ಆ್ಯಪ್ನಗರ

ಉಡುಪಿಯ ದೆಂದೂರುಕಟ್ಟೆ ಗಣೇಶೋತ್ಸವಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ!

ಜಿಲ್ಲೆಯ ದೆಂದೂರುಕಟ್ಟೆ ಸಾರ್ವಜನಿಕ ಗಣೇಶೋತ್ಸವಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ತದ್ರೂಪಿ ಹಿರಿಯಡ್ಕದ ಸದಾನಂದ ನಾಯಕ್ ಆಗಮಿಸಿದ್ದು, ಎಲ್ಲರೂ ಮೋದಿ ಎಂದೇ ಭಾವಿಸಿದರು.

Vijaya Karnataka Web 3 Sep 2019, 9:14 pm
ಉಡುಪಿ: ಜಿಲ್ಲೆಯ ದೆಂದೂರುಕಟ್ಟೆ ಸಾರ್ವಜನಿಕ ಗಣೇಶೋತ್ಸವಕ್ಕೆ ಬಿಗು ಬಂದೋಬಸ್ತ್ ನಿಯೋಜಿಸಲಾಗಿತ್ತು. ರಸ್ತೆಯಲ್ಲಿ ವಾಹನ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ಅಷ್ಟೊತ್ತಿಗಾಗಲೇ ಝಡ್ ಪ್ಲಸ್ ಭದ್ರತೆಯಲ್ಲಿದ್ದ ಕೆಂಪು ಗೂಟದ ಕಾರೊಂದು ಸೈರನ್ ಮೊಳಗಿಸುತ್ತಾ ಸಾಗಿ ಬಂತು!
Vijaya Karnataka Web modi


ಸ್ಥಳದಲ್ಲಿ ಏನಾಗುತ್ತಿದೆ ಎನ್ನುವುದನ್ನು ಅರಿಯದ ಜನ ಮೂಕವಿಸ್ಮಿತರಾದರು. ಇನ್ನು ಕೆಲವರು ಅಕ್ಕಪಕ್ಕದಲ್ಲೇ ಗೂಸುಗೂಸು ಮಾತನಾಡಿಕೊಂಡರು. ಕುರ್ಚಿ ಮೇಲೆ ನಿಂತು ಯಾರೋ ವಿಐಪಿಗಳು ಬಂದರೆಂದು ಕುತೂಹಲಗೊಂಡರು.

ಕ್ಷಣಾರ್ಧದಲ್ಲೇ ಸೇರಿದ್ದ ಜನರ ನಡುವೆ ನಾಲ್ಕೈದು ಭದ್ರತಾ ವಾಹನಗಳು ಶರವೇಗದಲ್ಲಿ ಹಾದು ಹೋದವು. ಬಳಿಕ ಬಿಳಿ ಬಣ್ಣದ ಕಾರು ಬಾಗಿಲು ತೆರೆದರೆ ದೇಶದ ಪ್ರಧಾನಿ ನರೇಂದ್ರ ಮೋದಿ! ಗನ್ ಹಿಡಿದ ಭದ್ರತಾ ಸಿಬ್ಬಂದಿ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜನರತ್ತ ಕೈ ಬೀಸುತ್ತಲೇ ಮೋದಿ ವೇದಿಕೆ ಹತ್ತಿ ದೇವರ ಮೂರ್ತಿಗೆ ಪುಷ್ಪನಮನ ಸಲ್ಲಿಸಿದರು. ಆದರೆ, ಅಸಲಿಗೆ ಬಂದಿದ್ದ ಪ್ರಧಾನಿ ಮೋದಿಯಲ್ಲ. ಮೋದಿ ವೇಷಧಾರಿ ಹಿರಿಯಡ್ಕದ ಸದಾನಂದ ನಾಯಕ್.


ಇದು ಸ್ಥಳೀಯ ಯುವಕರ ಮನೋರಂಜನಾ ಕೃತ್ಯವೆಂದು ಅರಿತ ಜನ ಕೈ ಚಪ್ಪಳೆ ತಟ್ಟಿ ಸ್ವಾಗತಿಸಿದರು. ಗಣ್ಯರು, ಸಚಿವರಿಗೆ ನಿಯೋಜಿಸುವ ಭದ್ರತೆಯಲ್ಲಿ ಸದಾನಂದ ನಾಯಕ್ ಬಂದಿರುವ ದೃಶ್ಯ ನೋಡುಗರಿಗೆ ಮನೋರಂಜನೆ ನೀಡಿತ್ತು. ಕೆಲವರು ಮೊಬೈಲ್‍ಗಳಲ್ಲಿ ದೃಶ್ಯಾವಳಿಗಳನ್ನು ಸೆರೆ ಹಿಡಿದುಕೊಂಡರು. ವೇಷಧಾರಿ ಮೋದಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ