ಆ್ಯಪ್ನಗರ

ದೇಶದ ಶೇ.80 ರಷ್ಟು ಜನತೆಗೆ ಉಚಿತ ಕಾನೂನು ನೆರವು

ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ದೇಶದ ಒಟ್ಟು ಜನಸಂಖ್ಯೆಯ ಶೇ.80ರಷ್ಟು ಜನತೆಗೆ ಉಚಿತ ಕಾನೂನು ನೆರವು ಪಡೆಯುವ ಅವಕಾಶವಿದ್ದು, ಬೆರಳೆಣಿಕೆ ಮಂದಿಯಷ್ಟೇ ಈ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಲ್ಪ ತಿಳಿವಳಿಕೆ, ಅರಿವಿನ ಕೊರತೆಯಿಂದಾಗಿ ಅನೇಕರು ಕಾನೂನಿನ ತೊಡಕುಗಳಿಗೆ ಸಿಲುಕಿಕೊಳ್ಳುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ. ಜೋಷಿ ತಿಳಿಸಿದ್ದಾರೆ.

Vijaya Karnataka 1 Mar 2019, 5:00 am
ಉಡುಪಿ: ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ದೇಶದ ಒಟ್ಟು ಜನಸಂಖ್ಯೆಯ ಶೇ.80ರಷ್ಟು ಜನತೆಗೆ ಉಚಿತ ಕಾನೂನು ನೆರವು ಪಡೆಯುವ ಅವಕಾಶವಿದ್ದು, ಬೆರಳೆಣಿಕೆ ಮಂದಿಯಷ್ಟೇ ಈ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಲ್ಪ ತಿಳಿವಳಿಕೆ, ಅರಿವಿನ ಕೊರತೆಯಿಂದಾಗಿ ಅನೇಕರು ಕಾನೂನಿನ ತೊಡಕುಗಳಿಗೆ ಸಿಲುಕಿಕೊಳ್ಳುತ್ತಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ.ಎಂ. ಜೋಷಿ ತಿಳಿಸಿದ್ದಾರೆ.
Vijaya Karnataka Web kanunu


ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅಭಿಯೋಗ ಇಲಾಖೆ, ಪೊಲೀಸ್‌ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಕ್ರಿಶ್ಚಿಯನ್‌ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಕಾನೂನು ಸಾಕ್ಷರತಾ ರಥ (ಸಂಚಾರಿ ಜನತಾ ನ್ಯಾಯಾಲಯ)ದ ಮೂಲಕ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾನೂನು ಸೇವಾ ಪ್ರಾಧಿಕಾರ ಜನ ಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವ, ಕಾನೂನು ತೊಡಕುಗಳಿಗೆ ಸಿಲುಕಿದವರಿಗೆ ಉಚಿತ ಕಾನೂನು ನೆರವು ಹಾಗೂ ರಾಜೀ ಸಂಧಾನ ಮತ್ತು ಲೋಕ ಅದಾಲತ್‌ ಮೂಲಕ ಇತ್ಯರ್ಥ ಪಡಿಸುವ ಕೆಲಸ ಮಾಡುತ್ತದೆ. ದೇಶದ ಶೇ. 50 ರಷ್ಟು ಮಹಿಳೆಯರು, ಶೇ. 30 ರಷ್ಟು ಆರ್ಥಿಕ ದುರ್ಬಲರು, ಅಸಕ್ತರು, ಅವಘಡಕ್ಕೆ ಸಿಲುಕಿರುವ ಎಲ್ಲಾ ವರ್ಗದವರು ಸೇರಿ ಒಟ್ಟು ಶೇ. 80 ರಷ್ಟು ಜನತೆಗೆ ಉಚಿತ ಕಾನೂನು ನೆರವು ಪಡೆದುಕೊಳ್ಳಲು ಅವಕಾಶವಿದೆ. ಈ ಬಗ್ಗೆ ಹೆಚ್ಚಿನ ಅರಿವು ಮೈಗೂಡಿಸಿಕೊಂಡು ಕಾನೂನು ತೊಡಕುಗಳಿಂದ ತಪ್ಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾನೂನು ಸಾಕ್ಷರತಾ ರಥ ರಾಜ್ಯದಲ್ಲಿ ಎಲ್ಲೆಡೆ ಸಂಚರಿಸಿ ನಾನಾ ಕಾನೂನು ತೊಡಕುಗಳ ಬಗ್ಗೆ ಅರಿವು ಮೂಡಿಸಲಿದೆ. ಉಡುಪಿಯಲ್ಲಿ 3 ದಿನಗಳ ಕಾಲ ಸಂಚರಿಸುವ ಈ ಸಾಕ್ಷರತಾ ರಥವು ಪೋಕ್ಸೋ ಕಾಯಿದೆ, ಮೋಟಾರು ವಾಹನ ಕಾಯಿದೆ, ಮಾದಕ ವ್ಯಸನ, ಸೈಬರ್‌ ಕ್ರೈಂ, ಬಾಲಾಪರಾಧ ಮತ್ತು ಬಾಲ ನ್ಯಾಯ ಕಾಯಿದೆ ಬಗ್ಗೆ ಅರಿವು ಮೂಡಿಸಲಿದೆ ಎಂದರು.

ಮತದಾನದ ಮಹತ್ವ ಕುರಿತು ಮಾತನಾಡಿ, 18 ವರ್ಷ ಮೇಲ್ಪಟ್ಟಿರುವ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತದಾನ ಮಾಡದೇ ಇರುವುದು ತಪ್ಪು. ವಿದ್ಯಾರ್ಥಿಗಳು ತಮ್ಮ ಹೆತ್ತವರಿಗೆ ಮತದಾನ ಮಾಡುವಂತೆ ಪ್ರೇರೆಪಿಸಬೇಕೆಂದು ಸಲಹೆ ಕೊಟ್ಟರು. ಮತಯಂತ್ರ ಹಾಗೂ ವಿವಿ ಪ್ಯಾಡ್‌ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಉಡುಪಿ ಕ್ರಿಶ್ಚಿಯನ್‌ ಹೈಸ್ಕೂಲ್‌ನ ಮುಖ್ಯ ಶಿಕ್ಷಕಿ ಹೆಲೆನ್‌ ವಿ. ಸಾಲಿನ್ಸ್‌ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿವೇಕಾನಂದ ಎಸ್‌. ಪಂಡಿತ್‌, ಎಎಸ್ಪಿ ಕುಮಾರಚಂದ್ರ, ವಕೀಲರ ಸಂಘದ ಅಧ್ಯಕ್ಷ ಎಚ್‌. ರತ್ನಾಕರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುಳಾ ಉಪಸ್ಥಿತರಿದ್ದರು.ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜ್ಯೋತಿ ಪಿ. ನಾಯಕ್‌ ಪೋಕ್ಸೋ ಕಾಯಿದೆ ಕುರಿತು ಉಪನ್ಯಾಸ ನೀಡಿದರು. ಶಿಕ್ಷಣ ಸಂಯೋಜಕ ಚಂದ್ರ ನಾಯ್ಕ್‌ ಕಾರ‍್ಯಕ್ರಮ ನಿರೂಪಿಸಿದರು. ಅಧ್ಯಾಪಕ ಸುಬ್ರಾಯ ಭಟ್‌ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ