ಆ್ಯಪ್ನಗರ

250ನೇ ಪರ್ಯಾಯದಲ್ಲಿ ಭಕ್ತರಿಗೆ ಸಾವಯವ ಶ್ರೀಕೃಷ್ಣ ಪ್ರಸಾದ

ಹಡಿಲು ಬಿದ್ದ ಗದ್ದೆಗಳ ಪುನಶ್ಚೇತನದಿಂದ ಭತ್ತದ ನಾನಾ ತಳಿಗಳನ್ನು ಉಳಿಸಿ ಬೆಳೆಸುವ ಮೂಲಕ ಭಕ್ತಾದಿಗಳಿಗೆ ಸಾವಯವ ಶ್ರೀಕೃಷ್ಣ ಪ್ರಸಾದ ಸಿಗಲಿದೆ.

Vijaya Karnataka 31 Jan 2019, 5:00 am
ಎಸ್‌. ಜಿ. ಕುರ್ಯ, ಉಡುಪಿ
Vijaya Karnataka Web UDP-30U AKKI MUDI


ಹಡಿಲು ಬಿದ್ದ ಗದ್ದೆಗಳ ಪುನಶ್ಚೇತನದಿಂದ ಭತ್ತದ ನಾನಾ ತಳಿಗಳನ್ನು ಉಳಿಸಿ ಬೆಳೆಸುವ ಮೂಲಕ ಭಕ್ತಾದಿಗಳಿಗೆ ಸಾವಯವ ಶ್ರೀಕೃಷ್ಣ ಪ್ರಸಾದ ಸಿಗಲಿದೆ.

ಸೋದೆ ಶ್ರೀವಾದಿರಾಜರಿಂದ ಆರಂಭವಾದ ಶ್ರೀಕೃಷ್ಣ ಪೂಜೆಯ ದ್ವೈವಾರ್ಷಿಕ ಪರಂಪರೆಯಲ್ಲಿ 250ನೇ ಪರ್ಯಾಯ ಪೀಠವೇರುವ ಅವಕಾಶ ಅದಮಾರು ಮಠದ್ದಾಗಿದ್ದು 500ನೇ ವರ್ಷ ಸಂಭ್ರಮವೂ ಜತೆಗಿರಲಿದೆ.

2020, ಜ. 18ರಂದು ಪರ್ಯಾಯ ಪೀಠಾರೋಹಣ ಸರದಿಯಲ್ಲಿರುವ ಅದಮಾರು ಮಠಾಧೀಶರು ಬಾಳೆ ಮುಹೂರ್ತದ ಬಳಿಕ ಅಕ್ಕಿ ಮುಹೂರ್ತ ಪೂರೈಸಿದ್ದು ಕಟ್ಟಿಗೆ, ಭತ್ತ ಮುಹೂರ್ತ ಬಾಕಿಯಿದೆ.

ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಎಂಜಿನಿಯರಿಂಗ್‌ ಪದವೀಧರ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಸಾವಯವ ಕೃಷಿ, ಭತ್ತದ ತಳಿ ಉಳಿಸುವ ನಿಟ್ಟಿನಲ್ಲಿ ಹಡಿಲು ಬಿದ್ದ ಗದ್ದೆಯ ಪುನಶ್ಚೇತನಕ್ಕೆ ಪ್ರಾಯೋಗಿಕ ಯೋಜನೆ ರೂಪಿಸಿದ್ದಾರೆ.

ಹೆಬ್ರಿಯ ಚಾರದ 10ಎಕರೆಯಲ್ಲಿ ಮಠದ ಅಭಿಮಾನಿ ಕೃಷಿಕರು ಬಾಳೆ ಕೃಷಿಯಲ್ಲಿ ತೊಡಗಲು ಪ್ರೇರಣೆ ನೀಡಿದ್ದು ಇನ್ನಷ್ಟು ವಿಸ್ತರಣೆಯಾಗಲಿದೆ. ನಿತ್ಯ 4,000 ಬಾಳೆ ಎಲೆ ಊಟಕ್ಕೆ ಹಾಗೂ ನೈವೈದ್ಯಕ್ಕೆ ಬಾಳೆ ಹಣ್ಣೂ ಸಿಗಲಿದೆ.

ಶ್ರೀಈಶಪ್ರಿಯತೀರ್ಥ ಶ್ರೀಪಾದರ ಪೂರ್ವಾಶ್ರಮದಿಂದ 8ಎಕರೆ ಭೂಮಿ ದಾನವಾಗಿ ದೊರೆತಿದ್ದು ಹೈಬ್ರಿಡ್‌ ಕಂಪನಿ ಬೀಜದ ಬದಲು ಕರಾವಳಿ, ರಾಜ್ಯದ 100ಕ್ಕೂ ಅಧಿಕ ಭತ್ತದ ತಳಿ ಉಳಿಸಿ, ಬೆಳೆಸಲು ಉದ್ದೇಶಿಸಲಾಗಿದೆ.

*ಐಟಿಬಿಟಿ ಸಹಿತ ಅನ್ಯ ಕ್ಷೇತ್ರ ಮಾತ್ರವಲ್ಲ ಕೃಷಿಯಲ್ಲೂ ಲಾಭ ಇದೆ ಎನ್ನುವ ಹೊಸ ದಾರಿಯನ್ನು ಯುವಜನತೆಗೆ ತೋರಿಸಬೇಕು. ಮಾರುಕಟ್ಟೆ ವ್ಯವಸ್ಥೆ ಮೂಲಕ ಸಾವಯವ ಉತ್ಪನ್ನಗಳಿಗೆ ಬೇಡಿಕೆಯಿಟ್ಟ ಜನರನ್ನು ತಲುಪಬೇಕು. ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಕಿರಿಯ ಯತಿ, ಅದಮಾರು ಮಠ, ಉಡುಪಿ.

*ದೇಹ, ಮನಸ್ಸಿನ ಬೆಳವಣಿಗೆಗೆ ಪೂರಕವಾದ ಸಾತ್ವಿಕ ಆಹಾರ ಸ್ವೀಕಾರದಿಂದ ಶಕ್ತಿ ಸಂಚಯನ, ಮನಸ್ಸಿಗೆ ಮುದ, ಸಾಧನೆಗೆ ಪ್ರೇರಣೆ ಸಿಗುತ್ತದೆ. ಆಧ್ಯಾತ್ಮದ ಒಲವು, ತನ್ನೊಳಗು ಮತ್ತು ಭಗವಂತನ ಅರಿವು ಸಾಧ್ಯ. ಕೃಷಿಯನ್ನು ದೇವರ ಸೇವೆಯಾಗಿ ಪರಿಗಣಿಸಿದರೆ ಉಂಡವರ ದೇಹದಲ್ಲಿರುವ ಪರಮಾತ್ಮನಿಗೂ ತೃಪ್ತಿ ಜತೆಗೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ರಾಸಾಯನಿಕ ರಹಿತವಾಗಿ ಬೆಳೆದ ಅಕ್ಕಿ ಸಂಗ್ರಹ, ಕೃಷಿಕರಿಗೆ ಉತ್ತೇಜನದ ಸಣ್ಣ ಯತ್ನ ಇದಾಗಿದೆ.
ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಹಿರಿಯ ಯತಿ, ಅದಮಾರು ಮಠ, ಉಡುಪಿ.

ಯಾವ್ಯಾವ ತಳಿ?: ಮುಳ್ಳರೆ, ಮಂಜುಗುಣಿ ಸಣ್ಣಕ್ಕಿ, ರಾಜಕಮಲ, ಮಟ್ಟಳಗ, ಪದ್ಮರೇಖಾ, ಗೌರಿ, ಕೆಂಪಕ್ಕಿ ಸಾವಯವ, ಒಂದ್‌ಕಡ್ಡಿ, ಹೊನ್ನೆಕಟ್ಟು, ಸಿಂಧು, ಆಲೂರು ಸಣ್ಣ, ತನು, ಹೇಮಾವತಿ, ಸೋನ, ಮದ್ರಾಸ್‌ ಸಣ್ಣಕ್ಕಿ, ಪದ್ಮಾ, 1001 ಬ್ರ್ಯಾಂಡ್‌, 1010 ಬ್ರ್ಯಾಂಡ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ