ಆ್ಯಪ್ನಗರ

ದೇಣಿಗೆ ಸಂಗ್ರಹವಲ್ಲ, ಜನರ ಭಾಗವಹಿಸುವಿಕೆ: ಅಮೃತ್‌ ಶೆಣೈ

ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಐಸಿಸಿ ಸದಸ್ಯ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಅಮೃತ್‌ ಶೆಣೈ ಪಾದಯಾತ್ರೆ ನಡೆಸಿ ಚುನಾವಣಾ ದೇಣಿಗೆ ಸಂಗ್ರಹಿಸುವ ಕಾಯಕಕ್ಕೆ ಗುರುವಾರ ಮುಂದಾಗಿದ್ದಾರೆ.

Vijaya Karnataka 29 Mar 2019, 5:00 am
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಐಸಿಸಿ ಸದಸ್ಯ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಅಮೃತ್‌ ಶೆಣೈ ಪಾದಯಾತ್ರೆ ನಡೆಸಿ ಚುನಾವಣಾ ದೇಣಿಗೆ ಸಂಗ್ರಹಿಸುವ ಕಾಯಕಕ್ಕೆ ಗುರುವಾರ ಮುಂದಾಗಿದ್ದಾರೆ.
Vijaya Karnataka Web denige


ಉಡುಪಿ ಜೋಡುಕಟ್ಟೆ ಸಮೀಪದ ಬಿಗ್‌ ಬಜಾರ್‌ ಮುಂಭಾಗ ಸಂಜೆ 3.30ಕ್ಕೆ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿ ದೇಣಿಗೆ ಸಂಗ್ರಹ ಆರಂಭಿಸಿದರು. ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸಾಂಕೇತಿಕವಾಗಿ ದೇಣಿಗೆ ನೀಡಿದರು.

ದೇಣಿಗೆ ಸಂಗ್ರಹ ಬಾಕ್ಸ್‌ಗೆ ಅಮೃತ್‌ ಶೆಣೈ ಅವರ ಭಾವಚಿತ್ರ ಅಂಟಿಸಿದ್ದು, ಕೆ.ಎಂ. ಮಾರ್ಗ, ಸಿಟಿ ಬಸ್‌ ನಿಲ್ದಾಣ ಸುತ್ತಲಿನ ಪರಿಸರ ಹಾಗೂ ರಿಕ್ಷಾ ನಿಲ್ದಾಣ, ಬಸ್‌ ನಿಲ್ದಾಣ, ಅಂಗಡಿ ಮುಂಗಟ್ಟು ಹಾಗೂ ಸಾರ್ವಜನಿಕರ ಬಳಿ ತೆರಳಿ ಹಣ ಸಂಗ್ರಹಿಸಲಾಯಿತು.

ಬಳಿಕ ಮಾತನಾಡಿದ ಅಮೃತ್‌ ಶೆಣೈ, ಇದು ದೇಣಿಗೆ ಸಂಗ್ರಹವಲ್ಲ. ಚುನಾವಣೆಯಲ್ಲಿ ಜನರ ಭಾಗವಹಿಸುವಿಕೆ. ನೀವು ಹಣ ಕೊಡಿ, ನಾನು ಗೆದ್ದು ಸಂಸದನಾದರೆ ನಿಮ್ಮೆಲ್ಲರ ಪ್ರಾಮಾಣಿಕ ಸೇವೆ ಮಾಡುತ್ತೇನೆ ಎನ್ನುವ ಹೊಸ ಪರಿಕಲ್ಪನೆಯೊಂದಿಗೆ ಚುನಾವಣೆ ಎದುರಿಸುತ್ತಿದ್ದೇನೆ. ನಾನು ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡಲ್ಲ. ಜನರ ಆಶೀರ್ವಾದದೊಂದಿಗೆ ಚುನಾವಣೆ ಎದುರಿಸುತ್ತೇನೆ ಎಂದರು.

ಬಿಜೆಪಿ ಹಾಲಿ ಸಂಸದೆ ಶೋಭಾ ಅವರಿಗೆ ಈ ಕ್ಷೇತ್ರದಲ್ಲಿ ವಿರೋಧವಿದೆ. ಜೆಡಿಎಸ್‌ಗೆ ಹೇಳಿಕೊಳ್ಳುವಷ್ಟು ಕಾರ್ಯಕರ್ತರಿಲ್ಲ. ಮೈತ್ರಿ ಧರ್ಮದಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿದೆ ಎನ್ನುವ ಸಂದೇಶ ಹೈಕಮಾಂಡ್‌ಗೆ ರವಾನೆಯಾಗಬೇಕಿದೆ. ಇದಕ್ಕಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ್ದೇನೆ ಎಂದರು.

ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ಸಾಮಾಜಿಕ ಸಾಮರಸ್ಯ, ಶಾಂತಿ, ನೆಮ್ಮದಿ ಕಾಪಾಡಿ ನೆರಳು ನೀಡುವ ಆಲದ ಮರದಂತಿರುವ ಜನಪ್ರತಿನಿಧಿಗಳು ಬೇಕೇ ಹೊರತು ಚುನಾವಣೆಯಲ್ಲಿ ಗೆದ್ದು ಕ್ಷೇತ್ರದ ಜನತೆಯನ್ನು ಮರೆತು ತಿರುಗುವ ಖರ್ಜೂರದ ಮರವಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಯನ್ನೇ ಆಯ್ಕೆ ಮಾಡಿ ಎಂದರು.

ಸಾಮಾಜಿಕ ಕಾರ್ಯಕರ್ತರಾದ ಜಯಶ್ರೀ ಭಟ್‌, ಯೋಗೀಶ್‌ ಶೇಟ್‌, ಯಜ್ಞೇಶ್‌ ಆಚಾರ್ಯ, ಕಿಶೋರ್‌ ಶೆಟ್ಟಿ, ಅನಿತಾ ಡಿಸೋಜ, ರಫೀಕ್‌ ಕಲ್ಯಾಣಪುರ, ರೋಹನ್‌ ವಾಜಾ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ