ಆ್ಯಪ್ನಗರ

ಉಡುಪಿ: ಭಾರತ್ ಬಂದ್‍ಗೆ ನೀರಸ ಪ್ರತಿಕ್ರಿಯೆ, ಮೋದಿ, ಅಂಬಾನಿ, ಅದಾನಿ, ಪ್ರತಿಕೃತಿ ದಹನ, ಜನಜೀವನ ಯಥಾಸ್ಥಿತಿ

ಸರಕಾರಿ ವ್ಯವಸ್ಥೆಯನ್ನು ಖಾಸಗೀಕರಣ ಮಾಡುವ ಬಿಜೆಪಿ ಈ ದೇಶದ ಕೃಷಿ ಪದ್ಧತಿಯನ್ನೇ ನಾಶ ಮಾಡಲು ಹೊರಟಿದೆ. ಭೂಮಿಯನ್ನು ಕಂಪನಿಗಳಿಗೆ ಒಪ್ಪಿಸಿ ಲಾಭ ಮಾಡುವ ಹುನ್ನಾರದಲ್ಲಿದೆ. ಬಡತನ, ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದ್ದು, ಇನ್ನೂ ಕೆಲವೇ ಸಮಯದಲ್ಲಿ ಹಸಿವಿನಿಂದ ಸಾಯುವ ಸಂಖ್ಯೆ ಹೆಚ್ಚಾಗಲಿದೆ

Vijaya Karnataka Web 8 Dec 2020, 7:16 pm
ಉಡುಪಿ: ನೂತನ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಮಂಗಳವಾರ ಕರೆ ಕೊಟ್ಟಿರುವ ಭಾರತ್ ಬಂದ್‍ಗೆ ಕಾಂಗ್ರೆಸ್, ಜೆಡಿಎಸ್, ಸಿಐಟಿಯು ಸಹಿತ ವಿವಿಧ ಸಂಘಟನೆಗಳು ಜಿಲ್ಲೆಯಲ್ಲಿ ಬೆಂಬಲ ಸೂಚಿಸಿದ್ದು, ಬಂದ್‍ಗೆ ಮಾತ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Vijaya Karnataka Web ಪ್ರತಿಕೃತಿ ದಹನ
ಪ್ರತಿಕೃತಿ ದಹನ


ಈ ಮಧ್ಯೆ ಅಜ್ಜರಕಾಡು ಹುತಾತ್ಮ ಯೋಧರ ಯುದ್ಧ ಸ್ಮಾರಕದ ಮುಂಭಾಗದ ವಿವಿಧ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಸಂಜೆ ವೇಳೆ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹಿಸಿ, ಕಾಯಿದೆ ಹಿಂಪಡೆಯುವಂತೆ ಒತ್ತಾಯಿಸಲಾಯಿತು.

ಮೋದಿ ಪ್ರತಿಕೃತಿಯೊಂದಿಗೆ ಎಡ ಹಾಗೂ ಬಲ ಭಾಗದಲ್ಲಿ ಅಂಬಾನಿ ಹಾಗೂ ಅದಾನಿ ಭಾವಚಿತ್ರವಿಟ್ಟು ದಹಿಸಲಾಯಿತು. ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು, ಕಾಲಿನಿಂದ ತುಳಿದು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಉಡುಪಿ, ಕುಂದಾಪುರ, ಬೈಂದೂರು ತಾಲೂಕು ಹೊರತು ಪಡಿಸಿ ಬೇರೆ ಯಾವ ತಾಲೂಕಿನಲ್ಲೂ ಈ ಬಗ್ಗೆ ಯಾವುದೇ ಪ್ರತಿಭಟನೆ ನಡೆದಿಲ್ಲ. ಪ್ರತಿಭಟನೆಯ ನಡುವೆಯೂ ಜಿಲ್ಲೆಯಲ್ಲಿ ಆಟೋ ರಿಕ್ಷಾ, ಕಾರು, ಬೈಕ್ ಸಹಿತ ಎಲ್ಲಾ ಖಾಸಗಿ ವಾಹನಗಳ ಓಡಾಟ ಮಾಡಿದ್ದವು. ಸಿಟಿ, ಸರ್ವೀಸ್, ಕೆಎಸ್‍ಆರ್‌ಟಿಸಿ ಬಸ್ ಸೇವೆಯೂ ಸಾರ್ವಜನಿಕರಿಗೆ ಲಭ್ಯವಿತ್ತು.

ಜಿಲ್ಲೆಯ ಎಲ್ಲಾ ಕಡೆಯಲ್ಲೂ ಅಂಗಡಿ-ಮುಂಗಟ್ಟುಗಳು ತೆರೆದುಕೊಂಡಿದ್ದು, ಜನ ಜೀವನ ಯಥಾಸ್ಥಿತಿಯಲ್ಲಿತ್ತು. ನಗರದ ಆಯಾಕಟ್ಟಿನ ಸ್ಥಳ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಪೊಲೀಸರು ನಿಗಾ ಇಟ್ಟಿದ್ದರು. ಬಲವಂತದ ಬಂದ್, ಅಹಿತಕರ ಘಟನೆ ನಡೆದಿರುವ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ.

ಕೇಂದ್ರದ ಬಿಜೆಪಿ ಬಹುರಾಷ್ಟ್ರ ಕಂಪನಿ ಪರ ಕಾಯಿದೆಗಳನ್ನು ರೂಪಿಸುತ್ತಿದ್ದು, ಈ ಸರಕಾರ ಕಾರ್ಮಿಕ ವಿರೋಧಿ, ರೈತ ವಿರೋಧಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ರೈತರ ಅಹವಾಲು ಕೇಳುವಷ್ಟು ಸಮಾಧಾನ ಸರಕಾರಕ್ಕಿಲ್ಲ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್ ಆರೋಪಿಸಿದ್ದಾರೆ.

ಭಾರತ್ ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಯೋಧರ ಯುದ್ಧ ಸ್ಮಾರಕದ ಮುಂಭಾಗ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸರಕಾರಿ ವ್ಯವಸ್ಥೆಯನ್ನು ಖಾಸಗೀಕರಣ ಮಾಡುವ ಬಿಜೆಪಿ ಈ ದೇಶದ ಕೃಷಿ ಪದ್ಧತಿಯನ್ನೇ ನಾಶ ಮಾಡಲು ಹೊರಟಿದೆ. ಭೂಮಿಯನ್ನು ಕಂಪನಿಗಳಿಗೆ ಒಪ್ಪಿಸಿ ಲಾಭ ಮಾಡುವ ಹುನ್ನಾರದಲ್ಲಿದೆ. ಬಡತನ, ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದ್ದು, ಇನ್ನೂ ಕೆಲವೇ ಸಮಯದಲ್ಲಿ ಹಸಿವಿನಿಂದ ಸಾಯುವ ಸಂಖ್ಯೆ ಹೆಚ್ಚಾಗಲಿದೆ ಎಂದು ಕಿಡಿಕಾರಿದರು.

ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ನಕಲಿ ದೇಶ ಪ್ರೇಮದ ವಿಷಬೀಜ ಬಿತ್ತಿದ ಮೋದಿ ಈ ದೇಶವನ್ನು ಮಾರಾಟ ಮಾಡುತ್ತಿದ್ದಾರೆ. ಈ ಕಾಯಿದೆ ರೈತರಿಗೆ ಅನುಕೂಲವಾಗಿದೆ ಎನ್ನುವ ಸರಕಾರ ಯಾವ ರೈತ ಸಂಘಟನೆಯೊಂದಿಗೆ ಈ ಬಗ್ಗೆ ಯಾಕೆ ಚರ್ಚಿಸಿಲ್ಲ. ಕೊರೊನಾ ನಡುವೆಯೂ ಈ ಕಾಯಿದೆಯನ್ನು ಜಾರಿ ಮಾಡುವ ತರಾತುರಿ ಸರಕಾರಕ್ಕೆ ಏನಿತ್ತು? ಸದನದಲ್ಲಿ ಚರ್ಚೆಗೆ ಅವಕಾಶ ಕೊಡದೇ ಸರ್ವಾಕಾರಿಯಂತೆ ವರ್ತಿಸುವ ಅಗತ್ಯವೇನೆಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ