ಆ್ಯಪ್ನಗರ

ಉಸ್ತುವಾರಿ ಹಂಚುವುದು ಸಿಎಂ ಕೆಲಸ, ಅವರ ಪರಮಾಧಿಕಾರ ಪ್ರಶ್ನಿಸಲಾರೆ: ಕೋಟ

ಉಡುಪಿ ಜಿಲ್ಲೆಯ 5 ಮಂದಿ ಶಾಸಕರು ಅವರವರ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಿರಬಹುದು. ನನಗೆ ಉಡುಪಿಯ ಉಸ್ತುವಾರಿ ಸ್ಥಾನ ತಪ್ಪಿಸಲು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ ಎಂದು ನಾನು ಭಾವಿಸಲಾರೆ.

Vijaya Karnataka 18 Sep 2019, 7:48 pm
ಉಡುಪಿ: ರಾಜ್ಯದ 30 ಜಿಲ್ಲೆಗಳ ಉಸ್ತುವಾರಿಯನ್ನು ಇರುವ 16 ಸಚಿವರಿಗೆ ಹಂಚಬೇಕಾಗಿರುವುದರಿಂದ ಒಂದಷ್ಟು ಸಚಿವರಿಗೆ ಅಕ್ಕ ಪಕ್ಕದ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ. ಇದು ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು ಯಾವುದೇ ಕಾರಣಕ್ಕೆ ಇದನ್ನು ಪ್ರಶ್ನಿಸಲಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಸಚಿವ ಹಾಗೂ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಮತ್ತು ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
Vijaya Karnataka Web Kota Srinivas Poojary


ಮಂಗಳವಾರ ರಾತ್ರಿ ಸಾಲಿಗ್ರಾಮ ಚೇಂಪಿಯಲ್ಲಿ ವಿಶ್ವಕರ್ಮ ಯಜ್ಞ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.

ಉಡುಪಿ ಜಿಲ್ಲೆಯ 5 ಮಂದಿ ಶಾಸಕರು ಅವರವರ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿರಬಹುದು. ನನಗೆ ಉಡುಪಿಯ ಉಸ್ತುವಾರಿ ಸ್ಥಾನ ತಪ್ಪಿಸಲು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ ಎಂದು ನಾನು ಭಾವಿಸಲಾರೆ. ಅವರೆಲ್ಲರಿಗೂ ನನ್ನ ಮೇಲೆ ಪ್ರೀತಿ, ವಿಶ್ವಾಸವಿದೆ ಎಂದರು.

'ಶ್ರೀನಿವಾಸ ಪೂಜಾರಿಗೆ ಉಡುಪಿ ಉಸ್ತುವಾರಿ ತಪ್ಪಿಸುವಲ್ಲಿ ಬಿಜೆಪಿ ಶಾಸಕರ ಕೈವಾಡ'

ರಾಜ್ಯದಲ್ಲಿಅಭಿವೃದ್ಧಿಗೆ ಸಾಕಷ್ಟು ಅವಕಾಶವಿರುವ ಜಿಲ್ಲೆಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನ ದಕ್ಷಿಣ ಕನ್ನಡಕ್ಕೆ ಇದೆ. ಇಲ್ಲಿ 250 ಗ್ರಾಮ ಪಂಚಾಯತ್‌ಗಳಿದ್ದು, ನಮ್ಮದೇ ಪಕ್ಷದ 7 ಮಂದಿ ಶಾಸಕರು, ಸಂಸದರಿದ್ದಾರೆ. ಜತೆಗೆ ನಮ್ಮ ಪಕ್ಷದ ರಾಜಾಧ್ಯಕ್ಷರು ಇಲ್ಲಿನವರೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ದೇಗುಲಗಳಿದ್ದು ನಾನು ಮುಜರಾಯಿ ಸಚಿವನಾಗಿರುವುದರಿಂದ ಇವುಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜತೆಗೆ ಇಲ್ಲಿ ಕಿರುಬಂದರು, ಬೃಹತ್‌ ಬಂದರುಗಳಿದ್ದು ಅವುಗಳನ್ನು ಅಭಿವೃದ್ಧಿ ಮಾಡುತ್ತೇನೆ. ಒಳನಾಡು ಜಲಸಾರಿಗೆ ಇಲಾಖೆ ಮೂಲಕ ಈ ಭಾಗದಲ್ಲಿ ಬೋಟ್‌ಹೌಸ್‌ಗಳ ನಿರ್ಮಾಣಕ್ಕೆ ಒತ್ತು ನೀಡುವುದರ ಜತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದರು.

ಇದೇ ವೇಳೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನನಗೆ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಈ ಜಿಲ್ಲೆಯನ್ನು ಮರೆಯಲಾರೆ. ನನ್ನ ಖಾತೆಗಳಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯ ಮಾಡುವುದರ ಜತೆಗೆ ಮರಳು ಸಮಸ್ಯೆಗೆ ಸಂಬಂಧಪಟ್ಟಂತೆ ಸಾಕಷ್ಟು ಹೋರಾಟ ನಡೆಸಿದ್ದು, ಒಂದು ವಾರದಲ್ಲಿ ಮನೆಬಾಗಿಲಿಗೆ ಮರಳು ದೊರೆಯುವಷ್ಟು ಕೆಲಸಗಳಾಗಿವೆ ಎಂಬುದಾಗಿ ಶ್ರೀನಿವಾಸ ಪೂಜಾರಿ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ