ಉಡುಪಿ: ಉತ್ತರಾದಿಮಠದ ಶ್ರೀ ಸತ್ಯಪ್ರಮೋದತೀರ್ಥ ಸ್ವಾಮೀಜಿ ಜನ್ಮ ಶತಮಾನೋತ್ಸವದ ಅಂಗವಾಗಿ ತಮಿಳುನಾಡಿನ ಮೂಲ ಕ್ಷೇತ್ರ ತಿರುಕೋಯಿಲೂರಿನಿಂದ ಆರಂಭಗೊಂಡಿದ್ದ ಪಾದುಕಾ ರಥಯಾತ್ರೆ ಗುರುವಾರ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಸಮಾಪನಗೊಂಡಿತು.
ಬÜಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪರ್ಯಾಯ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಅಪಾರ ಪಾಂಡಿತ್ಯ, ತಪಸ್ಸು , ಅನೇಕ ಸಾಧನೆ ಹಾಗೂ ಶಾಸ್ತ್ರೀಯ ಮತ್ತು ಲೌಕಿಕ ಶಿಕ್ಷಣಕ್ಕೆ ಸಹಾಯ ಮಾಡಿದ ಶ್ರೀ ಸತ್ಯಪ್ರಮೋದ್ತೀರ್ಥ ಸ್ವಾಮೀಜಿ ಇತರೆಲ್ಲ ಮಠಾಧೀಶರಿಗೆ ಆದರ್ಶಪ್ರಾಯರು. ನಮ್ಮೊಂದಿಗೆ ಬಹಳ ಅನ್ಯೋನ್ಯ ಸಂಬಂಧ ಹೊಂದಿದ್ದ ಅವರು, ಅಷ್ಟ ಮಠಗಳೊಂದಿಗೆ ಕೊನೆಯವರೆಗೂ ನಿಕಟ ಸಂಪರ್ಕದಲ್ಲಿದ್ದರು ಎಂದು ಗುಣಗಾನ ಮಾಡಿದರು.
ಶ್ರೀರಾಮನ ಸ್ಥಾನದಲ್ಲಿ ಆರಂಭಗೊಂಡ ರಥಯಾತ್ರೆ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸಮಾಪ್ತಿ ಆಗುತ್ತಿರುವುದು ಹೆಮ್ಮೆಯ ವಿಚಾರ. ಸದ್ಯ ಶ್ರೀ ಸತ್ಯಪ್ರಮೋದತೀರ್ಥ ಸ್ವಾಮೀಜಿ ಅವರನ್ನು ದೇಶದೆಲ್ಲೆಡೆ ಸ್ಮರಿಸಿಕೊಳ್ಳುತ್ತಿದ್ದಾರೆ ಎಂದರು.
2017ರ ಜ. 10ರಂದು ಆರಂಭಗೊಂಡ ರಥಯಾತ್ರೆ ರಾಜ್ಯದ 118 ಊರುಗಳಿಗೆ ತೆರಳಿ ಧರ್ಮ ಪ್ರಚಾರದ ಕೆಲಸ ಮಾಡಿದೆ. ಈ ಸಂದರ್ಭ ಶ್ರೀ ಸತ್ಯ ಪ್ರಮೋದತೀರ್ಥ ಸ್ವಾಮೀಜಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ 15 ನಿಮಿಷಗಳ ವೀಡಿಯೋ ತುಣುಕನ್ನು ಪ್ರದರ್ಶಿಸಲಾಯಿತು.
ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ರಥಯಾತ್ರೆಯ ನೇತೃತ್ವ ವಹಿಸಿದ್ದ ಪಂಡಿತರಾದ ಆನಂದ ತೀರ್ಥ ಆಚಾರ್ಯ, ಮಣೀಂದ್ರ ಆಚಾರ್ಯ, ಜೀವಿ ಆಚಾರ್ಯ, ಕೃಷ್ಣಾಚಾರ್ಯ, ವೆಂಕಟೇಶ್ ಆಚಾರ್ಯ ಉಪಸ್ಥಿತರಿದ್ದರು.