ಆ್ಯಪ್ನಗರ

ಕುಂದಾಪುರ: ಗೋಲ್ಡ್‌ ಸ್ಕೀಂ ಹೆಸರಲ್ಲಿ 10.5 ಕೆ.ಜಿ. ಚಿನ್ನ, ಕೋಟ್ಯಂತರ ರೂ. ವಂಚನೆ

ಜನರಿಂದ ಸಂಗ್ರಹಿಸಿದ ಈ ಚಿನ್ನದ ಆಭರಣಗಳನ್ನು ಈ ಚಿನ್ನದ ಮಳಿಗೆಯು ಫೈನಾನ್ಸ್‌ ಒಂದರಲ್ಲಿ ಅಡಮಾನ ಇರಿಸಿದ್ದು ಸಾಲವನ್ನು ಪಾವತಿಸದ ಕಾರಣ, ಫೈನಾನ್ಸ್‌ ಸಂಸ್ಥೆಯು ಚಿನ್ನವನ್ನು ಹರಾಜು ಮಾಡಲು ಸಿದ್ಧತೆ ನಡೆಸಿತ್ತು.

Vijaya Karnataka Web 16 Mar 2021, 2:21 pm
ಕುಂದಾಪುರ: ಚಿನ್ನ ಖರೀದಿಸಬೇಕೆಂಬ ಜನರ ಆಸೆಗೆ ಈಗ ತಣ್ಣಿರು ಬಿದ್ದಿದೆ. ಗೋಲ್ಡ್‌ ಸ್ಕೀಮ್‌ ಹೆಸರಿನಲ್ಲಿ ನೂರಾರು ಮಂದಿ ದುಡ್ಡು ಹಾಕಿ ಈಗ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಕುಂದಾಪುರದಲ್ಲಿ ಹಲವಾರು ಮಂದಿ ಈ ವಂಚನೆಗೆ ಬಲಿಯಾಗಿದ್ದಾರೆ.
Vijaya Karnataka Web ಪೊಲೀಸ್‌
ಪೊಲೀಸ್‌


ಇಲ್ಲಿನ ಪಾರಿಜಾತಾ ಹೋಟೆಲ್‌ ಬಳಿ ಇರುವ ಚಿನ್ನಾಭರಣ ಮಳಿಗೆಯ ವಿರುದ್ಧ ಪ್ರಕರಣ ದಾಖಲಾಗಿದೆ. ವರದಿಯ ಪ್ರಕಾರ, ಈ ಮಳಿಗೆಯು ಗೋಲ್ಡ್‌ ಇನ್ವೆಸ್ಟ್‌ಮೆಂಟ್‌ ಮಂತ್ಲಿ ಕ್ಯಾಶ್‌ ಸ್ಕೀಂ ಎಂಬ ನಕಲಿ ಯೋಜನೆ ಮಾಡಿದ್ದು ಇದರಡಿ ಬಹಳಷ್ಟು ಜನರು ಹೂಡಿಕೆ ಮಾಡಿದ್ದರು. ಆದರೆ ಈಗ ವಂಚನೆ ಮಾಡಿದ್ದು ಈ ಜನರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮೋಸಕ್ಕೊಳಗಾದ ಜನರು, ಯೋಜನೆಯ ಅವಧಿಯ ಕೊನೆಯಲ್ಲಿ ಚಿನ್ನವನ್ನು ಖರೀದಿಸುವ ಸಲುವಾಗಿ ಪ್ರತಿ ತಿಂಗಳು ಕಂತುಗಳಂತೆ ಹಣವನ್ನು ನೀಡಿದ್ದಾರೆ. ಇತರರು ತಮ್ಮ ಚಿನ್ನವನ್ನು ಸಂಸ್ಥೆಗೆ ನೀಡಿ ಪ್ರತಿ ತಿಂಗಳು ಹಣ ಪಡೆಯಲು ಬಯಸಿದ್ದರು. ಹಾಗೆಯೇ ಇನ್ನು ಕೆಲವರು ಒಂದು ದೊಡ್ಡ ಮೊತ್ತವನ್ನು ಠೇವಣಿ ಇಟ್ಟು ಅದರಿಂದ ಮಾಸಿಕ ಲಾಭಾಂಶವನ್ನು ಪಡೆಯಲಿದ್ದರು. ಆದರೆ ಈಗ ಅಂದಾಜು 10.5 ಕೆಜಿ ಚಿನ್ನ ಮತ್ತು ಎಂಟು ಕೋಟಿ ರೂಪಾಯಿ ನಗದು ವಂಚನೆಯಾಗಿದೆ ಎನ್ನಲಾಗಿದೆ.

ಈ ಮಳಿಗೆಯವರು ಸುಮಾರು 400 ಮನೆಗಳಿಂದ ಹಣವನ್ನು ಸಂಗ್ರಹಿಸಿದ್ದರು ಎಂದು ವಂಚಿತರು ಹೇಳಿದ್ದಾರೆ.

ಒಂದು ಲಕ್ಷದಿಂದ ಹತ್ತು ಲಕ್ಷ ರೂಪಾಯಿವರೆಗಿನ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಜನರಿಗೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿಗೆ ಎರಡು ಮೂರು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು.

ಈ ಲಾಭದಾಯಕ ಪ್ರಸ್ತಾಪವು ವಿದೇಶದಲ್ಲಿರುವವರನ್ನು ಆಕರ್ಷಿಸಿತು ಎಂದು ಹೇಳಲಾಗಿದೆ. ಆಭರಣ ಮಳಿಗೆಯ ಪ್ರತಿನಿಧಿಗಳು ಚಿನ್ನ ಸಂಗ್ರಹಿಸಲು ಮನೆ ಮನೆಗೆ ಭೇಟಿ ನೀಡಿದ್ದು ಹೀಗೆ ಸಂಗ್ರಹಿಸಿದ ಚಿನ್ನವನ್ನು ಆಭರಣ ಅಂಗಡಿಯಲ್ಲಿ ಪ್ರದರ್ಶಿಸಲಾಗುವುದು ಎಂದು ಮಾಲೀಕರು ತಿಳಿಸಿದ್ದರು.

ಈ ಮಳಿಗೆಯು ಹಣವನ್ನು ಮೂರು ವರ್ಷಗಳ ಹಿಂದೆಯೇ ಸಂಗ್ರಹಿಸಿದೆ ಎಂದು ಹೇಳಲಾಗಿದೆ.

ಜನರಿಂದ ಸಂಗ್ರಹಿಸಿದ ಈ ಚಿನ್ನದ ಆಭರಣಗಳನ್ನು ಈ ಚಿನ್ನದ ಮಳಿಗೆಯು ಫೈನಾನ್ಸ್‌ ಒಂದರಲ್ಲಿ ಅಡಮಾನ ಇರಿಸಿದ್ದು ಸಾಲವನ್ನು ಪಾವತಿಸದ ಕಾರಣ, ಫೈನಾನ್ಸ್‌ ಸಂಸ್ಥೆಯು ಚಿನ್ನವನ್ನು ಹರಾಜು ಮಾಡಲು ಸಿದ್ಧತೆ ನಡೆಸಿತ್ತು. ಹರಾಜಿಗೂ ಮುನ್ನ ಅವರು ಈ ಆಭರಣಗಳ ಮೇಲಿದ್ದ ಹೆಸರುಗಳು ಮತ್ತು ದೂರವಾಣಿ ಸಂಖ್ಯೆಗಳ ಆಧಾರದ ಮೇಲೆ ಆಭರಣಗಳ ಮಾಲೀಕರನ್ನು ಸಂಪರ್ಕಿಸಿದರು.

ಆಭರಣ ಮಳಿಗೆಯವರು ಒಂದು ವರ್ಷದಿಂದ ಹಣವನ್ನು ಪಾವತಿಸದ ಕಾರಣ ಮತ್ತು ನೀಡಲಾದ ಚೆಕ್‌ಗಳು ಬೌನ್ಸ್‌ ಆದ ಕಾರಣ ಜನರು ತಮ್ಮ ಸಾಲವನ್ನು ಪಾವತಿಸುವಂತೆ ತಿಳಿಸಲಾಗಿತ್ತು.

ಆನಂತರ ಜನರು ಆಭರಣ ಮಳಿಗೆಗೆ ಮುತ್ತಿಗೆ ಹಾಕಿದ್ದು ಮಾಲೀಕರು ಲೆಕ್ಕಾಚಾರ ನೀಡುವುದಾಗಿ ಹೇಳಿದ್ದರೂ ಪೊಲೀಸರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆಂದು ತಿಳಿದುಬಂದಿದೆ.

ಸೋಮವಾರ ಪೊಲೀಸ್ ಠಾಣೆ ಎದುರು ಜಮಾಯಿಸಿದ ಸಂತ್ರಸ್ತರು ತಮ್ಮ ದಾಖಲೆಗಳನ್ನು ನೀಡಿ ಆಭರಣ ವ್ಯಾಪಾರಿಗಳನ್ನು ಬಂಧಿಸಿ ತಮ್ಮ ಚಿನ್ನದ ಆಭರಣಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದರು. ಕೆಲವು ದಿನಗಳ ಹಿಂದೆ, ಹಣವನ್ನು ಮರುಪಾವತಿಸಬೇಕೆಂದು ಒತ್ತಾಯಿಸಿ ಜನರು ಈ ಸಂಸ್ಥೆಯ ಪಾಲುದಾರರ ನಿವಾಸದ ಮುಂದೆ ಜಮಾಯಿಸಿದ್ದರು. ಪ್ರಸ್ತುತ ವಿದೇಶದಲ್ಲಿರುವ ಈ ಆಭರಣ ಮಳಿಗೆ ಮಾಲೀಕರು ತಮ್ಮ ಕುಟುಂಬವನ್ನು ಸ್ಥಳಾಂತರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಂಸ್ಥೆಯ ವ್ಯವಸ್ಥಾಪಕ ಜಾಫರ್ ಕಂಡ್ಲೂರು ಮತ್ತು ಅಕೌಂಟೆಂಟ್ ಫರಾಜ್ ಮಾವಿನಕಟ್ಟೆ ಎಂಬವರನ್ನು ಬಂಧಿಸಿದ್ದಾರೆ. ಸಂಸ್ಥೆಯ ಮಾಲೀಕರು, ನೌಕರರು ಸೇರಿದಂತೆ 24 ಹೆಸರುಗಳನ್ನು ಉಲ್ಲೇಖಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ