ಉಡುಪಿ: ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ಪದವೀಧರ, ಚಿಕ್ಕಮಗಳೂರಿನ ಭರತರಾಜೇ ಅರಸ್(34) ಕ್ಷತ್ರಿಯ ಪೀಠದ ಮೊದಲ ಅಧಿಪತಿಯಾಗಲಿದ್ದಾರೆ.
ಭಾರತೀಯ ಸಂಸ್ಕೃತಿ, ಧಾರ್ಮಿಕ ವಿಷಯದಲ್ಲಿ ಸಾಕಷ್ಟು ಜ್ಞಾನ ಗಳಿಸಿದ ಭರತರಾಜೇ ಅರಸ್, ಉಡುಪಿಯ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರಿಂದ ಉಡುಪಿಯಲ್ಲಿ ಜು. 11ರಂದು ಸನ್ಯಾಸಾಶ್ರಮ ಸ್ವೀಕರಿಸಲಿದ್ದಾರೆ.
ಚಿಕ್ಕಮಗಳೂರಿನ ಭರತರಾಜೇ ಅರಸು ಮಂಗಳೂರಿನಲ್ಲಿ ಹೇಮರಾಜೇ ಅರಸು ಮತ್ತು ಎಸ್.ಪಿ. ಜ್ಯೋತಿ ದಂಪತಿ ಪುತ್ರನಾಗಿ 1982ರಲ್ಲಿ ಜನಿಸಿದ್ದರು. ಹೇಮರಾಜೇ ಅರಸು ಮಂಗಳೂರಿನ ಎಂಸಿಎಫ್ ಉದ್ಯೋಗಿ. ಜ್ಯೋತಿ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ.
ಭರತರಾಜೇ ಸಹೋದರ ಪ್ರಿಯದರ್ಶನರಾಜೇ ಅರಸು ಅವರೂ ಎಂಸಿಎಫ್ ಉದ್ಯೋಗಿ ಹಾಗೂ ವಿವಾಹಿತ. ಮಂಗಳೂರಿನ ಕುಂಜತ್ಬೈಲ್ನಲ್ಲಿ ಎಂಸಿಎಫ್ ಸಿಬ್ಬಂದಿಗಳ ವಸತಿಗೃಹದಲ್ಲಿದ್ದು ಮಂಗಳೂರಿನ ಸೈಂಟ್ ಅಲೋಶಿಯಸ್ ಪ.ಪೂ. ಕಾಲೇಜಿನಲ್ಲಿ ಪಿಯುಸಿ ಬಳಿಕ ಮಣಿಪಾಲ ಎಂಐಟಿಯಲ್ಲಿ ಬಿ.ಇ. ಪದವಿ ಪಡೆದರು.
ಮಥುರಾ ಗೋವರ್ಧನದಲ್ಲಿ ಶ್ರೀಮದ್ ಭಾಗವತ ವಿದ್ಯಾಪೀಠದಲ್ಲಿ ಶಾಸ್ತ್ರಾಧ್ಯಯನ ನಡೆಸಿದ ಭರತ ರಾಜೇ ಇಸ್ಕಾನ್ನಲ್ಲಿ ಎಂಟು ವರ್ಷ ಸೇವೆ ಮಾಡಿದ್ದಾರೆ. ದೇಶದ ಹಲವೆಡೆ ಸತ್ಯದರ್ಶನಕ್ಕಾಗಿ ಸಂಚರಿಸಿದ್ದಾರೆ. ಗೋ ಸಂರಕ್ಷಣೆಯಲ್ಲಿ ವಿಶೇಷ ಆಸಕ್ತಿಯಿದ್ದು ಉಡುಪಿಯಲ್ಲಿ ಕಳೆದ ವರ್ಷ ನಡೆದ ಗೋ ಸಮ್ಮೇಳನದ ಸಂಚಾಲಕರಾಗಿದ್ದರು.
ಅನೇಕ ವರ್ಷಗಳಿಂದ ಉಡುಪಿ ಮತ್ತು ಪೇಜಾವರ ಶ್ರೀಗಳ ನಿಕಟ ಸಂಪರ್ಕ ಹೊಂದಿದ್ದು ತಮಿಳುನಾಡಿನ ಮಧುರೆಯಲ್ಲಿ ಗೋವುಗಳ ಉತ್ಪನ್ನದ ಮೂಲಕ ಔಷಧ ತಯಾರಿಸುವ ಘಟಕವನ್ನು ಸ್ಥಾಪಿಸಿದ್ದಾರೆ. ಉಡುಪಿಯಲ್ಲಿ ಶಾಸ್ತ್ರಾಧ್ಯಯನ ನಡೆಸುತ್ತಿರುವ ಭರತರಾಜೇ ಸನ್ಯಾಸಾಶ್ರಮದ ಬಳಿಕ ಗೋ ಸಂರಕ್ಷಣೆ ಮತ್ತು ಭಾರತೀಯ ಧರ್ಮದ ತತ್ವ ಪ್ರಸಾರದಲ್ಲಿ ತೊಡಗಲಿದ್ದಾರೆ.
ಕಾರ್ಯಕ್ರಮ ಹೀಗಿದೆ: ಜು. 9ರಂದು ಬೆಳಗ್ಗೆ 7ಕ್ಕೆ ದೇವ ಪ್ರಾರ್ಥನೆ, ಸರ್ವ ಪ್ರಾಯಶ್ಚಿತ್ತಾರ್ಥ ಪವಮಾನ ಹೋಮ, ಸ್ನಾನ, ತರ್ಪಣ. ಜು. 10ರಂದು ಬೆಳಗ್ಗೆ 9ಕ್ಕೆ ಅಷ್ಟಕ ಶ್ರಾದ್ಧ, ಸಂಜೆ 6: ಅಗ್ನಪ್ರತಿಷ್ಠೆ, ನಿತ್ಯಾನುಷ್ಠಾನ ಅಗ್ನಿ ಕಾರ್ಯ, ಶಾಕಲ ಹೋಮ, ದಧಿ ಮಿಶ್ರ ಸಶ್ತು ಪ್ರಾಶನ.
ಜು. 11ರಂದು ಬೆಳಗ್ಗೆ 6: ವಿರಜಾ ಹೋಮ, ಬೆಳಗ್ಗೆ 7: ಸಂನ್ಯಾಸಾಂಗ ಸ್ನಾನ, ಸಂನ್ಯಸ್ತ ವಿಧಾನ, ಗುರು ಮಂತ್ರೋಪದೇಶ, ನಾಮಕರಣ. ಸಂಜೆ 5: ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ.