ಬ್ರಹ್ಮಾವರ: ಯಡ್ತಾಡಿ ಗ್ರಾಮದ ಹೋರ್ವರ್ಬೆಟ್ಟುವಿನಲ್ಲಿರುವ ಕಲ್ಲುಕೋರೆ ಹೊಂಡಕ್ಕೆ ಬಟ್ಟೆ ತೊಳೆಯಲು ಹೋದ ತಾಯಿ, ಮಗು ಬಿದ್ದು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.
ತಾಯಿ ಚಂದ್ರಿಕಾ ಅಲಿಯಾಸ್ ಕವಿತಾ (28), ಮಗು ಲಿಖಿತಾ (3) ಮೃತರು.
ಘಟನೆ ವಿವರ: ಮೂಲತಃ ಭದ್ರಾವತಿ ಜಿಲ್ಲೆಯವರಾಗಿದ್ದು, ನಾಲ್ಕು ವರ್ಷದ ಹಿಂದೆ ಕೆಲಸದ ನಿಮಿತ್ತ ಹೋರ್ವರ್ಬೆಟ್ಟುವಿನಲ್ಲಿ ವಾಸವಾಗಿದ್ದರು. ಗಂಡ ವಿರೇಶ್ ಕಲ್ಲು ಕೋರೆಗಳಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರ ಕೆಲಸಕ್ಕೆ ತೆರಳಿದ ನಂತರ ಚಂದ್ರಿಕಾ ಅಲಿಯಾಸ್ ಕವಿತಾ ಅವರು ತಮ್ಮ ಮೂವರು ಹೆಣ್ಣು ಮಕ್ಕಳಲ್ಲಿ ಇಬ್ಬರನ್ನು ಕರೆದುಕೊಂಡು ಬಟ್ಟೆ ತೊಳೆಯಲು ಮನೆ ಪಕ್ಕದ ಕಲ್ಲು ಕೋರೆ ಹೊಂಡಕ್ಕೆ ತೆರಳಿದ್ದರು.
ಈ ಸಂದರ್ಭ ಮೂರು ವರ್ಷದ ಲಿಖಿತಾ ನೀರಿನಲ್ಲಿ ಆಟವಾಡುತ್ತಾ ಮುಂದೆ ಹೋಗಿ ನೀರಿನಲ್ಲಿ ಮುಳುಗಿತು. ಮಗು ಮುಳುಗುತ್ತಿದ್ದುದನ್ನು ಗಮನಿಸಿದ ತಾಯಿ ಚಂದ್ರಿಕಾ ಕರುಳಕುಡಿಯನ್ನು ರಕ್ಷಿಸಲು ನೀರಿಗೆ ಧುಮುಕಿದ್ದು ನೀರಿನ ಆಳಕ್ಕೆ ಸಿಲುಕಿ ತಾಯಿ ಮೃತಪಟ್ಟಳು. ದಡದಲ್ಲಿದ್ದ ಮತ್ತೊಬ್ಬಳು ಮಗಳು ಶಿಲ್ಪ (8) ತಕ್ಷ ಣ ಮನೆಗೆ ಹೋಗಿ ವಿಷಯ ತಿಳಿಸಿದ್ದು ಮನೆಯವರು ಬರುವ ವೇಳೆಗೆ ತಾಯಿ, ಮಗು ಮೃತಪಟ್ಟಿದ್ದರು.
ಸ್ಥಳಕ್ಕೆ ಬ್ರಹ್ಮಾವರ ಠಾಣಾಧಿಕಾರಿ ಮಧು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ. ಮಳುಗು ತಜ್ಞ ಮಂಜುನಾಥ ನಾಯ್ಕ್ ಅವರು ಮೃತದೇಹವನ್ನು ಹೊರ ತೆಗೆದಿದ್ದು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.