ಆ್ಯಪ್ನಗರ

ಬಾರು, ವೈನುಶಾಪಿಗೆ ದೇವರ ಹೆಸರು ಸಾರ್ವಜನಿಕ ಚರ್ಚೆಯಾಗಲಿ: ಕೋಟ

“ಮದ್ಯದಂಗಡಿಗಳಿಗೆ ಹಿಂದೂ ದೇವರ ಹೆಸರನ್ನಿಡದಂತೆ ರಾಜ್ಯ ಸರಕಾರ ಯಾವುದೇ ನಿರ್ಣಯವನ್ನೂ ಕೈಗೊಂಡಿಲ್ಲ, ಅಂತಹ ಉದ್ದೇಶವೂ ಇಲ್ಲ,” - ಕೋಟ ಶ್ರೀನಿವಾಸ ಪೂಜಾರಿ.

Vijaya Karnataka 7 Nov 2019, 7:27 pm
ಉಡುಪಿ: ಬಾರು, ವೈನುಶಾಪುಗಳಿಗೆ ದೇವರ ಹೆಸರಿಟ್ಟಿದ್ದರ ವಿರುದ್ಧ ಬಂದ ದೂರಿಗೆ ಕೈಗೊಳ್ಳಬಹುದಾದ ಕ್ರಮದ ಕುರಿತು ವರದಿ ಕೇಳಿದ್ದೇನೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಚರ್ಚೆ ಸೂಕ್ತ ಎಂದು ರಾಜ್ಯ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
Vijaya Karnataka Web Kota Srinivas Poojary


ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಮದ್ಯದಂಗಡಿಗಳಿಗೆ ಹಿಂದೂ ದೇವರ ಹೆಸರನ್ನಿಡದಂತೆ ರಾಜ್ಯ ಸರಕಾರ ಯಾವುದೇ ನಿರ್ಣಯವನ್ನೂ ಕೈಗೊಂಡಿಲ್ಲ, ಅಂತಹ ಉದ್ದೇಶವೂ ಇಲ್ಲ,” ಎಂದರು.

ಮದ್ಯದಂಗಡಿಗಳಿಗೆ ದೇವರ ಹೆಸರಿಡದಂತೆ ಆದೇಶ ಹೊರಡಿಸಲಾಗದು. ದೇವರ ಹೆಸರಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖಾ ಪ್ರಧಾನ ಕಾರ್ಯದರ್ಶಿ, ಅಬಕಾರಿ ಮತ್ತು ಕಾನೂನು ಇಲಾಖೆ ಅಭಿಪ್ರಾಯ ಕೇಳಿದ್ದು ಇನ್ನೂ ವರದಿ ಬಂದಿಲ್ಲ ಎಂದು ಹೇಳಿದರು.

ಒತ್ತಡ ಹೇರದಂತೆ ಸೂಚನೆ

ಸಾಲ ಮನ್ನಾ ಆಗಿದ್ದರೂ ಸಾಲ ಮರುಪಾವತಿಸುವಂತೆ ಮಹಿಳಾ ಮೀನುಗಾರರ ಮೇಲೆ ಒತ್ತಡ ಹೇರದಂತೆ ಬ್ಯಾಂಕು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಮೀನುಗಾರಿಕಾ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿ, ಲೀಡ್ ಬ್ಯಾಂಕ್, ಸಹಕಾರಿ ಸೊಸೈಟಿಗಳ ಪ್ರಮುಖರ ಸಭೆಯ ಮಾಹಿತಿ ನೀಡಿದ ಅವರು, ‘ಮೀನುಗಾರ ಮಹಿಳೆಯರ ಸಾಲ ಮನ್ನಾ ಮಾಡಿದ್ದರೂ ಕೆಲ ಬ್ಯಾಂಕುಗಳು ಸಾಲ ಮರಳಿಸಲು ಒತ್ತಡ ಹೇರುತ್ತಿವೆ’ ಎಂದರು.

ಮೀನುಗಾರ ಮಹಿಳೆಯರಿಗೆ ಈ ನಿಟ್ಟಿನಲ್ಲಿ ಆತಂಕ ಬೇಡ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 2017 -18 ಹಾಗೂ 18-19ರಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕರಾವಳಿಯ ಮೂರು ಜಿಲ್ಲೆಗಳ 23,000 ಮೀನುಗಾರ ಮಹಿಳೆಯರು ತಲಾ 50,000 ರೂಪಾಯಿಗಳಂತೆ ಪಡೆದ 62 ಕೋಟಿ ರೂ. ಮನ್ನಾ ಘೋಷಣೆಯಾಗಿದೆ.

ಈ ಸಂಬಂಧ ಅರ್ಥಿಕ ಇಲಾಖಾ ಅನುಮತಿಗೆ ಪ್ರಸ್ತಾಪ ಕಳಿಸಿದ್ದು ಸಾಲಗಾರರ ಸಮಗ್ರ ವಿವರ ಸಂಗ್ರಹಿಸಿ ನೀಡಲು ಒಂದೆರಡು ತಿಂಗಳು ವಿಳಂಬವಾಗಿದೆ. ಸಾಲದ ಮೊತ್ತ ಮರಳಿಸದೆ ಸುಸ್ತಿದಾರರಾದರೆ ಮುಂದಿನ ದಿನಗಳಲ್ಲಿ ಯಾವುದೇ ಸೌಲಭ್ಯ ಸಿಗದ ಬಗ್ಗೆ ಕೆಲ ಬ್ಯಾಂಕುಗಳು ಮಹಿಳಾ ಮೀನುಗಾರರಲ್ಲಿ ಆತಂಕ ಮೂಡಿಸಿವೆ. ಹೀಗಾಗಿ ಸಾಲ ಮರಳಿಸಲು ಒತ್ತಡ ಹೇರದಿರಲು ಬ್ಯಾಂಕ್ ಅಧಿಕಾರಿಗಳು ಒಪ್ಪಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ