೆಯಡಿ ಬೃಹತ್‌ ಪ್ರಮಾಣದ ಅಕ್ರಮ ನಡೆದಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಸಭೆ ನಡೆಸಿದ ಅಧಿಕಾರಿಗಳಲ್ಲಿ ಈ ಬಗ್ಗೆ ಕೇಳಿದರೆ ಆಗಸ್ಟ್‌ನಲ್ಲೇ ಯೋಜನೆ ಮುಗಿದಿದೆ ಎನ್ನುವ ಹಾರಿಕೆ ಉತ್ತರ ಕೊಡುತ್ತಾರೆ. ಯೋಜನೆ ಮುಗಿದ ಮೇಲೆ ಸಭೆ ಮಾಡಿದ್ದು ಯಾವ ಉದ್ದೇಶಕ್ಕೆ? ಸಮಿತಿ ಖಾತೆಯಲ್ಲಿ 7 ಲಕ್ಷ ರೂ. ವಿದ್ದು, ಅದನ್ನು ಹಿಂಪಡೆಯಲು ಯತ್ನಿಸುತ್ತಿದ್ದಾರೆ. ಇದೊಂದು ಬೃಹತ್‌ ಹಗರಣವಾಗಿದ್ದು, ಸೂಕ್ತ ತನಿಖೆಗೆ ರೈತರು ಪಟ್ಟು ಹಿಡಿದರು.

ಈ ಬಗ್ಗೆ ಸಮಂಜಿಸಿ ಉತ್ತರಿಸಲು ಯತ್ನಿಸಿದ ಸಚಿವೆ ಮಾತಿಗೆ ರೈತರು ಒಪ್ಪದೇ ಇದ್ದಾಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ಸಮಗ್ರ ವರದಿ ಪಡೆಯುವುದಾಗಿ ಭರವಸೆ ಕೊಟ್ಟರು.

ಬೆಂಗಳೂರಿಗೆ ಬರಲ್ಲ: ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮಸಭೆ ಮಾಡಲ್ಲ. ಪರಿಹಾರಕ್ಕೆ ಸೂಕ್ತ ಮಾನದಂಡವೂ ಪಾಲಿಸಲ್ಲ. ಎಲ್ಲ ಯೋಜನೆಗಳು ಉಳ್ಳವರ ಪಾಲಾಗುತ್ತಿದೆ ಎಂಬ ಆರೋಪಕ್ಕೆ ಏಕಾಏಕಿ ಉತ್ತರಿಸಿದ ಸಚಿವೆ ಈ ಬಗ್ಗೆ ಕೃಷಿ ಸಚಿವರ ಗಮನಕ್ಕೆ ತಂದಿದೀರಾ ಎಂದು ಪ್ರಶ್ನಿಸಿದರು.

ಸಚಿವರ ಈ ಉತ್ತರಕ್ಕೆ ಕೋಪಗೊಂಡ ರೈತರು ಎಲ್ಲ ರೈತರಿಗೆ ಬೆಂಗಳೂರಿಗೆ ಬಂದು ಕೃಷಿ ಸಚಿವರನ್ನು ಭೇಟಿ ಮಾಡಲಿಕ್ಕೆ ಆಗಲ್ಲ. ನಮ್ಮಲ್ಲಿ ಹೆಚ್ಚಿನ ರೈತರ ಮನೆಗೆ ಮೊಬೈಲ್‌, ಮಾಧ್ಯಮ ಸಂಪರ್ಕವೇ ಇಲ್ಲ. ಈ ರೀತಿ ಹೇಳಬೇಡಿ ಎಂದರು.

ರೈತರಿಗೆ ಸಾಲ ನೀಡಿ, ಮನ್ನಾ ಮಾಡುವ ಬದಲು ಮನೆ ನಿರ್ಮಾಣ, ತೋಟ ಅಭಿವೃದ್ಧಿ, ಬೇಲಿ ನಿರ್ಮಾಣ ಮುಂತಾದ ಅಭಿವೃದ್ದಿ ಕಾರ್ಯಕ್ರಮಗಳಿಗೆ 10 ಲಕ್ಷ ರೂ. ವರೆಗೆ ಬಡ್ಡಿ ರಹಿತವಾಗಿ ಸಾಲ ಕೊಟ್ಟರೆ ಅನುಕೂಲವಾಗುತ್ತದೆ ಎಂದು ರೈತರು ಮನವಿ ಮಾಡಿದರು. ಈ ಬಗ್ಗೆ ಉತ್ತರಿಸಿದ ಸಚಿವೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಜಾರಿಗೆ ಪ್ರಯತ್ನಿಸುತ್ತೇನೆ ಎಂದರು.
ಉದ್ಘಾಟನೆ ಭಾಷಣದಲ್ಲೇ ಆರಂಭವಾದ ವಿವಾದ: ಸಚಿವೆ ಭಾಷಣ ಆರಂಭಿಸುತ್ತಿದ್ದಂತೆ ವೇದಿಕೆಯಲ್ಲಿ ಯಾವ ರೈತ ಸಂಘಟನೆ ಮುಖಂಡರು, ಬ್ಯಾನರ್‌ನಲ್ಲಿ ಸಂಘಟನೆ ಹೆಸರು ಸೂಚಿಸದೇ ಇರುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರು. ರೈತರು ಬೆನ್ನುಲುಬು ಭಾಷಣ ಮಾಡುವ ನೀವೇ ಅವರ ಧ್ವನಿಯನ್ನು ಕಿತ್ತುಕೊಳ್ಳುತ್ತೀರಿ. ನೀವೆ ಮಾಡುವುದಾದರೆ ನಮ್ಮನ್ನು ಆಮಂತ್ರಿಸಿದ್ದು ಯಾಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು ರೈತರ ಧ್ವನಿ ಕೇಳಿಸದೇ ಇರುವುದರಿಂದ ಇಷ್ಟೆಲ್ಲ ಸಮಸ್ಯೆಯಾಗುತ್ತಿದೆ. ದಯವಿಟ್ಟು ಮುಖಂಡರು ಮೇಲೆ ಬನ್ನಿ. ಆಮೇಲೆ ನಾನು ಭಾಷಣ ಆರಂಭಿಸುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ