ಆ್ಯಪ್ನಗರ

ಗುಹೇಶ್ವರ ದೇವಳದಲ್ಲಿ ಮಹಾಶಿವರಾತ್ರಿ: ಗುಹಾ ಪ್ರವೇಶ ನಿಷಿದ್ಧ, ಭಕ್ತರಿಗೆ ನಿರಾಸೆ

ಪೂಜೆ ಮಾಡುವ ಅರ್ಚಕರ ವಿನಃ ಸಾರ್ವಜನಿಕರು ಗುಹಾ ಪ್ರವೇಶ ಮಾಡುವುದು ಮಹಾಪಾಪ ಕಾರ‍್ಯ ಆಗಿದೆ ಎಂಬ ಉತ್ತರ ದೊರಕಿರುವುದರಿಂದ ಈ ಬಾರಿಯ ಶಿವರಾತ್ರಿಗೆ ಆಗಮಿಸಿದ ಅಸಂಖ್ಯ ಭಕ್ತರು ಗುಹಾ ಪ್ರವೇಶದ್ವಾರದಲ್ಲಿ ಶಿವನಿಗೆ ಪೂಜಾರ್ಚನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.

Vijaya Karnataka 14 Dec 2022, 4:59 pm
ಕುಂದಾಪುರ: ಶಿವರಾತ್ರಿಯ ದಿನದಂದು ಗುಹೆ ಪ್ರವೇಶಿಸಿ ಶಿವ ದರ್ಶನ ಪಡೆಯುವ ಅವಕಾಶ ಹೊಂದಿರುವ ಬೈಂದೂರು ಕ್ಷೇತ್ರದ ಗುಜ್ಜಾಡಿ ಶ್ರೀ ಗುಹೇಶ್ವರ ದೇವಾಲಯದಲ್ಲಿ ಈ ಬಾರಿ ಗುಹಾ ಪ್ರವೇಶ ನಿಷೇಧಿಸಲಾಗಿದೆ. ಗುಹೆ ಪ್ರವೇಶಿಸಿ ಶಿವ ದರ್ಶನ ಪಡೆಯಬಯಸಿ ದೂರದೂರದಿಂದ ಆಗಮಿಸಿದ ಭಕ್ತರು ನಿರಾಸೆ ಅನುಭವಿಸಿದ್ದಾರೆ.
Vijaya Karnataka Web Temple


ನಿಷಿದ್ಧ ಯಾಕೆ?: ಗುಹೇಶ್ವರ ಸನ್ನಿಧಿ ಪುರಾಣ ಪ್ರಸಿದ್ಧ ಎನಿಸಿದೆ. ಕ್ಷೇತ್ರದಲ್ಲಿ ಇತ್ತೀಚೆಗೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಮುಂಚಿತವಾಗಿ ನಡೆದ ಸ್ವರ್ಣಾರೂಢ ಪ್ರಶ್ನೆ ಚಿಂತನೆಯಲ್ಲಿ ಗುಹಾ ಪ್ರವೇಶ ಸಾರ್ವಜನಿಕವಾಗಿ ನಿಷೇಧಿಸಬೇಕೆಂಬ ಸೂಚನೆ ದೊರಕಿದೆ. ಗುಹೇಶ್ವರನ ಮೂಲ ಸನ್ನಿಧಿ ಇರುವ ಗುಹೆಯು ಋುಷಿ ಮುನಿಗಳು ತಪಸ್ಸು ಮಾಡಿ ಸಿದ್ಧಿ ಪಡೆದ ಸ್ಥಳವಾಗಿದೆ. ಮುನಿಗಳ ತಪಸ್ಸಿಗೆ ಶಿವ ಮೆಚ್ಚಿ ಸಪರಿವಾರ ಸಮೇತವಾಗಿ ಲಿಂಗರೂಪದಲ್ಲಿ ಉದ್ಭವಿಸಿದ್ದು ಈ ಗುಹೆಯ ದ್ವಾರವೇ ಶಿವನಾಲಯದ ಗರ್ಭಗುಡಿಯಾಗಿದೆ.

ಪೂಜೆ ಮಾಡುವ ಅರ್ಚಕರ ವಿನಃ ಸಾರ್ವಜನಿಕರು ಗುಹಾ ಪ್ರವೇಶ ಮಾಡುವುದು ಮಹಾಪಾಪ ಕಾರ‍್ಯ ಆಗಿದೆ ಎಂಬ ಉತ್ತರ ದೊರಕಿರುವುದರಿಂದ ಈ ಬಾರಿಯ ಶಿವರಾತ್ರಿಗೆ ಆಗಮಿಸಿದ ಅಸಂಖ್ಯ ಭಕ್ತರು ಗುಹಾ ಪ್ರವೇಶದ್ವಾರದಲ್ಲಿ ಶಿವನಿಗೆ ಪೂಜಾರ್ಚನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.

ಮಹಾಶಿವರಾತ್ರಿ ಸಂಭ್ರಮ
: ಬೆಳಗ್ಗೆ ಗಣಹೋಮ, ನಂತರದಲ್ಲಿ ಶೃಂಗೇಶ್ವರ ದೇವಾಲಯದ ಸಮೀಪವಿರುವ ಅಗಸ್ತ್ಯತೀರ್ಥ, ವ್ಯಾಸತೀರ್ಥ ಕಮಂಡಲು ತೀರ್ಥದಿಂದ ಅಗ್ರೋದಕವನ್ನು ಮೆರವಣಿಗೆಯೊಂದಿಗೆ ಕ್ಷೇತ್ರಕ್ಕೆ ತರಲಾಯಿತು. ಬಳಿಕ ರುದ್ರಪಾರಾಯಣ, ರುದ್ರಹವನ, ಶತರುದ್ರಾಭಿಷೇಕ ಇತ್ಯಾದಿ ನಡೆಯಿತು. ಸಹಸ್ರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ ಗುಹೇಶ್ವರ ದೇವರ ದರ್ಶನ ಪಡೆದರು.

ಶಿವರಾತ್ರಿಯಂದು ಗುಹೇಶ್ವರನ ಗುಹಾ ದರ್ಶನ ಭಾಗ್ಯ ಇರುತ್ತದೆ ಎಂಬ ಮಾಹಿತಿಯಂತೆ ಆಗಮಿಸಿದ್ದೆ. ಆದರೆ ಈ ಬಾರಿ ಗುಹಾ ಪ್ರವೇಶ ನಿಷೇಧಿಸಲಾಗಿತ್ತು. ಆದರೂ ದೇವರ ದರ್ಶನದಿಂದ ಮನಸ್ಸಿಗೆ ಖುಷಿಯಾಗಿದೆ. ಕ್ಷೇತ್ರದ ಪಾವಿತ್ರ್ಯತೆ ಹಿತದೃಷ್ಟಿಯಿಂದ ತೆಗೆದುಕೊಂಡ ಕ್ರಮ ಸ್ವಾಗತಾರ್ಹ. ಹಿಂದೆ ಗುಹೆ ಪ್ರವೇಶಿಸಿದವರು ಭಾಗ್ಯವಂತರು. ಮುಂದೆ ಈ ಅವಕಾಶ ಸಿಗುತ್ತದೊ ಇಲ್ಲವೊ ಗೊತ್ತಿಲ್ಲ.

ಗಣೇಶ್‌ ದೇವಾಡಿಗ, ಸಾಫ್ಟ್‌ವೇರ್‌ ಎಂಜಿನಿಯರ್‌ ಬೆಂಗಳೂರು.

ಗುಹೇಶ್ವರ ಪುರಾಣ ಪ್ರಸಿದ್ಧ ಕ್ಷೇತ್ರ. ಈ ಮೊದಲು ವರ್ಷಕ್ಕೊಂದು ದಿನ ಶಿವರಾತ್ರಿಯಂದು ಗುಹೆಯ ಒಳ ಹೊಕ್ಕು ಮೂಲ ಸನ್ನಿಧಿ ದರ್ಶಿಸುವ ಕ್ರಮವಿತ್ತು. ಇತ್ತೀಚೆಗೆ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಇಡಲಾದ ಸ್ವರ್ಣಾರೂಢ ಪ್ರಶ್ನಾ ಚಿಂತನೆಯಲ್ಲಿ ಗುಹೆ ಪ್ರವೇಶ ಸಾರ್ವಜನಿಕವಾಗಿ ನಿಷೇಧಿಸಬೇಕೆಂಬ ನಿರ್ದೇಶನ ದೊರಕಿರುವುದರಿಂದ ಈ ಬಾರಿ ಗುಹಾ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಗುಹೇಶ್ವರನ ಗುಹೆಯೇ ಗರ್ಭಗೃಹ ಆಗಿರುವುದರಿಂದ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ಪ್ರಶ್ನಾ ಚಿಂತನೆಯಂತೆ ತಿಳಿಸಲಾದ ರೀತಿಯಲ್ಲಿ ಪ್ರಾಯಶ್ಚಿತ್ತಾದಿ ಕಾರ್ಯಗಳನ್ನು ಈಗಾಗಲೆ ನಡೆಸಲಾಗಿದೆ. ಹಿಂದೆಂದಿಗಿಂತಲೂ ಈ ಬಾರಿ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಗುಹೆಯ ಪ್ರವೇಶದ್ವಾರದಲ್ಲಿ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ.
ನರಸಿಂಹ ಗಾಣಿಗ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ