ಉಡುಪಿ: ಕಲ್ಸಂಕ ರಾಯಲ್ಗಾರ್ಡನ್ನಲ್ಲಿ 3 ದಿನಗಳ ಕಾಲ ನಡೆದ ಧರ್ಮ ಸಂಸದ್ನಲ್ಲಿ ಸಾಧು, ಸಂತರು ಕೈಗೊಂಡ ನಿರ್ಣಯಗಳನ್ನು ಕೇಂದ್ರ ಸರಕಾರದ ಮುಂದಿಟ್ಟು ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ವಿಎಚ್ಪಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ (ಕರ್ನಾಟಕ, ಆಂಧ್ರ) ಗೋಪಾಲ್ ನಾಗರಕಟ್ಟೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಎಚ್ಪಿ, ಬಜರಂಗದಳ, ಹಿಂದೂ ಸಮಾಜದ ಕಾರ್ಯಕರ್ತರ ಪರಿಶ್ರಮ, ಸ್ವಯಂ ಸೇವಕರ ಸೇವೆ, ಪೊಲೀಸ್ ಇಲಾಖೆಯ ಸಹಕಾರದಿಂದ ಧರ್ಮ ಸಂಸದ್ ಯಶಸ್ವಿಯಾಗಿದೆ. ರಾಮ ಮಂದಿರ ನಿರ್ಮಾಣ, ಗೋ ರಕ್ಷಣೆ, ಅಸ್ಪೃಶ್ಯತೆ, ದೇವಾಲಯಗಳ ಸರಕಾರೀಕರಣ ವಿರೋಧಿಸಿ ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಕೈಗೊಂಡ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸರಕಾರಕ್ಕೆ ಒಪ್ಪಿಸಲಿದ್ದೇವೆ. ಶೀಘ್ರವೇ ಅನುಷ್ಠಾನಕ್ಕೆ ಒತ್ತಾಯಿಸಲಿದ್ದೇವೆ ಎಂದರು.
87ರ ಹರೆಯದ ಪರ್ಯಾಯ ಪೇಜಾವರ ಶ್ರೀಗಳ ಆಶಯದಂತೆ ಧರ್ಮ ಸಂಸದ್ ಯಶಸ್ವಿಯಾಗಿದೆ. ದ.ಕ. ಉಡುಪಿ, ಕಾಸರಗೋಡು, ಕೊಡಗು ಸಹಿತ ನಾನಾ ಜಿಲ್ಲೆಗಳ ಜನಪ್ರವಾಹವೇ ಉಡುಪಿಗೆ ಹರಿದುಬಂದಿದೆ. ಈ ಸಂದರ್ಭ ನಾಗರಿಕರಿಗೆ ಅನಾನುಕೂಲವಾಗಿದ್ದಲ್ಲಿ ವಿಷಾದಿಸುತ್ತೇವೆ ಎಂದ ಅವರು, ಕಾರ್ಯಕ್ರಮ ಸುಸೂತ್ರವಾಗಿ ನಡೆಸಲು ಶ್ರಮಿಸಿದ ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು.
ಬಡ ಮಹಿಳೆಯಿಂದ 6000 ರೂ.!: ಧರ್ಮ ಸಂಸದ್ನ ಯಶಸ್ಸಿಗೆ ಸಂಬಂಧಿಸಿ ಬಡ ಮಹಿಳೆಯೊಬ್ಬರು ಕಾರ್ಯಾಲಯಕ್ಕೆ ಭೇಟಿ ನೀಡಿ ತಾನು ಸಂಗ್ರಹಿಸಿದ 6000 ರೂ. ನೀಡಿ ಹೋಗಿದ್ದಾರೆ. ಮಹಿಳೆ ಉಡುಪಿಯ ನಿವಾಸಿಯಾಗಿದ್ದು, ಅವರ ಜೀವನವೇ ಕಷ್ಟದಿಂದ ಕೂಡಿದೆ. ಆದರೂ ಧರ್ಮಸಂಸದ್ಗೆ ಈ ಹಣ ಬಳಸಿಕೊಳ್ಳಿ ಎಂದಿರುವುದು ಖುಷಿ ಕೊಟ್ಟಿದೆ ಎಂದು ಗೋಪಾಲ್ಜಿ ಹೇಳಿದರು.
ಅನುಮತಿ ಹಿಂಪಡೆದಿರುವುದು ಬೇಸರ ತಂದಿದೆ: ಧರ್ಮ ಸಂಸದ್ ಸಂದರ್ಭ ಆಯೋಜಿಸಿದ ಹಿಂದೂ ವೈಭವ ಪ್ರದರ್ಶಿನಿ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಹೊರಡಿಸಿದ ಸುತ್ತೋಲೆಯನ್ನು 24 ಗಂಟೆಯೊಳಗೆ ಹಿಂಪಡೆದ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಬೇಸರ ತಂದಿದೆ. ಹಿಂದೂ ಸಂಸ್ಕೃತಿ,ಆಚಾರ ವಿಚಾರ, ಸಂಪ್ರದಾಯ, ಗತಕಾಲದ ಇತಿಹಾಸದ ಸಂಪೂರ್ಣ ಮಾಹಿತಿ ನೀಡುವ ಪ್ರದರ್ಶಿನಿ ವೀಕ್ಷಣೆಗೆ ಸಂಬಂಧಿಸಿ ಶಿಕ್ಷಣ ಇಲಾಖೆ ಅನುಮತಿ ಕೊಟ್ಟಿತ್ತು. ಆದರೆ ಬಳಿಕ ಏಕಾಏಕಿ ಹಿಂಪಡೆದಿದೆ ಎಂದು ಪ್ರೊ.ಎಂ.ಬಿ.ಪುರಾಣಿಕ್ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪಿ. ವಿಲಾಸ್ ನಾಯಕ್, ಟಿ.ಎ.ಪಿ. ಶೆಣೈ, ಸಂತೋಷ್ ಸುವರ್ಣ ಬೊಳ್ಜೆ ಉಪಸ್ಥಿತರಿದ್ದರು.