ಆ್ಯಪ್ನಗರ

ಶೀರೂರು ಶ್ರೀ ನಿಗೂಢ ಸಾವಿನ ಪ್ರಕರಣ: ಮುಂಬಯಿಗೆ ತೆರಳಿದ ಪೊಲೀಸ್ ತಂಡ

ಬಹುಮುಖಿ ವ್ಯಕ್ತಿತ್ವದ ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಸಾವಿನ ಹಿಂದೆ ಭೂ ಮಾಫಿಯಾ ಜತೆಗೆ ಭೂಗತ ಲೋಕದ ನಂಟಿನ ಶಂಕೆಯ ನೆಲೆಯಲ್ಲಿ ಪೊಲೀಸ್‌ ತನಿಖೆ ಚುರುಕಾಗಿದೆ.

Vijaya Karnataka 23 Jul 2018, 8:04 am
ಉಡುಪಿ: ಬಹುಮುಖಿ ವ್ಯಕ್ತಿತ್ವದ ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಸಾವಿನ ಹಿಂದೆ ಭೂ ಮಾಫಿಯಾ ಜತೆಗೆ ಭೂಗತ ಲೋಕದ ನಂಟಿನ ಶಂಕೆಯ ನೆಲೆಯಲ್ಲಿ ಪೊಲೀಸ್‌ ತನಿಖೆ ಚುರುಕಾಗಿದೆ.
Vijaya Karnataka Web sree


ಶೀರೂರು ಶ್ರೀಪಾದರ ಜತೆ ಪಾಲುದಾರಿಕೆ ಹೊಂದಿದ್ದ ರಿಯಲ್‌ ಎಸ್ಟೇಟ್‌, ಬಿಲ್ಡರ್ಸ್‌ಗಳಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ನಾಲ್ವರ ವಿಚಾರಣೆ ನಡೆಸಿದ್ದಾರೆ. ಏತನ್ಮಧ್ಯೆ ಶೀರೂರು ಶ್ರೀಪಾದರಿಗೆ 26 ಕೋಟಿ ರೂ. ವಂಚಿಸಿದ ಉದ್ಯಮಿಗಳ ತಲಾಶ್‌ ನಿಟ್ಟಿನಲ್ಲಿ ಪೊಲೀಸರ ತಂಡವೊಂದು ಮುಂಬಯಿಗೆ ತೆರಳಿದೆ. ಭೂಗತ ಲೋಕದ ವ್ಯಕ್ತಿಗಳ ನೆರವು ಪಡೆದು ಶೀರೂರು ಶ್ರೀಗಳಿಗೆ ಬೆದರಿಕೆ ಒಡ್ಡಿದ್ದ ಭೂ ಮಾಫಿಯಾದಿಂದ ಶೀರೂರು ಶ್ರೀಗಳ ಪ್ರಾಣಕ್ಕೆ ಸಂಚಕಾರೆ ಬಂತೇ ಎನ್ನುವ ನೆಲೆಯಲ್ಲಿ ಪೊಲೀಸರು ತನಿಖಾ ಹೆಜ್ಜೆಯಿಟ್ಟಿದ್ದಾರೆ.

ಶೀರೂರು ಶ್ರೀಪಾದರಿಗೆ ನಾಲ್ಕು ವರ್ಷಗಳಿಂದ ಆತ್ಮೀಯಳಾದ ಮಹಿಳೆ ಮೂಲಕ ಭೂ ಮಾಫಿಯಾ ಸಂಚು ರೂಪಿಸಿದ ಶಂಕೆ ಹಿನ್ನೆಲೆಯಲ್ಲಿ, ಆಕೆಯ ಹಿನ್ನೆಲೆ ಬಗ್ಗೆ ಪೊಲೀಸರು ಭಾನುವಾರ ತೀವ್ರ ವಿಚಾರಣೆ ನಡೆಸಿದ್ದಾರೆ.

ಪೊಲೀಸರ ತನಿಖೆಯ ಕೇಂದ್ರ ಬಿಂದುವಾದ ಮಹಿಳೆ ಬ್ರಹ್ಮಾವರ, ಬೈಲೂರು ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು/ಸುಳ್ಯ ಮೂಲದವಳೆನ್ನಲಾಗುತ್ತಿದ್ದು, ಈಕೆ ಮಗುವನ್ನೂ ಹೊಂದಿದ್ದಾಳೆ. ಈ ಪ್ರಕರಣದಲ್ಲಿ ಭೂ ಮಾಫಿಯಾ ಹೊರತಾಗಿ ಮಹಿಳೆಯ ನಿರ್ದಿಷ್ಟ ಪಾತ್ರವನ್ನು ಪರಿಶೀಲಿಸಲಾಗುತ್ತಿದೆ.

ಯಾವ ಆಯಾಮದಲ್ಲಿ ತನಿಖೆ?: ಶೀರೂರು ಶ್ರೀಪಾದರು ಉಡುಪಿ ಹಾಗೂ ಹಿರಿಯಡ್ಕದ ಮಹಿಳೆಯರೊಂದಿಗೆ ಹೊಂದಿದ್ದ ಸಂಬಂಧ, ತಮ್ಮ ಮೈಮೇಲೆ ಧರಿಸಿದ್ದ ಆಭರಣ ಮಾತ್ರವಲ್ಲ ದೇವರಿಗೆ ಹರಕೆ ರೂಪದಲ್ಲಿ ಬಂದ ಆಭರಣಗಳು, ಭೂ ವ್ಯವಹಾರ, ಮದ್ಯ, ಮಾದಕದ ಆಯಾಮಗಳು ತನಿಖಾ ವ್ಯಾಪ್ತಿಯಲ್ಲಿವೆ.

ಶೀರೂರು ಶ್ರೀಗಳು ಮೂರು ಮೊಬೈಲ್‌ ಫೋನ್‌ ಹೊಂದಿದ್ದು, ತನಿಖಾ ತಂಡವು ಕಳೆದ ನಾಲ್ಕು ತಿಂಗಳಲ್ಲಿ ಯಾರಾರ‍ಯರಿಗೆ ಕರೆ ಹೋಗಿದೆ, ಬಂದಿದೆ ಎಂದು ಪರಿಶೀಲಿಸುತ್ತಿದೆ. ಉಡುಪಿ ಹಾಗೂ ಶೀರೂರು ಮೂಲ ಮಠದಲ್ಲಿರುವ ಸಿಸಿ ಟಿವಿ ಸಾಕ್ಷ್ಯವನ್ನೂ ಸಂಗ್ರಹಿಸಿ ಪರಿಶೀಲನೆಯಲ್ಲಿ ತೊಡಗಿದೆ.

ಬಹುವಿಧ ತನಿಖೆ ಆಯಾಮ: ಪೊಲೀಸರ ದ್ರಾವಿಡ ಪ್ರಾಣಾಯಾಮ!
ಪೆರ್ಡೂರಿನ ಶೇನರಬೆಟ್ಟಿನಲ್ಲಿ ಮೇ 30ರಂದು ನಡೆದ ಗೋ ಸಾಗಾಟ ಹಾಗೂ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಸಾವಿನ ಪ್ರಕರಣದಲ್ಲಿ ಪೊಲೀಸರೇ ಶಾಮೀಲಾಗಿದ್ದರೂ, ಯಾರನ್ನೂ ಬಿಡದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡ ಖಡಕ್‌ ಎಸ್ಪಿ ಲಕ್ಷ್ಮಣ ಬ. ನಿಂಬರಗಿ ಶೀರೂರು ಶ್ರೀ ಪ್ರಕರಣದ ನೇರ ಮೇಲುಸ್ತುವಾರಿ ವಹಿಸಿದ್ದಾರೆ.

12 ತಂಡಗಳನ್ನು ರಚಿಸಿ ಬಹು ಆಯಾಮದಲ್ಲಿ ತನಿಖೆ ನಿರತ ಪೊಲೀಸರು ಹಗಲಿರುಳು ನಿದ್ದೆ, ಊಟ, ತಿಂಡಿ ಬಿಟ್ಟು ಸುಳಿವು, ಸಾಕ್ಷ್ಯಕ್ಕಾಗಿ ದ್ರಾವಿಡ ಪ್ರಾಣಾಯಾಮದಲ್ಲಿ ತೊಡಗಿದ್ದಾರೆ. ತಮ್ಮ ಪೊಲೀಸ್‌ ಬುದ್ಧಿಯನ್ನು ಒರೆಗೆ ಹಚ್ಚುವ ಮೂಲಕ ಸಾವಿನ ರಹಸ್ಯ ಬಯಲಿಗೆಳೆಯಲು ಮಳೆಗಾಲದ ದಿನಗಳಲ್ಲೂ ಬೆವರು ಹರಿಸುತ್ತಿದ್ದಾರೆ.

ಸ್ವಾಮೀಜಿ ಮೈಮೇಲಿದ್ದ ಆಭರಣಗಳೆಲ್ಲಿ?
ಶೀರೂರು ಶ್ರೀಗಳ ಕೈಗಳೆರಡರಲ್ಲಿ ಲಕ್ಷಾಂತರ ಮೌಲ್ಯದ ಕಡಗ, ಕೊರಳಲ್ಲಿ ಚಿನ್ನ ಹಾಗೂ ಮಣಿ ಸರಗಳಿದ್ದು, ಈಗ ಎಲ್ಲಿವೆ ಎಂಬುದು ಕುತೂಹಲಕಾರಿಯಾಗಿದೆ.

ಹಿರಿಯಡ್ಕದ ಶೀರೂರು ಮೂಲ ಮಠದಿಂದ ಉಡುಪಿಯ ಖಾಸಗಿ, ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ತೆರಳುವ ಮೊದಲೇ ಕಳಚಿಡಲಾಗಿದೆಯೇ? ಬಚ್ಚಿಡಲಾಗಿದೆಯೇ, ಭದ್ರವಾಗಿಡಲಾಗಿದೆಯೇ, ಯಾರಾದರೂ ಲಪಟಾಯಿಸಿದ್ದಾರೆಯೇ ಎನ್ನುವ ಕೋನದಲ್ಲೂ ತನಿಖೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ