ಆ್ಯಪ್ನಗರ

ಗುಡ್ಡ ಜರಿದು ಕುಂದಾಪುರ ಬಳಿಯ ಕುಳ್ಳುಂಜೆ ಗ್ರಾಮದ ವಾರಾಹಿ ಕಾಲುವೆ ಜಖಂ: ನೀರಿನ ಹರಿವು ಹೆಚ್ಚಿದರೆ ಕಂಟಕ ಗ್ಯಾರಂಟಿ

ಉಡುಪಿ ಜಿಲ್ಲೆ ಕುಂದಾಪುರ ಬಳಿಯಲ್ಲಿರುವ ವಾರಾಹಿ ಕಾಲುವೆ ಅಪಾಯಕ್ಕೆ ಸಿಲುಕಿದೆ. ಇದಕ್ಕೆ ಗುಡ್ಡ ಜರಿತವೇ ಕಾರಣ ಎಂದು ತಿಳಿದುಬಂದಿದೆ. ಅಲ್ಲದೆ, ವಾರಾಹಿ ಬಲದಂಡೆ ಯೋಜನೆ ಕಾಮಗಾರಿ ನಡೆಯುತ್ತಿದ್ದರೂ, ಎಡದಂಡೆ ಕಾಲುವೆ ಯೋಜನೆ ಮಾತ್ರ ಆರಂಭಗೊಂಡಿಲ್ಲದಿರುವುದರಿಂದ ಭೂಮಿ ನೀಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Vijaya Karnataka 17 Sep 2019, 10:46 am
Vijaya Karnataka Web varahi canal
ಜಾನ್‌ ಡಿಸೋಜ
ಕುಂದಾಪುರ: ಶಂಕರನಾರಾಯಣ ಸಮೀಪದ ಕುಳ್ಳುಂಜೆ ಗ್ರಾಮದ ಸಿಂಗನಕೊಡ್ಲು ಎಂಬಲ್ಲಿ ಮಳೆ ನೀರಿನ ಅಬ್ಬರಕ್ಕೆ ಅಲ್ಲಲ್ಲಿ ಗುಡ್ಡ ಜರಿದು ವಾರಾಹಿ ಕಾಲುವೆ ಅಪಾಯಕ್ಕೆ ಸಿಲುಕಿದೆ. ಕಾಲುವೆ ತುಂಬಾ ಮಣ್ಣು ತುಂಬಿದ್ದು ಮೇಲ್ಸೇತುವೆ ಅಪಾಯದಲ್ಲಿದೆ.

ನಾಲ್ಕು ವರ್ಷದ ಹಿಂದೆ ಇಲ್ಲಿ ಗುಡ್ಡಜರಿತ ಉಂಟಾಗಿ ಸಂಪರ್ಕ ಹಾದಿ ಕುಸಿದಿತ್ತು. ಕಾಲುವೆಯೂ ಹಾನಿಗೊಂಡಿತ್ತು. ಬಳಿಕ ದುರಸ್ತಿ ಕಾರ್ಯ ನಡೆದಿತ್ತು. ಇದೀಗ ಮತ್ತೆ ಜರಿತ ಸಂಭವಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಅಪಾಯದಂಚಿನಲ್ಲಿ ಮೇಲ್ಸೇತುವೆ


ಕಾಲುವೆಯಲ್ಲಿ ಮಣ್ಣು: ಭಾರಿ ಪ್ರಮಾಣದಲ್ಲಿ ಮಣ್ಣು ಕಾಲುವೆಯಲ್ಲಿ ಶೇಖರಣೆಗೊಂಡಿದೆ. ಮಳೆ ವಿಪರೀತವಾದಲ್ಲಿ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಳಗೊಂಡಿದೆ. ಅಬ್ಬರದ ಮಳೆಗೆ ತುಂಬಿ ಹರಿಯುತ್ತಿರುವ ಕಾಲುವೆಯ ಸಹಜ ನೀರಿನ ಹರಿವಿಗೆ ಇದೀಗ ಅಡ್ಡಿ ಉಂಟಾಗಿದ್ದು ನೀರು ನಿಗದಿತ ಮಟ್ಟಕ್ಕಿಂತ ಹೆಚ್ಚಳ ತುಂಬಿದರೆ ಕಾಲುವೆಗೇ ಅಪಾಯವಿದೆ ಎನ್ನುತ್ತಾರೆ ಸ್ಥಳೀಯರು.

ಗುಡ್ಡಜರಿತದಿಂದ ಸಿಂಗನಕೊಡ್ಲುವಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಕೂಡ ಅಪಾಯ ಎದುರಿಸುತ್ತಿದೆ. ಸೇತುವೆಯ ಕಾಂಕ್ರೀಟ್‌ ಸ್ಲಾತ್ರ್ಯಬ್‌ ಅಲ್ಲಲ್ಲಿ ಕುಸಿದಿದೆ. ಮೇಲ್ಸೇತುವೆಯ ಮೂಲಕವೇ ಸಿಂಗನಕೊಡ್ಲುವಿನ ನಿವಾಸಿಗಳು, ಶಾಲಾ ಮಕ್ಕಳು ಸಂಪರ್ಕ ಸಾಧಿಸಬೇಕಾಗಿದ್ದು ಪ್ರಸ್ತುತ ಸೇತುವೆ ಮೇಲೆ ಹೆಜ್ಜೆ ಇರಿಸಲು ಭಯಪಡುತ್ತಿದ್ದಾರೆ. ಸೇತುವೆಗೆ ಹೊಂದಿಕೊಂಡಿರುವ ಮಣ್ಣಿನ ಹಾದಿ ದುರ್ಬಲಗೊಂಡಿದೆ. ಕಳೆದ 2-3 ದಿನಗಳಿಂದ ಉಂಟಾಗುತ್ತಿರುವ ಮಳೆಯ ರಭಸಕ್ಕೆ ಆಗುತ್ತಿರುವ ಕುಸಿತದಿಂದ ಅಪಾಯ ತಲೆದೋರಿದೆ.

ಅಪಾಯ ತಡೆಗಟ್ಟಿ: ಮಳೆ ಮುಂದುವರಿಕೆಯಾದಲ್ಲಿ ಗುಡ್ಡ ಪೂರ್ಣ ಜರಿದುಬೀಳುವ ಆತಂಕ ಎದುರಾಗಿದೆ. ಕಾಲುವೆಯಲ್ಲಿ ನೀರು ಬ್ಲಾಕ್‌ ಆದಲ್ಲಿ ಅನೇಕ ಪ್ರದೇಶಗಳು ತೊಂದರೆಗೆ ಸಿಲುಕಲಿವೆ. ಸಂಬಂಧಿತ ಇಲಾಖೆಯವರು ಕೂಡಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ಸಮಾಜ ಸೇವಕ ಚಿಟ್ಟೆ ರಾಜ್‌ಗೋಪಾಲ್‌ ಹೆಗ್ಡೆ.

ಕ್ರಮ ವಹಿಸಲಾಗುವುದು: ಈಗಾಗಲೆ ದುರಸ್ತಿ ಕಾರ್ಯಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಲಾಗಿದೆ. ಮಳೆ ಇಳಿಮುಖ ಆದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ವಾರಾಹಿ ನಿಗಮದ ಸಹಾಯಕ ಎಂಜಿನಿಯರ್‌ ಕೆ.ಎಂ.ಹೆಗ್ಡೆ ತಿಳಿಸಿದ್ದಾರೆ.

ಬಲದಂಡೆ ಯೋಜನೆಗೆ ಇನ್ನೂ ದೊರಕದ ಚಾಲನೆ

ವಾರಾಹಿ ನೀರಾವರಿ ಯೋಜನೆಗೆ 4 ದಶಕ ತುಂಬಿದೆ. ಹೊಳೆಶಂಕರನಾರಾಣ ಡೈವರ್ಶನ್‌ ವಿಯರ್‌ನಿಂದ 0 ಕಿ.ಮೀ.ನಿಂದ 30 ಕಿ.ಮೀ. ವರೆಗಿನ ವಾರಾಹಿ ಎಡದಂಡೆ ಕಾಲುವೆ ರಚನೆಗೊಂಡಿದೆ. 2015ರಿಂದ ಎಡದಂಡೆಯಲ್ಲಿ ನೀರು ಹಾಯಿಸುವಿಕೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈವರೆಗೂ ಬಲದಂಡೆ ಯೋಜನೆಯ ಕಾಮಗಾರಿಗೆ ಚಾಲನೆ ದೊರಕದಿರುವ ಅಸಮಾಧಾನ ಹೊಗೆಯಾಡುತ್ತಿದೆ. ಮೂಲಯೋಜನೆಯಂತೆ 0 ಕಿ.ಮೀ. ಯಿಂದ 44 ಕಿ.ಮೀ ಹೊಳೆಶಂಕರನಾರಾಯಣದಿಂದ ಕಾವ್ರಾಡಿಯವರೆಗಿನ ಬಲದಂಡೆ ಯೋಜನೆ ಇದೀಗ ಮೊಟಕುಗೊಂಡು ಇದೀಗ 0 ಕಿಮೀಯಿಂದ 18 ಕಿಮೀ ವರೆಗಿನ ವ್ಯಾಪ್ತಿಯಲ್ಲಿ ಬಲದಂಡೆ ಕಾಲುವೆ ರಚಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಬಲದಂಡೆ ಯೋಜನೆಗೆ ಭೂಮಿ ನೀಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಮಗಾರಿಗೆ ಚಾಲನೆ ಸಿಗದಿರುವುದು ಒಂದೆಡೆಯಾದರೆ ಪಹಣಿಯಲ್ಲಿ ಇವತ್ತಿಗೂ ಅಳಿದುಳಿದ ಜಮೀನಿನ ದಾಖಲೆಯಲ್ಲಿ ವಾರಾಹಿ ನಿಗಮ ಎಂದು ನಮೂದಿಸಲ್ಪಟ್ಟಿರುವುದರಿಂದ ಗೊಂದಲ ಮುಂದುವರಿದಿದೆ.

ಸೌಕೂರು ಯೋಜನೆಯೂ ನನೆಗುದಿಗೆ

ಬೈಂದೂರು ವ್ಯಾಪ್ತಿಗೆ ನೀರು ನೀಡುವ 74ಕೋಟಿ ವೆಚ್ಚದ ಸೌಕೂರು ಏತನೀರಾವರಿ ಯೋಜನೆಗೆ ಇನ್ನೂ ಚಾಲನೆ ದೊರಕಿಲ್ಲ. ಹೊಸಂಗಡಿ ಕೋಟೆಕೆರೆಗೆ ವಾರಾಹಿ ನೀರು ಹಾಯಿಸಿ 5ಕ್ಕೂ ಹೆಚ್ಚು ಗ್ರಾಮಗಳಿಗೆ ನೀರುಣಿಸುವ ಪ್ರಸ್ತಾಪವು ನೆನೆಗುದಿಗೆ ಬಿದ್ದಿದೆ. ಸರಕಾರ ವಾರಾಹಿ ನೀರಾವರಿ ಯೋಜನೆ ಕುರಿತಂತೆ ಮಂದಗತಿಯ ಧೋರಣೆ ತಳೆದಿದೆ. ನಿರ್ಧಾರಿತ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸಿ ದಶಕದ ಯೋಜನೆ ಪೂರ್ಣತೆಗೆ ಸರಕಾರ ಸಹಕರಿಸಬೇಕು. ಕುಳ್ಳುಂಜೆ ಗ್ರಾಮದ ಸಿಂಗನಕೊಡ್ಲುಗುಡ್ಡಜರಿತ ತಡೆಯುವ ನಿಟ್ಟಿನಲ್ಲಿಕೂಡಲೆ ಕ್ರಮ ವಹಿಸಬೇಕು ಎಂದು ಉಡುಪಿ ಜಿಲ್ಲಾರೈತ ಸಂಘದ ಸಂಚಾಲಕ ಬಲಾಡಿ ಸಂತೋಷ್‌ ಶೆಟ್ಟಿ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ