ಆ್ಯಪ್ನಗರ

ವಿಚಾರಣಾಧೀನ ಕೈದಿ ವಿನೋದ್‌ ಶೆಟ್ಟಿಗಾರ್‌ ಕೊಲೆ: ನಾಲ್ವರು ಆರೋಪಿಗಳಿಗೆ ಜೀವಾವಧಿ

ಕೊಲೆ ಪ್ರಕರಣದ ವಿಚಾರಣೆ ಬುಧವಾರ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿದ್ದು, ಈ ನಾಲ್ವರನ್ನು ದೋಷಿಯೆಂದು ಪರಿಗಣಿಸಿ ನ್ಯಾಯಾಧೀಶ ಚಂದ್ರಶೇಖರ್‌ ಎಂ. ಜೋಶಿ ಬುಧವಾರ ತೀರ್ಪು ಕೊಟ್ಟಿದ್ದರು.

Vijaya Karnataka 28 Mar 2019, 10:04 pm
ಉಡುಪಿ: ಒಂಭತ್ತು ವರ್ಷಗಳ ಹಿಂದೆ ಉಡುಪಿಯ ಹಿರಿಯಡ್ಕ ಅಂಜಾರು ಗ್ರಾಮದ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ವಿನೋದ್‌ ಶೆಟ್ಟಿಗಾರ್‌ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ.
Vijaya Karnataka Web court


ಪ್ರಮುಖ ಆರೋಪಿ ಬ್ರಹ್ಮಾವರ ಬೈಕಾಡಿ ಐದು ಸೆಂಟ್ಸ್‌ ನಿವಾಸಿ ಮುತ್ತಪ್ಪ ಯಾನೆ ಸುರೇಶ್‌ ಬಳೆಗಾರ(36), ಆತನ ಸಹೋದರ ನಾಗರಾಜ ಬಳೆಗಾರ(33), ಮೈಸೂರು ಮಂಡಿ ಮೊಹಲ್ಲಾ ತುರಬಲಿ ಸ್ಟ್ರೀಟ್‌ ನಿವಾಸಿ ಶೇಖ್‌ ರಿಯಾಜ್‌ ಅಹ್ಮದ್‌(33), ಗಂಗಾವತಿ ತಾಲೂಕಿನ ಅಗೋಳಿ ಅಂಪಾಸ್‌ ದುರ್ಗಾ ನಿವಾಸಿ ಶರಣಪ್ಪ ಅಮರಾಪುರ (33) ಶಿಕ್ಷೆಗೊಳಗಾದ ಆರೋಪಿಗಳು.

ಕೊಲೆ ಪ್ರಕರಣದ ವಿಚಾರಣೆ ಬುಧವಾರ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿದ್ದು, ಈ ನಾಲ್ವರನ್ನು ದೋಷಿಯೆಂದು ಪರಿಗಣಿಸಿ ನ್ಯಾಯಾಧೀಶ ಚಂದ್ರಶೇಖರ್‌ ಎಂ. ಜೋಶಿ ಬುಧವಾರ ತೀರ್ಪು ಕೊಟ್ಟಿದ್ದರು. ಸೆಕ್ಷನ್‌ 302ರಂತೆ(ಕೊಲೆ) ಜೀವಾವಧಿ, 20 ಸಾವಿರ ದಂಡ, 326ರಂತೆ (ತೀವ್ರ ಸ್ವರೂಪದ ಹಲ್ಲೆ) 3 ವರ್ಷ ಶಿಕ್ಷೆ, 5 ಸಾವಿರ ದಂಡ, ಐಪಿಸಿ ಸೆಕ್ಷನ್‌ 353ರಂತೆ(ಸರಕಾರಿ ಕರ್ತವ್ಯಕ್ಕೆ ಅಡ್ಡಿ) 1 ವರ್ಷ ಶಿಕ್ಷೆ, 2 ಸಾವಿರ ದಂಡ, ಐಪಿಸಿ ಕಲಂ 506ರಂತೆ (ಸಿಬ್ಬಂದಿಗೆ ಬೆದರಿಕೆ) 1 ವರ್ಷ ಶಿಕ್ಷೆ, 2 ಸಾವಿರ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದರು.

ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ 76 ಬಡಗಬೆಟ್ಟು ಕುಕ್ಕಿಕಟ್ಟೆ ನಿವಾಸಿ ರಾಘವೇಂದ್ರ ಯಾನೆ ರಾಘು(35) ಪ್ರಕರಣದಿಂದ ಖುಲಾಸೆಗೊಂಡಿದ್ದ. ಪ್ರಕರಣದ ಸೂತ್ರಧಾರಿ 76ನೇ ಬಡಗಬೆಟ್ಟು ಗ್ರಾಮದ 1ನೇ ಕ್ರಾಸ್‌ ಕುಕ್ಕಿಕಟ್ಟೆ ನಿವಾಸಿ ನಾಗೇಶ್‌ ಯಾನೆ ಪಿಟ್ಟಿ ನಾಗೇಶ ವಿಚಾರಣೆ ಮಧ್ಯಾವಧಿಯಲ್ಲೇ (2014ರ ಸೆ.11ರಂದು) ವಿನೋದ್‌ ಶೆಟ್ಟಿಗಾರ್‌ನ ಸಹಚರರಿಂದ ಕೊಲೆಯಾಗಿದ್ದ.

2011ರ ಜ.14ರಂದು ಬೆಳಗ್ಗೆ 8.15ಕ್ಕೆ ಜಿಲ್ಲಾ ಕಾರಾಗೃಹದಲ್ಲಿ ವಿನೋದ್‌ ಶೆಟ್ಟಿಗಾರ್‌ನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬ್ರಹ್ಮಾವರ ಅಂದಿನ ಸರ್ಕಲ್‌ ಇನ್ಸ್‌ಪೆಕ್ಟರ್‌, ತನಿಖಾಧಿಕಾರಿ ಕೃಷ್ಣಮೂರ್ತಿ 2011ರ ಜ.18ರಂದು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 48 ಸಾಕ್ಷಿಗಳ ಪೈಕಿ 35 ಸಾಕ್ಷಿಗಳ ವಿಚಾರಣೆ ನಡೆಸಿ ಹೇಳಿಕೆ ಸಂಗ್ರಹ ಮಾಡಲಾಗಿತ್ತು. ಸರಕಾರದ ಪರವಾಗಿ ಜಿಲ್ಲಾ ಸರಕಾರಿ ಹಿರಿಯ ಅಭಿಯೋಜಕಿ ಶಾಂತಿ ಬಾಯಿ ವಾದಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ