ಆ್ಯಪ್ನಗರ

ನಾಲ್ಕನೇ ಬಾರಿ ಸರ್ವಜ್ಞ ಪೀಠವೇರಿದ ಕೃಷ್ಣಾಪುರಶ್ರೀ; 250ನೇ ಪರ್ಯಾಯ ಅದಮಾರುಶ್ರೀಗಳಿಂದ ವಿಶ್ವಾರ್ಪಣ!

ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮೊದಲ ಬಾರಿ ಪರ್ಯಾಯ ಪೀಠವನ್ನೇರಿ ಕೋವಿಡ್ ಸಂಕಷ್ಟದ ನಡುವೆಯೂ ಮಾದರಿ, ಯಶಸ್ವಿ ಪರ್ಯಾಯವನ್ನು ಪೂರೈಸಿ ಮಧ್ವಾಚಾರ್ಯರಿಂದ ಬಳುವಳಿಯಾಗಿ ಬಂದ ಅಕ್ಷಯಪಾತ್ರೆ, ಸಟ್ಟುಗ, ಗರ್ಭಗುಡಿಯ ಕೀಲಿ ಕೈಯನ್ನು ಕೃಷ್ಣಾಪುರ ಶ್ರೀಗಳಿಗೆ ಹಸ್ತಾಂತರಿಸಿದ್ದಾರೆ. ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಬಂದು ದೇವಾಧಿದೇವತೆಗಳ ದರ್ಶನ ಪಡೆದ ಕೃಷ್ಣಾಪುರ ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕೂರಿಸಿ ತಮ್ಮ ಎರಡು ವರ್ಷಗಳ ಪರ್ಯಾಯವನ್ನು ನಿಜಾರ್ಥದಲ್ಲಿ ವಿಶ್ವಾರ್ಪಣ ಮಾಡಿದ್ದಾರೆ. ಜಗತ್ತು ಕೋವಿಡ್ ಸಂಕಷ್ಟದಿಂದ ದೂರವಾಗಲೆಂದು ಅಷ್ಟಮಠದ ಯತಿಗಳು ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸಿದ್ದಾರೆ.

Vijaya Karnataka Web 18 Jan 2022, 11:43 am
ಉಡುಪಿ: ಶ್ರೀಕೃಷ್ಣಪೂಜೆಯ ದ್ವೈವಾರ್ಷಿಕ ಪರ್ಯಾಯವು ಐತಿಹಾಸಿಕ ಐದು ಶತಮಾನಗಳ ಪರಂಪರೆಯ ಗಡಿ ದಾಟಿದ್ದು 251ನೇ ಪರ್ಯಾಯ ಸರದಿಯಲ್ಲಿ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ನಾಲ್ಕನೇ ಬಾರಿ ಸರ್ವಜ್ಞ ಪೀಠವೇರಿ ಮೊದಲ ಪೂಜೆಯನ್ನು ಜಗತ್ತಿನ ಜನರ ಸನ್ಮಂಗಲಕ್ಕಾಗಿ ಮಂಗಳವಾರ ಅರ್ಪಿಸಿದ್ದಾರೆ.
Vijaya Karnataka Web ಉಡುಪಿ ಪರ್ಯಾಯ


ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮೊದಲ ಬಾರಿ ಪರ್ಯಾಯ ಪೀಠವನ್ನೇರಿ ಕೋವಿಡ್ ಸಂಕಷ್ಟದ ನಡುವೆಯೂ ಮಾದರಿ, ಯಶಸ್ವಿ ಪರ್ಯಾಯವನ್ನು ಪೂರೈಸಿ ಮಧ್ವಾಚಾರ್ಯರಿಂದ ಬಳುವಳಿಯಾಗಿ ಬಂದ ಅಕ್ಷಯಪಾತ್ರೆ, ಸಟ್ಟುಗ, ಗರ್ಭಗುಡಿಯ ಕೀಲಿ ಕೈಯನ್ನು ಕೃಷ್ಣಾಪುರ ಶ್ರೀಗಳಿಗೆ ಹಸ್ತಾಂತರಿಸಿದ್ದಾರೆ.

ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಬಂದು ದೇವಾಧಿದೇವತೆಗಳ ದರ್ಶನ ಪಡೆದ ಕೃಷ್ಣಾಪುರ ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕೂರಿಸಿ ತಮ್ಮ ಎರಡು ವರ್ಷಗಳ ಪರ್ಯಾಯವನ್ನು ನಿಜಾರ್ಥದಲ್ಲಿ ವಿಶ್ವಾರ್ಪಣ ಮಾಡಿದ್ದಾರೆ. ಜಗತ್ತು ಕೋವಿಡ್ ಸಂಕಷ್ಟದಿಂದ ದೂರವಾಗಲೆಂದು ಅಷ್ಟಮಠದ ಯತಿಗಳು ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸಿದ್ದಾರೆ.

ಏನೇನು ವಿಧಿ ವಿಧಾನ?
ಕಾಪು ಬಳಿಯ ದಂಡತೀರ್ಥದಲ್ಲಿ ಶ್ರೀಕೃಷ್ಣಾಪುರ ಶ್ರೀಪಾದರು ಪವಿತ್ರ ಸ್ನಾನ ಪೂರೈಸಿ ಜೋಡುಕಟ್ಟೆಗೆ ಆಗಮಿಸಿ, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸರಳ, ಸಾಂಪ್ರದಾಯಿಕ ಮೆರವಣಿಗೆಯಲ್ಲಿ ವಾಹನದಲ್ಲಿಟ್ಟ ಪಲ್ಲಕ್ಕಿಯಲ್ಲಿ ಕೂತು ಸಪ್ತ ಮಠಾಧೀಶರು ಸಾಗಿ ಬಂದರು. ಏಳು ಸ್ತಬ್ಧಚಿತ್ರಗಳಷ್ಟೇ ಮೆರವಣಿಗೆಯಲ್ಲಿದ್ದವು. ಯಕ್ಷಗಾನ ವೇಷದ ಹೊರತು ಸಾಂಸ್ಕೃತಿಕ ಕಲಾ ತಂಡಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಅವಕಾಶವಿರಲಿಲ್ಲ.
ಉಡುಪಿಯ ರಥಬೀದಿಗೆ ಬಂದಿಳಿದ ಶ್ರೀಪಾದರು ಶ್ವೇತಹಾಸಿನಲ್ಲಿ ನಡೆದು ಬಂದು ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದೇವರ ದರ್ಶನ, ಶ್ರೀಚಂದ್ರಮೌಳೀಶ್ವರ ದೇವರ ದರ್ಶನ, ಅನಂತೇಶ್ವರ ಮತ್ತು ಶ್ರೀಮಧ್ವಾಚಾರ್ಯ ಸನ್ನಿಧಿ ದರ್ಶನ ಪಡೆದು ಶ್ರೀಕೃಷ್ಣಮಠ ಪ್ರವೇಶಿಸಿ ದೇವರ ದರ್ಶನ ಪಡೆದರು.

ಚಂದ್ರಶಾಲೆಯಲ್ಲಿ ಮಾಲಿಕೆ ಮಂಗಳಾರತಿ ಬಳಿಕ ಶ್ರೀಮಧ್ವಾಚಾರ್ಯರ ಪ್ರತಿಮೆ ಎದುರು ಅಕ್ಷಯಪಾತ್ರೆ, ಬೆಳ್ಳಿ ಸಟ್ಟುಗವನ್ನು ಅದಮಾರು ಶ್ರೀಈಶಪ್ರಿಯರು ಹಸ್ತಾಂತರಿಸಿ ಕೃಷ್ಣಾಪುರ ಶ್ರೀಗಳನ್ನು ಕೈಹಿಡಿದು ಸರ್ವಜ್ಞ ಪೀಠಾರೋಹಣ ಮಾಡಿಸುವ ಮೂಲಕ ಶ್ರೀಕೃಷ್ಣ ಪೂಜೆಯ ಅಧಿಕಾರ ತ್ಯಾಗ, ಸ್ವೀಕಾರದ ಪ್ರಕ್ರಿಯೆ ಶ್ರದ್ಧಾ, ಭಕ್ತಿಯಿಂದ ನೆರವೇರಿತು.

ಬಡಗುಮಾಳಿಗೆಯ ಅರಳು ಗದ್ದುಗೆಯಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಅಷ್ಟಮಠದ ಯತಿಗಳಿಗೆ ಗಂಧಾದ್ಯುಪಚಾರ, ಪಟ್ಟ ಕಾಣಿಕೆ, ಮಾಲಿಕೆ ಮಂಗಳಾರತಿ ನೆರವೇರಿತು. ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್ ನಲ್ಲಿ ಯತಿಗಳು ಅನುಗ್ರಹ ಸಂದೇಶ ನೀಡಿದರು. ಗಣ್ಯರು ಪಾಲ್ಗೊಂಡಿದ್ದರು.

ಶ್ರೀವಾದಿರಾಜಯ ವಾಙ್ಮಯನಿಧಿ ಗ್ರಂಥ ರತ್ನ ಬಿಡುಗಡೆ, ವಿದ್ವಾನ್ ಕೆ. ಹರಿದಾಸ ಉಪಾಧ್ಯಾಯ, ನೇರಂಬಳ್ಳಿ ರಾಘವೇಂದ್ರ ರಾವ್, ಕೀರ್ತಿಶೇಷ ಪಿ. ವ್ಯಾಸಾಚಾರ್ಯ ಪರವಾಗಿ ಪಿ. ವೃಜನಾಥ ಆಚಾರ್ಯರಿಗೆ ಪರ್ಯಾಯ ದರ್ಬಾರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಸ್ಥಾನ ವಿದ್ವಾಂಸರನ್ನು ಘೋಷಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ