ಆ್ಯಪ್ನಗರ

ಸಮ್ಮಿಶ್ರ ಸರಕಾರ ಉರುಳೋದನ್ನು ರಾಜ್ಯದ ಜನ ಕಾಯುತ್ತಿದ್ದಾರೆ: ಕೋಟ ಶ್ರೀನಿವಾಸ್ ಪೂಜಾರಿ

ಪ್ರತಿಯೊಬ್ಬ ಶಾಸಕರು 5 ವರ್ಷಗಳ ಅವಧಿಗೆ ಜನರಿಂದ ಆಯ್ಕೆಗೊಂಡಿರುತ್ತಾರೆ. ಚುನಾವಣೆ ಮುಗಿದ 1 ವರ್ಷ ಆಗಿದ್ದು, ಇನ್ನು 4 ವರ್ಷ ಬಾಕಿ ಇದೆ. ಯಾವ ಶಾಸಕರಲ್ಲೂ ಚುನಾವಣೆಯ ಮನಸ್ಥಿತಿ ಇಲ್ಲ. ಆದರೆ ದೇವೇಗೌಡರ ಮನೋಸ್ಥಿತಿ ಏನಿದೆಯೋ ಗೊತ್ತಿಲ್ಲ.

Vijaya Karnataka Web 21 Jun 2019, 4:37 pm
ಉಡುಪಿ: ಅಭಿವೃದ್ಧಿ ಕಾರ್ಯ ಕುಂಠಿತ, ಆಡಳಿತ ಯಂತ್ರ ನಿಷ್ಕ್ರೀಯವಾಗಿ ಶವದಂತಿರುವ ರಾಜ್ಯದ ಸಮ್ಮಿಶ್ರ ಸರಕಾರ ಉರುಳೋದನ್ನು ರಾಜ್ಯದ ಜನತೆ ಕಾಯುತ್ತಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ ಸರಕಾರದ ಪತನಕ್ಕೆ ಪುಷ್ಠಿ ಕೊಟ್ಟಿದೆ ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
Vijaya Karnataka Web ಕೋಟ ಶ್ರೀನಿವಾಸ್‌ ಪೂಜಾರಿ
ಕೋಟ ಶ್ರೀನಿವಾಸ್‌ ಪೂಜಾರಿ


ಅವರು ಜಿಲ್ಲಾ ಬಿಜೆಪಿ ವತಿಯಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಕಿದಿಯೂರು ಹೋಟೆಲ್‍ನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಮಾಜಿ ಪ್ರಧಾನಿ ದೇವೇಗೌಡರು ಮಧ್ಯಂತರ ಚುನಾವಣೆ ಖಚಿತ ಎನ್ನುತ್ತಿದ್ದಾರೆ. ವಿಶ್ವನಾಥ್ ಕೂಡಾ ಭಿನ್ನಾಭಿಪ್ರಾಯ ಹೊರ ಹಾಕಿದ್ದಾರೆ. ಸರಕಾರ ಆಡಳಿತ ನಡೆಸುವ ಪರಿಸ್ಥಿತಿಯಲ್ಲೇ ಇಲ್ಲ. ರಾಜ್ಯದ ರೈತರ ಸಮಸ್ಯೆ, ಬರ, ನೆರೆ ನಿರ್ವಹಣೆಗೆ ಪರಿಹಾರ ಸರಕಾರಕ್ಕೆ ಬೇಕಿಲ್ಲ. ಕೊಡಗಿನಲ್ಲಾದ ಪ್ರಕೃತಿಗೆ ಈ ಬಾರಿ ಯಾವ ಮುಂಜಾಗೃತಾ ಕ್ರಮವೂ ಕೈಗೊಂಡಿಲ್ಲ. ಆಡಳಿತ ಯಂತ್ರವೇ ಸ್ಥಗಿತಗೊಂಡಿದ್ದು, ಇದನ್ನೆಲ್ಲ ಮರೆಮಾಚಲು ಸಿಎಂ ಗ್ರಾಮವಾಸ್ತವ್ಯದ ಮೊರೆ ಹೋಗಿದ್ದಾರೆ ಎಂದು ಟೀಕಿಸಿದರು.

ವಿಧಾನ ಸೌಧಕ್ಕೆ ಯಾವ ಮಂತ್ರಿಯೂ ಹೋಗುತ್ತಿಲ್ಲ. ಒಂದಿಬ್ಬರನ್ನು ಬಿಟ್ಟರೆ ಯಾರೊಬ್ಬರು ಜಿಲ್ಲಾ ಕೇಂದ್ರಕ್ಕೆ ಭೇಟಿ ಕೊಟ್ಟು ಜನರ ಸಮಸ್ಯೆ ಕೇಳುತ್ತಿಲ್ಲ. ಮಂತ್ರಿಗಳೆಲ್ಲ ಚುನಾವಣೆ ಬಂದರೆ ಎದುರಿಸುವುದು ಹೇಗೆ ಎನ್ನುವ ಆಲೋಚನೆಯಲ್ಲಿದ್ದಾರೆ. ಈ ಸರಕಾರ ಹೆಚ್ಚು ದಿನ ಉಳಿಯಲ್ಲ. ಯಡಿಯೂರಪ್ಪ ಅವರನ್ನು ದೂರ ಇಡುವುದಕ್ಕೆ ಈ ಸರಕಾರ ರಚನೆಯಾಗಿದೆ ಎನ್ನುವುದು ವ್ಯಾಪಕವಾಗಿದೆ. ಈ ಎಲ್ಲಾ ಬೆಳವಣಿಗೆಯನ್ನು ಬಿಎಸ್‍ವೈ ಹಾಗೂ ಕೇಂದ್ರ ನಾಯಕರು ಗಂಭೀರವಾಗಿ ಪರಿಗಣಿಸುತ್ತಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಪ್ರತಿಯೊಬ್ಬ ಶಾಸಕರು 5 ವರ್ಷಗಳ ಅವಧಿಗೆ ಜನರಿಂದ ಆಯ್ಕೆಗೊಂಡಿರುತ್ತಾರೆ. ಚುನಾವಣೆ ಮುಗಿದ 1 ವರ್ಷ ಆಗಿದ್ದು, ಇನ್ನು 4 ವರ್ಷ ಬಾಕಿ ಇದೆ. ಯಾವ ಶಾಸಕರಲ್ಲೂ ಚುನಾವಣೆಯ ಮನಸ್ಥಿತಿ ಇಲ್ಲ. ಆದರೆ ದೇವೇಗೌಡರ ಮನೋಸ್ಥಿತಿ ಏನಿದೆಯೋ ಗೊತ್ತಿಲ್ಲ. ಬಿಜೆಪಿ ದಿಟ್ಟ ಹೆಜ್ಜೆ ತೆಗೆದುಕೊಳ್ಳುತ್ತದೆ ಎಂದು ಕೋಟ ತಿಳಿಸಿದರು.

ಬಹುಕೋಟಿಯ ಐಎಂಎ ವಂಚನೆ ಪ್ರಕರಣದಲ್ಲಿ ಸರಕಾರಕ್ಕೆ ನಂಟಿ ಇದೆ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್, ಜೆಡಿಎಸ್‍ನ ಮೇಲೆ ವಿಶ್ವಾಸವೇ ಹೋಗಿದೆ. ಐಎಂಎ ಪ್ರಕರಣದಲ್ಲಿ ಸರಕಾರದ ಸಚಿವರೇ ಭಾಗಿಯಾಗಿದ್ದಾರೆ. ಸಂತ್ರಸ್ತರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ನ್ಯಾಯಕ್ಕೆ ಮನವಿ ಮಾಡಿದ್ದಾರೆ. ಈ ಸರಕಾರಕ್ಕೆ ಆಡಳಿತ ನಡೆಸುವ ಶಕ್ತಿ ಇಲ್ಲ ಎಂದು ಕೋಟ ಶ್ರೀನಿವಾಸ್‌ ಪೂಜಾರಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ