ಉಡುಪಿ: ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಸಮನ್ವಯಗೊಳಿಸಿಕೊಂಡು ಪರಿಪೂರ್ಣರಾಗಬೇಕು ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಧಾರ್ಮಿಕ ಚಿಂತಕ ಎಲ್ಲೂರು ಸುಬ್ರಹ್ಮಣ್ಯ ರಾವ್ ಅವರ 'ಪುರುಷಾರ್ಥಗಳಲ್ಲಿ ಕೊನೆಯದು' ಕೃತಿಯನ್ನು ಶನಿವಾರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಇಂದು ನಮಗೆ ಅರ್ಥ ಹಾಗೂ ಕಾಮಗಳಲ್ಲಿಯೇ ಹೆಚ್ಚು ಆಸಕ್ತಿ ಉಂಟಾಗಿದೆ. ಧರ್ಮ ಹಾಗೂ ಮೋಕ್ಷ ಬೇಡವಾಗಿದೆ. ಧರ್ಮ ಹಣಕ್ಕಾಗಿ, ಹಣ ಸುಖಭೋಗಕ್ಕಾಗಿ ಎಂಬಂತಾಗಿದೆ. ಹೇಗೆ ವೃಕ್ಷವು ಚಿಗುರೆಲೆ, ಎಲೆ, ಹೂವು ಹಾಗೂ ಹಣ್ಣುಗಳಿಂದ ಪರಿಪೂರ್ಣವಾಗುತ್ತದೋ ಹಾಗೆಯೇ ಮಾನವರು ಕೂಡಾ ಚಿಗುರೆಲೆ ಎಂಬ ಕಾಮ, ಸುಖಭೋಗ ಎಂಬ ಎಲೆ, ಧರ್ಮ ಎಂಬ ಹೂವು ಹಾಗೂ ಹಣ್ಣು ಎಂಬ ಮೋಕ್ಷವನ್ನು ಪಡೆದು ಮುಕ್ತಿಯನ್ನು ಪಡೆಯುವಂತಾಗಬೇಕು ಎಂದು ಆಚಾರ್ಯ ಮಾಧ್ವರು ಭಾಗವತ ತಾತ್ಪರ್ಯದಲ್ಲಿ ತಿಳಿಸಿದ್ದಾರೆ ಎಂದ ಅವರು, ಇಂದು ನಾವು ಈ ಸಿದ್ಧಾಂತಕ್ಕೆ ಪೂರ್ತಿ ವಿರುದ್ಧವಾಗಿದ್ದೇವೆ. ಅರ್ಥ, ಕಾಮಗಳೇ ನಮಗೆ ಪ್ರಧಾನವಾಗಿವೆ. ಇದು ಸರಿಯಲ್ಲ, ಇವೆಲ್ಲ ಬೇಕು ನಿಜ, ಆದರೆ ಮೋಕ್ಷವೇ ಅಂತಿಮ ಗುರಿಯಾಗಿರಬೇಕು ಎಂದರು.
ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ದುಃಖದ ಲೇಶವಿಲ್ಲದ ಸುಖವೇ ಮೋಕ್ಷ ಎಂದು ಶಾಸ್ತ್ರ ಹೇಳುತ್ತದೆ. ಮುಕ್ತಿ ಮತ್ತು ಮೋಕ್ಷ ಬೇರೆ ಬೇರೆಯಲ್ಲ. ಮುಕ್ತಿ ಎಂದರೆ ನನ್ನದಲ್ಲದ ಸ್ಥಿತಿ. ನಾನು ನಾನಾಗಿ ಪರಿಪೂರ್ಣವಾಗಿ ನಿಲ್ಲಬೇಕು ಅದು ಮೋಕ್ಷ. ಅದಕ್ಕೆ ನಿರಂತರ ಸಾಧನೆ ಮಾಡಬೇಕು. ಸಂಸಾರ ಎಂದರೆ ಮತ್ತೆ ಮತ್ತೆ ಹುಟ್ಟು ಮತ್ತು ಸಾವುಗಳೆಂಬ ಬಂಧನವಾಗಿದೆ. ಇದರಿಂದ ಹೊರ ಬರುವ ಚಿಂತನೆ ಮಾಡಬೇಕು. ಇಲ್ಲಿ ಪುರುಷ ಎಂದರೆ ಗಂಡಸು ಎಂದರ್ಥವಲ್ಲ, ಬದಲಿಗೆ ಸಕಲ ಜೀವರು ಎಂದು ಆಚಾರ್ಯ ಮಧ್ವರು ತಿಳಿಸಿದ್ದಾರೆ ಎಂದರು.
ವಿದ್ವಾಂಸ ಪಡುಬಿದ್ರಿ ಶ್ರೀಧರ ಆಚಾರ್ಯ, ವೇ.ಮೂ. ಕದ್ರಿ ಪ್ರಭಾಕರ ಅಡಿಗ ಉಪಸ್ಥಿತರಿದ್ದರು. ವಿದ್ವಾಂಸ ಕೆ.ಎಲ್. ಕುಂಡಂತಾಯ ಕೃತಿ ಪರಿಚಯ ಮಾಡಿದರು. ಕೃತಿಕಾರ ಎಲ್ಲೂರು ಸುಬ್ರಹ್ಮಣ್ಯ ರಾವ್ ಪ್ರಾಸ್ತಾವಿಕ ಮಾತನಾಡಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.