ಆ್ಯಪ್ನಗರ

ಆತ್ಮ ಶ್ರಾದ್ಧ ಮಾಡಿಕೊಂಡ ಯತಿ, ಪೀಠಾಧಿಪತಿಗೆ ಸೂತಕವಿಲ್ಲ

ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ಸ್ವಯಂ ಆತ್ಮ ಶ್ರಾದ್ಧ ಮಾಡಿಕೊಳ್ಳುವ ಯತಿ, ಪೀಠಾಧಿಪತಿಗಳಿಗೆ ಪೂರ್ವಾಶ್ರಮ, ಮಠಗಳಲ್ಲಿ ಯಾರೇ ಸತ್ತರೂ ಸೂತಕವಿಲ್ಲ.

Vijaya Karnataka Web 30 Jul 2018, 10:39 am
ಉಡುಪಿ: ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ಸ್ವಯಂ ಆತ್ಮ ಶ್ರಾದ್ಧ ಮಾಡಿಕೊಳ್ಳುವ ಯತಿ, ಪೀಠಾಧಿಪತಿಗಳಿಗೆ ಪೂರ್ವಾಶ್ರಮ, ಮಠಗಳಲ್ಲಿ ಯಾರೇ ಸತ್ತರೂ ಸೂತಕವಿಲ್ಲ!
Vijaya Karnataka Web mutt


ಸನ್ಯಾಸ ದೀಕ್ಷೆ ಸ್ವೀಕರಿಸಿ ಯತಿ , ಮಠಾಧಿಪತಿಯಾದರೂ ತಾಯಿಯ ಬಾಂಧವ್ಯವನ್ನು ಮಾತ್ರ ಕಳೆದುಕೊಳ್ಳುವಂತಿಲ್ಲ. ತಾಯಿ ಇದ್ದಾಗ, ಸತ್ತಾಗ ನಮಸ್ಕರಿಸಬೇಕಾದ ಋುಣಾನುಬಂಧದಿಂದ ಮುಕ್ತಿಯಿಲ್ಲ.

ಆರಾಧನೆ ಮುಂದೂಡುವಂತಿಲ್ಲ


ಮಧ್ವಾಚಾರ್ಯರು ರುಕ್ಮಿಣಿ ಕರಾರ್ಚಿತ ಶ್ರೀಕೃಷ್ಣನನ್ನು 8 ಶತಮಾನಗಳ ಹಿಂದೆ ಉಡುಪಿಯಲ್ಲಿ ಸ್ಥಾಪಿಸಿದ್ದು, ಎರಡು ತಿಂಗಳ ಪರ್ಯಾಯ ಪೂಜೆ ನಿಟ್ಟಿನಲ್ಲಿ ಅಷ್ಟಮಠ, ಬಾಲ ಯತಿಗಳ ನಿಯೋಜನೆ ಮಾಡಿದ್ದರು. ಆದರೆ ಉಡುಪಿಯ ಅಷ್ಟಮಠಗಳಲ್ಲಿ ಕೀರ್ತಿಶೇಷರಾದವರ ಗುರು ಆರಾಧನೆ ಸಂಪ್ರದಾಯವನ್ನು 12 ಅಥವಾ 13ನೇ ದಿನಕ್ಕೆ ನಡೆಸದೆ ಮುಂದೂಡಿದ ಪರಂಪರೆಯಿಲ್ಲ.

ಉಡುಪಿಯ ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಜು.19ರಂದು ಕೀರ್ತಿಶೇಷರಾಗಿದ್ದು, ಹಿರಿಯಡ್ಕದ ಶೀರೂರು ಮೂಲ ಮಠದಲ್ಲಿ ಜು.31ರಂದು ನಡೆಯಬೇಕಿದ್ದ ಗುರು ಆರಾಧನೆಯ ಧಾರ್ಮಿಕ ಪ್ರಕ್ರಿಯೆಗೆ, ಸಂಶಯಾಸ್ಪದ ಸಾವಿನ ರಹಸ್ಯ ಬಯಲಿಗೆಳೆಯಲು ಪೊಲೀಸ್‌ ತನಿಖೆ ಅನಿವಾರ್ಯವಾಗಿದೆ.

ಶೀರೂರು ಶ್ರೀಪಾದರ ಸಂಶಯಾಸ್ಪದ ಸಾವಿನ ತನಿಖೆ ಇನ್ನೂ ಪೂರ್ಣವಾಗದ ಹಿನ್ನೆಲೆಯಲ್ಲಿ ಪೊಲೀಸರು ಹಿರಿಯಡ್ಕದ ಶೀರೂರು ಮಠವನ್ನು ಬಿಟ್ಟು ಕೊಟ್ಟ ಬಳಿಕವಷ್ಟೇ ಗುರು ಆರಾಧನೆ ನಡೆಸಲಾಗುವುದು ಎಂದು ದ್ವಂದ್ವ ಮಠದ ಸೋದೆ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಏನಿದು ಗುರು ಆರಾಧನೆ

ಹಿರಿಯಡ್ಕದ ಶೀರೂರು ಮೂಲ ಮಠದಲ್ಲಿ ಗುರು ಆರಾಧನೆ ಅಂಗವಾಗಿ ಪಟ್ಟಾಭಿ ರಾಮಚಂದ್ರ, ಪಟ್ಟದ ದೇವರು ವಿಠಲ, ಮುಖ್ಯಪ್ರಾಣನೆದುರು ಪ್ರಾರ್ಥನೆ ಸಲ್ಲಿಸಬೇಕು. ವಿರಜಾ ಹೋಮ, ಪವಮಾನ ಹೋಮ ಹಾಗೂ ದ್ವಾದಶ ಮೂರ್ತಿ ಆರಾಧನೆ ಬಳಿಕ ಸಂತರ್ಪಣೆಯಷ್ಟೇ ಧಾರ್ಮಿಕ ವಿಧಿ.

ಉತ್ತರಾಧಿಕಾರಿ ಮಾಡಬೇಕಿತ್ತು

ಯಾವುದೇ ಮಠದಲ್ಲಿ ಕೀರ್ತಿಶೇಷರಾದ ಯತಿ, ಗುರುಗಳ ಆರಾಧನೆಯನ್ನು ಶಿಷ್ಯ, ಇಲ್ಲಾ 12ದಿನಗಳೊಳಗೆ ಶಿಷ್ಯನನ್ನು ಸ್ವೀಕರಿಸಿ ಉತ್ತರಾಧಿಕಾರಿಯಿಂದ ಮಾಡಿಸಬೇಕು. ಆದರೆ ಶೀರೂರು ಮಠಕ್ಕೆ ಶಿಷ್ಯನಿಲ್ಲ, ದ್ವಂದ್ವ ಸೋದೆ ಮಠದಿಂದ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನಡೆದಿಲ್ಲ.

ಹೀಗಾಗಿ ಗುರು ಆರಾಧನೆಯನ್ನು ಶೀರೂರು ಮಠದ ಉತ್ತರಾಧಿಕಾರಿ ಅನುಪಸ್ಥಿತಿಯಲ್ಲಿ ಸೋದೆ ಶ್ರೀವಿಶ್ವವಲ್ಲಭತೀರ್ಥರೇ ನೆರವೇರಿಸಲಿದ್ದಾರೆ. ಯಾವುದಾದರೂ ಮಠದಲ್ಲಿ ಶಿಷ್ಯ ಕೀರ್ತಿಶೇಷರಾದರೆ ಗುರುಗಳು ಶಿಷ್ಯ ವರ್ಗ, ಪುರೋಹಿತರಿಂದ ಆರಾಧನೆ ಮಾಡಿಸಬೇಕು. ಕಾರಣ ಶಿಷ್ಯನಿಗೆ ಗುರುಗಳು ನಮಸ್ಕರಿಸುವ ಸಂಪ್ರದಾಯವಿಲ್ಲ.

ಸಂಸಾರಿಗಳು /ಲೌಕಿಕರಂತೆ ಯತಿ ಪೀಠಾಧಿಪತಿಗಳಿಗೆ ಸೂತಕದ ಹಂಗಿಲ್ಲ ಪಿತೃಗಳ ಪಿಂಡ ಪ್ರದಾನ ಆತ್ಮ‌ಶ್ರಾದ್ಧ ಮಾಡಿಯೇ ಸನ್ಯಾಸ ದೀಕ್ಷೆ ಪಡೆವ ಹಿನ್ನೆಲೆಯಲ್ಲಿ ಮರಣೋತ್ತರವಾದ ಉತ್ತರಕ್ರಿಯೆ ಮಾಸಿಕ‌ ವರ್ಷಾಂತಿಕ ಪ್ರಕ್ರಿಯೆ ಇಲ್ಲ. ಕೇವಲ 12 ಇಲ್ಲವೇ 13ನೇ ದಿನ ಹಾಗೂ ವಾರ್ಷಿಕ ಗುರು ಆರಾಧನೆಗೆ ಮಠಗಳು ಸೀಮಿತ.

- ಶ್ರೀವಿಶ್ವವಲ್ಲಭತೀರ್ಥರು , ಸೋದೆ ವಾದಿರಾಜ ಮಠ ಉಡುಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ