ಆ್ಯಪ್ನಗರ

ಯತಿ ಧರ್ಮ ಪಾಲಿಸದ ಶೀರೂರು ಶ್ರೀ: ಪೇಜಾವರಶ್ರೀ

ಸನ್ಯಾಸ ಧರ್ಮಕ್ಕೆ ವಿರುದ್ಧವಾದ ಪಾನ ಪ್ರವೃತ್ತಿ, ಸ್ತ್ರೀ ಆಸಕ್ತಿ ಜತೆಗೆ ಪುಂಡಾಟಿಕೆ ಸರ್ವಥಾ ಸಮರ್ಥನೀಯವಲ್ಲ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.

Vijaya Karnataka Web 20 Jul 2018, 8:44 pm
ಉಡುಪಿ: ಸನ್ಯಾಸ ಧರ್ಮಕ್ಕೆ ವಿರುದ್ಧವಾದ ಪಾನ ಪ್ರವೃತ್ತಿ, ಸ್ತ್ರೀ ಆಸಕ್ತಿ ಜತೆಗೆ ಪುಂಡಾಟಿಕೆ ಸರ್ವಥಾ ಸಮರ್ಥನೀಯವಲ್ಲ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
Vijaya Karnataka Web Pejawar


ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯತಿ ಧರ್ಮ ಪಾಲಿಸದ ಶೀರೂರು ಶ್ರೀಲಕ್ಷ್ಮೀವರತೀರ್ಥರಿಗೆ ನಮ್ಮ ಐದನೇ ಪರ್ಯಾಯ ಅವಯಲ್ಲಿ ಒಮ್ಮೆಯೂ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿರಲಿಲ್ಲ. ಹೀಗಾಗಿ ನಮ್ಮ ಮೇಲೆ ಅವರಿಗೆ ಸಿಟ್ಟಿತ್ತು ಎಂದರು.

ಧರ್ಮ, ತತ್ವದ ನೆಲೆಯಲ್ಲಿ ಆತ್ಮ ಸಾಕ್ಷಿಗೆ ವಿರುದ್ಧವಾಗಿ ಶ್ರೀಕೃಷ್ಣ ದೇವರಿಗೆ ಪೂಜೆ ಸಲ್ಲಿಸಬಾರದೆನ್ನುವ ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೆ, ನನಗೆ ಶೀರೂರುಶ್ರೀಗಳ ಮೇಲೆ ದ್ವೇಷವಿರಲಿಲ್ಲ, ವಿಶೇಷ ಪ್ರೀತಿಯಿತ್ತು, ಕಷ್ಟಕಾಲದಲ್ಲಿ ನೆರವಿಗೆ ಧಾವಿಸಿದ್ದೇನೆ. ಶೀರೂರು ಶ್ರೀಗಳಿಗೆ ವಿಷ ಪ್ರಾಶನವಾಗಿದೆಯೋ, ಆಹಾರ ದೋಷವೋ, ಒಟ್ಟಿಗಿದ್ದವರೇ ಕಾರಣರೋ, ಕಾಯಿಲೆಯಿಂದಾಗಿ ಕಿಡ್ನಿ ಲಿವರ್ ಹಾಳಾಯಿತೇ? ಸಹವರ್ತಿ ಮಹಿಳೆಯರ ಕಚ್ಚಾಟ ಸಾವಿಗೆ ಕಾರಣವಾಯಿತೇ, ಸ್ವಯಂ ವಿಷ ಸೇವನೆ ಮಾಡಿಕೊಂಡರೇ ಎನ್ನುವ ಸಂಶಯವಿದೆ.

ಶೀರೂರು ಶ್ರೀಗಳ ಸಹೋದರ ದೂರವಾಣಿ ಕರೆ ಮಾಡಿ, ಕಲಾಯಿ ಹಾಕದ ಪಾತ್ರೆಯಲ್ಲಿ ಆಹಾರ ತಿಂದಿದ್ದರಿಂದ ಅನಾರೋಗ್ಯ ತಲೆದೋರಿದ್ದು ನಾಳೆ ಸರಿ ಹೋಗಬಹುದೆಂದು ಹೇಳಿದ್ದರು, ಆದರೆ ಮರುದಿನ ವಿಷ ಪ್ರಾಶನ ಶಂಕೆ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೊರಗಿನವರು, ಅಷ್ಟಮಠದವರು ಖಂಡಿತವಾಗಿಯೂ ಶೀರೂರು ಶ್ರೀಗಳ ಸಾವಿನ ಹಿಂದಿಲ್ಲ, ಇದು ಕೊಲೆಯೂ ಅಲ್ಲ. ಶ್ರೀಗಳು ಎಲ್ಲ ಜಾತಿಯ ಜನರ ಜತೆ ಬೆರೆವ, ನೆರವು ನೀಡುವ ಶೀರೂರು ಶ್ರೀಗಳ ಗುಣವನ್ನು ಮೆಚ್ಚುತ್ತೇವೆ ಎಂದು ಪೇಜಾವರ ಶ್ರೀಪಾದರು ಹೇಳಿದರು.

ತಾವು ಮಾಡಿದ್ದು ತಪ್ಪೆಂದು ಶೀರೂರುಶ್ರೀ ಒಪ್ಪಿಕೊಂಡಿದ್ದರು. ಸರಿಪಡಿಸಲು ಯತ್ನಿಸಿದ್ದರೂ ತಪ್ಪು ಮುಂದುವರಿಸಿದ್ದರು. ವಿಶ್ವ ವಿಜಯರ ಜತೆಗಿನ ಆಡಿಯೋ ಮಾತುಕತೆಯಲ್ಲಿ ವೈಯಕ್ತಿಕ ವಿಚಾರ ಒಪ್ಪಿಕೊಂಡಿದ್ದು ಪ್ರಕರಣಕ್ಕೆ ಸಂಬಂಸಿ ದಾಖಲೆ ಕೋರ್ಟಿಗೂ ಹಾಜರುಪಡಿಸಲಾಗಿದೆ. ಖಾಸಗಿ ಚಾನೆಲ್ ವೀಡಿಯೋದಲ್ಲೂ ಇದನ್ನೇ ಹೇಳಿದ್ದಾರೆ. ಹೀಗಾಗಿ ತಮ್ಮ ಅನುಪಸ್ಥಿತಿಯಲ್ಲಿ ಯತಿಗಳು ಸಭೆ ನಡೆಸಿ ಶೀರೂರುಶ್ರೀಗಳನ್ನು ಪೂಜೆಗೆ ಕರೆಯದಿರಲು ತೀರ್ಮಾನಿಸಿ ತಿಳಿಸಿದ್ದರು, ಇದಕ್ಕೆ ಒಪ್ಪಿದ್ದೆ. ಬಳಿಕ ಶಿಷ್ಯನನ್ನು ಸ್ವೀಕರಿಸಿದರೆ ಪಟ್ಟದ ದೇವರನ್ನು ನೀಡುವ ಷರತ್ತು ವಿಸಲಾಗಿದೆ.

ಯತಿ ಧರ್ಮ ಪಾಲಿಸದ ಯತಿಯನ್ನು ಶೃಂಗೇರಿ ಮಠ ವ್ಯಾಪ್ತಿಯ ಎಂಟು ಯತಿಗಳ ಗುಂಪಿನಿಂದ ಹೊರಗಿಡಲಾಗಿದೆ. ಮಠಗಳಲ್ಲಿ ಕ್ರಾಂತಿಯಾಗಬೇಕು. ಧರ್ಮ, ನೈತಿಕ ಪರಂಪರೆ ಉಳಿಯಬೇಕೆನ್ನುವ ಕಳಕಳಿ ಯುವ ಯತಿಗಳಲ್ಲಿದೆ. ಎಂಟು ಮಠಾಪತಿಗಳು ಒಪ್ಪಿದರಷ್ಟೇ ಲಿಖಿತ ಸಂವಿಧಾನ ಜಾರಿ ಸಾಧ್ಯ. ಆದರೆ ತದ್ವಿರುದ್ಧ ನಿಲುವಿನ ಹಿನ್ನೆಲೆಯಲ್ಲಿ ಸರ್ವಾನುಮತ ಕಷ್ಟ. ಕರಡು ಪ್ರತಿಯನ್ನು ಪರಿತ್ಯಕ್ತ ಯತಿ ಶ್ರೀವಿಶ್ವವಿಜಯರು ಕಳುಹಿಸಿದ್ದು ಚರ್ಚೆಯಾಗಬೇಕು ಎಂದರು.

ಹೊಡೆದು ಬಡಿದು ಮಾಡಬಾರದು:
ಮಾಧ್ಯಮಗಳ ಅಪೂರ್ಣ ವರದಿಯಿಂದ ಅಪಾರ್ಥಕ್ಕೆ ಎಡೆಯಾಗಿದೆ. ಶೀರೂರುಶ್ರೀಗಳ ಅಗಲಿಕೆಯಿಂದ ದುಃಖವಾಗಿದೆ, ಶ್ರೇಯಸ್ಸು ಹಾರೈಸುತ್ತೇನೆ ಎಂದಿದ್ದನ್ನು ಪ್ರಕಟಿಸಿಲ್ಲ ಎಂದು ಮುನಿಸು ತೋರಿದ ಪೇಜಾವರ ಶ್ರೀಪಾದರು, ಪೊಲೀಸರು ಪ್ರಕರಣದ ಮುಕ್ತ ತನಿಖೆ ನಡೆಸಲಿ, ಪೊಲೀಸ್ ತನಿಖೆಗೆ ಸಿದ್ಧ, ಆದರೆ ಹೊಡೆದು ಬಡಿದು ಮಾಡಬಾರದಷ್ಟೆ ಎಂದು ನಸುನಗು ಬೀರಿದರು.

ನನ್ನ ಮೇಲೂ ಆರೋಪ ಬಂದಿತ್ತು: ಯಾರೋ ಒಬ್ಬರು ನಮಗೆ ಮದುವೆಯಾಗಿದೆ, ಮಕ್ಕಳಿದ್ದಾರೆ, ಡಿ. 31ರೊಳಗೆ ಪೀಠ ತ್ಯಜಿಸದಿದ್ದರೆ ಮಗನ ಹೆಸರು ಹೇಳುತ್ತೇನೆ, 10,000 ಕರಪತ್ರ ಮುದ್ರಿಸಿ ಹಂಚುತ್ತೇನೆಂದು ಪತ್ರ ಬರೆದಿದ್ದು ಋಜುವಾತುಪಡಿಸಿಲ್ಲ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದರು. ಯತಿಗಳು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ