ಆ್ಯಪ್ನಗರ

ಶೀರೂರು ಮೂಲಮಠದ ಚರಾಸ್ತಿ ಸೋದೆ ಮಠಕ್ಕೆ ಹಸ್ತಾಂತರ

ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥರ ಸಂಶಯಾಸ್ಪದ ಸಾವಿನ ಬಳಿಕ ಪೊಲೀಸ್‌ ಸುಪರ್ದಿಯಲ್ಲಿದ್ದ ಹಿರಿಯಡ್ಕದ ಶೀರೂರು ಮೂಲದ ಮಠದಲ್ಲಿದ್ದ ಮೌಲ್ಯಯುತ ಚರಾಸ್ತಿಯನ್ನು ಭದ್ರತೆ ಹಿನ್ನೆಲೆಯಲ್ಲಿ ಉಡುಪಿಯ ಶೀರೂರು ಮಠದ ಲಾಕರ್‌ನಲ್ಲಿ ಇಡಲಾಯಿತು.

Vijaya Karnataka 2 Aug 2018, 7:26 am
ಉಡುಪಿ: ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥರ ಸಂಶಯಾಸ್ಪದ ಸಾವಿನ ಬಳಿಕ ಪೊಲೀಸ್‌ ಸುಪರ್ದಿಯಲ್ಲಿದ್ದ ಹಿರಿಯಡ್ಕದ ಶೀರೂರು ಮೂಲದ ಮಠದಲ್ಲಿದ್ದ ಮೌಲ್ಯಯುತ ಚರಾಸ್ತಿಯನ್ನು ಭದ್ರತೆ ಹಿನ್ನೆಲೆಯಲ್ಲಿ ಉಡುಪಿಯ ಶೀರೂರು ಮಠದ ಲಾಕರ್‌ನಲ್ಲಿ ಇಡಲಾಯಿತು.
Vijaya Karnataka Web shiroor shri


ಶೀರೂರು ಮೂಲ ಮಠ ಪೊಲೀಸರ ಸುಪರ್ದಿಯಲ್ಲಿದ್ದ ಹಿನ್ನೆಲೆಯಲ್ಲಿ ಚಿನ್ನಾಭರಣವನ್ನು ಪೊಲೀಸರ ಎದುರು ಮಹಜರು ನಡೆಸಿದ ಬಳಿಕ ರಾತ್ರಿ ದ್ವಂದ್ವ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಲಾಯಿತು.

ಶೀರೂರು ಮೂಲ ಮಠದ ಮುಖ್ಯ ಪ್ರಾಣ ದೇವರ ಬೆಲೆಬಾಳುವ ಬೆಳ್ಳಿ ಕವಚ, ಚಿನ್ನಾಭರಣ, ಪೂಜಾ ಸಾಮಗ್ರಿ ಸಹಿತ ಶ್ರೀಗಳ ಬಳಿಯಲ್ಲಿದ್ದ ಚರಾಸ್ತಿಯನ್ನು ಉಡುಪಿ ಶೀರೂರು ಮಠಕ್ಕೆ ತರಲಾಗಿದೆ. ದೇವರ ದೊಡ್ಡ ಬೆಳ್ಳಿ ಪಲ್ಲಕ್ಕಿಯನ್ನು ಶೀರೂರು ಮೂಲ ಮಠದಲ್ಲೇ ಭದ್ರವಾಗಿ ಇರಿಸಲಾಗಿದೆ.

ಪೊಲೀಸರ ಮಹಜರಿನ ಬಳಿಕ ಶೀರೂರು ಮೂಲ ಮಠದಿಂದ ಭದ್ರವಾಗಿ ಚಿನ್ನಾಭರಣವನ್ನು ಉಡುಪಿಯ ಶೀರೂರು ಮಠದ ಹಿಂಬಾಗಿಲ ಮೂಲಕ ಒಳಗೆ ತರಲಾಯಿತು. ವಿಚಾರಣೆ ಮುಂದುವರಿದ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜಿತ ಪೊಲೀಸರಿಂದ ಚರಾಸ್ತಿಯನ್ನು ದ್ವಂದ್ವ ಮಠದ ಪ್ರತಿನಿಧಿಗಳು ಪಡೆದುಕೊಂಡರು.

ವೀಡಿಯೋ ಚಿತ್ರೀಕರಣ: ಶೀರೂರು ಮಠದಲ್ಲಿನ ಚರಾಸ್ತಿಗಳನ್ನು ಉಡುಪಿ ಮಠದಲ್ಲಿ ಭದ್ರವಾಗಿ ಇಡುವಾಗ ಪ್ರತಿಯೊಂದನ್ನೂ ಪೊಲೀಸರು ಮಹಜರು ನಡೆಸಿದ್ದು, ಈ ಸಂದರ್ಭ ವೀಡಿಯೋ ಚಿತ್ರೀಕರಣ ಹಾಗೂ ಫೋಟೊ ಸೆರೆ ಹಿಡಿಯಲಾಗಿತ್ತು. ಸಾಕ್ಷಿ ಹಿನ್ನೆಲೆಯಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಳಿಯಲ್ಲಿ ಭದ್ರತೆ: ಶೀರೂರು ಶ್ರೀಗಳು ನಿಧನರಾದ ಬಳಿಕ ಉಡುಪಿ ಹಾಗೂ ಶೀರೂರು ಮಠವನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಉಡುಪಿ ಶೀರೂರು ಮಠಕ್ಕೆ 2 ಪಾಳಿಯಲ್ಲಿ ಭದ್ರತೆ ನೀಡಲಾಗಿದೆ.

ಬೆಳಗ್ಗೆ ಎಎಸ್‌ಐ ರತ್ನಾಕರ ಉಸ್ತುವಾರಿಯಲ್ಲಿ 10 ಮಂದಿ ಸಿಬ್ಬಂದಿ ಭದ್ರತೆ ನೋಡಿಕೊಳ್ಳುತ್ತಿದ್ದು, ರಾತ್ರಿ ಎಎಸ್‌ಐ ನಾರಾಯಣ ಉಸ್ತುವಾರಿಯಲ್ಲಿ 15 ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರಲ್ಲಿ ಜಿಲ್ಲಾಸಶಸ್ತ್ರ ಮೀಸಲು ಪಡೆ, ಮಹಿಳಾ ಸಿಬ್ಬಂದಿ ಹಾಗೂ ಹೋಮ್‌ ಗಾರ್ಡ್‌ ಸೇರಿದ್ದಾರೆ.

ಉಸ್ತುವಾರಿ: ಉಡುಪಿಯ ಶೀರೂರು ಮಠದಲ್ಲಿದ್ದ ಅಪ್ಪು ತಂತ್ರಿ ಹಾಗೂ ಸೋದೆ ಮಠದಿಂದ ನೇಮಕಗೊಂಡ ವಿಠಲ್‌ ಭಟ್‌ ಉಡುಪಿ ಶೀರೂರು ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ರಾತ್ರಿವರೆಗೂ ಹಸ್ತಾಂತರ ಪ್ರಕ್ರಿಯೆ


ಸೋದೆ ಶ್ರೀವಿಶ್ವವಲ್ಲಭತೀರ್ಥರು, ರತ್ನ ಕುಮಾರ್‌, ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ ಬುಧವಾರ ಮಧ್ಯಾಹ್ನ 3.30ಕ್ಕೆ ಹಿರಿಯಡ್ಕದ ಶೀರೂರು ಮೂಲ ಮಠಕ್ಕೆ ತೆರಳಿದ್ದು ಸಂಜೆ 7.30 ರ ತನಕ ಚರಾಸ್ತಿಯ ಮಹಜರಿನಲ್ಲಿ ಪಾಲ್ಗೊಂಡಿದ್ದು ಉಡುಪಿ ಶೀರೂರು ಮಠದಲ್ಲಿ ಹಸ್ತಾಂತರ, ಮಹಜರು, ಲಾಕರ್‌ನಲ್ಲಿಡುವ ಪ್ರಕ್ರಿಯೆ ರಾತ್ರಿ 10ರ ಬಳಿಕವೂ ಮುಂದುವರಿದಿದೆ.

ಚರಾಸ್ತಿ ಲೆಕ್ಕಾಚಾರ ನಡೆದಿಲ್ಲ


ದೇವರ ಪಾಣಿ ಪೀಠ, ದೇವರ ಪದಕ, ಬೆಳ್ಳಿಯ ಕವಚಗಳು ಹಿರಿಯಡ್ಕದ ಶೀರೂರು ಮೂಲಮಠದಲ್ಲಿರುವ ಪಟ್ಟಾಭಿರಾಮಚಂದ್ರ, ಮುಖ್ಯಪ್ರಾಣ ಹಾಗೂ ಅನ್ನ ವಿಠಲನ ಮೇಲಿದೆ. ಇನ್ನೆರಡು ದಿನಗಳಲ್ಲಿ ಉಡುಪಿ ಶೀರೂರು ಮಠಕ್ಕೆ ತರಲಾಗುವುದು. ಚರಾಸ್ತಿಯ ಲೆಕ್ಕಾಚಾರವಾಗಿಲ್ಲ ಎಂದು ದ್ವಂದ್ವ ಸೋದೆ ಮಠದ ಪ್ರಮುಖರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ