ಆ್ಯಪ್ನಗರ

‘ಪೇಜಾವರ ಶ್ರೀಗಳ ಮುಖದಲ್ಲಿ ಎಲ್ಲಾ ಧರ್ಮಗಳನ್ನು ಕಂಡಿದ್ದೇವೆ’ - ಕಾರು ಚಾಲಕ ಆರೀಫ್ ಮನದ ಮಾತು

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ವಿಧಿವಶರಾಗಿದ್ದಾರೆ. ತಮ್ಮ ನೇರ ನಡೆ ನುಡಿಗಳಿಂದ ಪ್ರಸಿದ್ಧರಾದ ಶ್ರೀಗಳ ಕಾರು ಚಾಲಕರಾಗಿದ್ದವರು ಮುಸ್ಲಿಂ ವ್ಯಕ್ತಿ. ಹೌದು ಕಳೆದ ಮೂರು ವರ್ಷಗಳಿಂದ ಶ್ರೀಗಳ ಕಾರಿನ ಸಾರಥಿಯಾಗಿದ್ದ ಆರೀಫ್ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದು ಹೀಗೆ.

ಇರ್ಷಾದ್ ಉಪ್ಪಿನಂಗಡಿ | Vijaya Karnataka Web 29 Dec 2019, 5:29 pm
ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ವಿಧಿವಶರಾಗಿದ್ದಾರೆ. ಐದು ಬಾರಿ ಪರ್ಯಾಯ ಪೀಠವೇರಿದ ಶ್ರೀಗಳು ಅಯೋಧ್ಯೆ ರಾಮಮಂದಿರ ಚಳುವಳಿಯಲ್ಲಿ ಮುಂದಾಳತ್ವವನ್ನು ವಹಿಸಿದರು. ಹಿಂದುತ್ವದ ಪ್ರಬಲ ಪ್ರತಿಪಾದಕರು ಆಗಿದ್ದ ಪೇಜಾವರ ಶ್ರೀಗಳ ಕಾರು ಚಾಲಕರಾಗಿದ್ದವರು ಓರ್ವ ಮುಸ್ಲಿಮ್ ವ್ಯಕ್ತಿ. ಹೌದು, ಅವರ ಹೆಸರು ಮುಹಮ್ಮದ್ ಆರೀಫ್.
Vijaya Karnataka Web pejawar swamiji death his muslim car driver mohammad arif reaction
‘ಪೇಜಾವರ ಶ್ರೀಗಳ ಮುಖದಲ್ಲಿ ಎಲ್ಲಾ ಧರ್ಮಗಳನ್ನು ಕಂಡಿದ್ದೇವೆ’ - ಕಾರು ಚಾಲಕ ಆರೀಫ್ ಮನದ ಮಾತು


ಉಡುಪಿ ಜಿಲ್ಲೆಯ ನಿವಾಸಿ ಆರೀಫ್ ಅಂದರೆ ಪೇಜಾವರ ಸ್ವಾಮೀಜಿಗಳಿಗೆ ಅಚ್ಚುಮೆಚ್ಚು. ದೂರ ಪ್ರಯಾಣದ ಸಂದರ್ಭದಲ್ಲಿ ಪೇಜಾವರ ಸ್ವಾಮೀಜಿಯ ವಾಹನಕ್ಕೆ ಸಾರಥಿಯಾಗಿ ಕೆಲಸ ಮಾಡಿದ ಆರೀಫ್ ಅವರಿಗೂ ಪೇಜಾವರ ಸ್ವಾಮೀಜಿ ಅಂದರೆ ಪ್ರೀತಿ ಹಾಗೂ ಅಪಾರ ಗೌರವ. ಶ್ರೀಗಳ ಜನ್ಮದಿನವನ್ನು ಪ್ರತಿ ವರ್ಷ ರಕ್ತದಾನ ಶಿಬಿರಗಳನ್ನು ಮಾಡುವ ಮೂಲಕ ಆಚರಿಸುವ ಆರೀಫ್ ಹಾಗೂ ಸಂಗಡಿಗರಿಗೆ ಸ್ವಾಮೀಜಿಯವರ ನಿಧನ ಅಪಾರ ನೋವು ತಂದಿದೆ. ವಿಜಯ ಕರ್ನಾಟಕದ ಜೊತೆ ತಮ್ಮ ಮನದ ಮಾತನ್ನು ಆರೀಫ್ ಹಂಚಿಕೊಂಡಿದ್ದು ಹೀಗೆ.

ಉಡುಪಿ ಜಿಲ್ಲೆಯ ಮುಸ್ಲಿಂ ಕುಟುಂಬದ ವ್ಯಕ್ತಿ ಮುಹಮ್ಮದ್ ಆರೀಫ್‌ಗೆ ಪೇಜಾವರ ಸ್ವಾಮೀಜಿಯ ಪರಿಚಯವಾಗಿದ್ದು ಅವರ ಕುಟುಂಬದ ಮೂಲಕ. ಆರೀಫ್ ಅವರ ಇಬ್ಬರು ಸಹೋದರರಾದ ಮುಹಮ್ಮದ್ ಅಕೀಲ್ ಹಾಗೂ ಮುಹಮ್ಮದ್ ಮನ್ಸೂರು ಅವರು ಪೇಜಾವರ ಸ್ವಾಮೀಜಿಯ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇದಾಗ ಬಳಿಕ ಕಳೆದ ಮೂರು ವರ್ಷಗಳಿಂದ ಮುಹಮ್ಮದ್ ಆರೀಫ್ ಅವರು ಸ್ವಾಮೀಜಿಯ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪೇಜಾವರ ಶ್ರೀಗಳು ದೂರ ಪ್ರಯಾಣ ಮಾಡುವ ಸಂದರ್ಭದಲ್ಲಿ ಆರೀಫ್ ಅವರು ಸಾರಥಿಯಾಗಿ ಹೋಗುತ್ತಿದ್ದರು.


ಮಗುವಿನ ಮನದ ಅನನ್ಯ ಕ್ರಾಂತಿಕಾರಿ ಸಂತ, ವಾಮನ-ತ್ರಿವಿಕ್ರಮ ಕೀರ್ತಿಯ ಪೇಜಾವರ ಶ್ರೀ ಸಂದರ್ಶನ

ಆರೀಫ್ ಕೇವಲ ಪೇಜಾವರ ಸ್ವಾಮೀಜಿ ಕಾರು ಚಾಲಕ ಮಾತ್ರವಲ್ಲ ಅವರ ಅಭಿಮಾನಿಯೂ ಹೌದು. ಶ್ರೀಗಳ ಪ್ರತಿ ಜನ್ಮ ದಿನದಂದು ಆರೀಫ್ ಹಾಗೂ ಅವರ ತಂಡ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದರು. ಪೇಜಾವರ ಸ್ವಾಮೀಜಿ ಮುಸ್ಲಿಂ ಅಭಿಮಾನಿಗಳ ಬಳಗ ಹಾಗೂ ಶ್ರೀ ಪೇಜಾವರ ಸ್ವಾಮೀಜಿ ಬ್ಲಡ್ ಟೀಂ ಎಂಬ ಸಂಘಟನೆಯೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದರು. ರಾಜ್ಯಾದ್ಯಂತ 1740 ಘಟಕಗಳನ್ನು ಇವರ ಸಂಘಟನೆ ಹೊಂದಿದ್ದು ಬಹುತೇಕ ಮುಸ್ಲಿಮ್ ಸದಸ್ಯರನ್ನು ಹೊಂದಿದೆ. ಅಗತ್ಯ ಬಿದ್ದವರಿಗೆ ರಕ್ತದಾನ ಮಾಡುವುದು ಇವರ ಸಂಘಟನೆಯ ಉದ್ದೇಶವಾಗಿದೆ.

ಗಾಂಧಿಯಿಂದ ಪ್ರಭಾವಿತ, ಎಮರ್ಜೆನ್ಸಿ ವಿರುದ್ಧ ಇಂದಿರಾಗೆ ಪತ್ರ & ಶ್ರೀಗಳು ಹೇಳಿದ ಒಂಟೆ ಕತೆ

ಶ್ರೀಗಳ ಪರ್ಯಾಯ ಸಂದರ್ಭದಲ್ಲಿ ಆರೀಫ್ ಹಾಗೂ ಅವರ ತಂಡ ಮಠದಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಸ್ವಾಮೀಜಿಯವರು 2017 ರಲ್ಲಿ ಮಠದ ಆವರಣದಲ್ಲೇ ಮುಸ್ಲಿಮರಿಗಾಗಿ ಇಫ್ತಾರ್ ಕೂಟವನ್ನು ಹಮ್ಮಿಕೊಂಡಿದ್ದರು. ಆದರೆ ಹಿಂದೂಪರ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಹೀಗಿದ್ದರೂ ಸ್ವಾಮೀಜಿ ಇದನ್ನು ದಿಟ್ಟವಾಗಿ ಎದುರಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಎಂದು ನೆನಪಿಸಿಕೊಳ್ಳುತ್ತಾರೆ ಮುಹಮ್ಮದ್ ಆರೀಫ್.

ಮಗುವಿನ ಮನದ ಅನನ್ಯ ಕ್ರಾಂತಿಕಾರಿ ಸಂತ, ವಾಮನ-ತ್ರಿವಿಕ್ರಮ ಕೀರ್ತಿಯ ಪೇಜಾವರ ಶ್ರೀ ಸಂದರ್ಶನ

“ಮುಸ್ಲಿಂ ಸಮುದಾಯದ ಹಲವರ ಜೊತೆಗೆ ಶ್ರೀಗಳಿಗೆ ಉತ್ತಮ ಸಂಬಂಧವಿತ್ತು. ಸದಾ ಸೌಹಾರ್ದತೆಗಾಗಿ ಸ್ವಾಮೀಜಿ ಪ್ರಯತ್ನ ಪಡುತ್ತಿದ್ದರು. ಮುಸ್ಲಿಮ್ ಸಮುದಾಯದ ಜನರಿಗೆ ತೊಂದರೆಯಾದರೆ ಆರ್ಥಿಕ ಸಹಾಯ ಹಾಗೂ ಮತ್ತಿತರ ರೀತಿಯ ಸಹಕಾರವನ್ನು ನೀಡುತ್ತಿದ್ದರು. ಈ ಬಾರಿಯ ಶ್ರೀಗಳ ಜನ್ಮದಿನವನ್ನು ಆಚರಿಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಶ್ರೀಗಳು ಬರುವುದಾಗಿ ಒಪ್ಪಿಕೊಂಡಿದ್ದರು. ಆದರೆ ಇದೀಗ ನಮ್ಮೆಲ್ಲರನ್ನು ಪ್ರೀತಿಸುತ್ತಿದ್ದ ಸ್ವಾಮೀಜಿಯವರನ್ನು ನಾವು ಇಂದು ಕಳೆದುಕೊಂಡಿದ್ದೇವೆ” ಎನ್ನುತ್ತಾರೆ ಮುಹಮ್ಮದ್ ಆರೀಫ್.

ಉಸಿರಾಟದ ಸಮಸ್ಯೆಯಿಂದ ಕಳೆದ ಒಂಬತ್ತು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭಾನುವಾರ ವಿಧಿವಶರಾಗಿದ್ದಾರೆ. ಶ್ರೀಗಳಿಗೆ 88 ವರ್ಷ ವಯಸ್ಸಾಗಿತ್ತು. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕೊನೆಯುಸಿರೆಳೆದ ಶ್ರೀಗಳ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದ್ದು ನ್ಯಾಷನಲ್ ಕಾಲೇಜಿನಲ್ಲಿ ಅಂತಿಮ ದರ್ಶನದ ಬಳಿಕ ವಿದ್ಯಾಪೀಠದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ