ಉಡುಪಿ: ಮಧ್ವನವಮಿ ಪ್ರಯುಕ್ತ ಉಡುಪಿ ಶ್ರೀಕೃಷ್ಣಮಠದ ವತಿಯಿಂದ ಜೋಡುಕಟ್ಟೆಯಿಂದ ಶ್ರೀಮಧ್ವಾಚಾರ್ಯರ ಪ್ರತಿಮೆಯನ್ನೊಳಗೊಂಡ ಆಕರ್ಷಕ ಮೆರವಣಿಗೆ ಪರ್ಯಾಯ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಭಾನುವಾರ ನಡೆಯಿತು.
ಮೆರವಣಿಗೆಯಲ್ಲಿ ವಿವಿಧ ಮಹಿಳಾ ಹಾಗೂ ಪುರುಷರ ಭಜನಾ ತಂಡಗಳು, ವಿವಿಧ ಮಂಗಳ ವಾದ್ಯಗಳು, ಛತ್ರಿಚಾಮರ, ವೇಷಭೂಷಣಗಳು, ಹಲವಾರು ಬಗೆಯ ಸ್ತಬ್ಧಚಿತ್ರಗಳು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದವು.
ಆಚಾರ್ಯ ಮಧ್ವರು ವಾಯುದೇವರ ಅವತಾರ ಎಂಬುದನ್ನು ಬಿಂಬಿಸುವ ಭೀಮ, ಆಚಾರ್ಯ ಮಧ್ವರು ಹಾಗೂ ಹನುಮಂತನ ಸ್ತಬ್ಧ ಚಿತ್ರಗಳು ಮನಸೂರೆಗೊಂಡವು.